ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜಾಗತಿಕವಾಗಿ ವ್ಯಾಪಿಸಿದ ಕೋವಿಡ್-19 ಸೋಂಕಿನಿಂದಾಗಿ ವಿವಿಧ ಸರಕುಗಳ ಉತ್ಪಾದನೆ ಮತ್ತು ಬೇಡಿಕೆಯ ಮೇಲೆ ತೀವ್ರ ಸ್ವರೂಪದ ಋಣಾತ್ಮಕ ಪರಿಣಾಮ ಉಂಟಾಗಿದೆ. ಭಾರತದ ವಿದೇಶಿ ವ್ಯಾಪಾರದಲ್ಲಿಯೂ ಕುಸಿತ ಕಂಡುಬಂದಿದೆ ಎಂದು ಬೆಂಗಳೂರು ಕ್ರೈಸ್ಟ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕಿ ಡಾ. ವರದುರ್ಗಾ ಭಟ್ ಅಭಿಪ್ರಾಯಪಟ್ಟರು.
ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಏರ್ಪಡಿಸಿದ್ದ ‘ಕೋವಿಡ್-19, ಅಂತರರಾಷ್ಟ್ರೀಯ ವ್ಯಾಪಾರ ಹಾಗೂ ಅಭಿವೃದ್ಧಿ: ಭಾರತದಲ್ಲಿನ ಸನ್ನಿವೇಶ’ ವಿಷಯದ ಕುರಿತು ರಾಜ್ಯಮಟ್ಟದ ವೆಬಿನಾರ್ನಲ್ಲಿ ಅವರು ವಿಷಯ ಮಂಡನೆ ಮಾಡಿದರು.
ಉದ್ಯಮಗಳ ನಿಲುಗಡೆ, ಉದ್ಯೋಗ ನಷ್ಟ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದೆ. ಆದರೆ ಈ ದುಸ್ಥಿತಿ ಮತ್ತು ಸಂಕಷ್ಟಗಳ ನಡುವೆಯೂ ಭಾರತದ ಆರ್ಥಿಕತೆಗೆ ಕೆಲವು ಹೊಸ ಅವಕಾಶಗಳು ಸೃಷ್ಟಿಯಾಗಿರುವುದನ್ನೂ ಕಾಣುತ್ತಿದ್ದೇವೆ ಎಂದು ಅವರು ಹೇಳಿದರು.
ವೆಬಿನಾರ್ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಸಂವಾದ ಕಾರ್ಯಕ್ರಮದಲ್ಲಿ ಮುಂದಿರಿಸಿದ ಪ್ರಶ್ನೆ ಹಾಗೂ ಸಂದೇಹಗಳಿಗೆ ಡಾ. ಭಟ್ ಪ್ರತಿಕ್ರಿಯಿಸಿದರು. ಬೈಂದೂರು ಕಾಲೇಜು ಅಲ್ಲದೆ ರಾಜ್ಯದ ವಿವಿಧ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ವೆಬಿನಾರ್ನಲ್ಲಿ ಪಾಲ್ಗೊಂಡಿದ್ದರು.
ಕಾಲೇಜಿನ ಪ್ರ್ರಾಂಶುಪಾಲ ಡಾ. ರಘು ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ವಿನೋದ್ ಬಸುಪಟ್ಟದ್ ಸ್ವಾಗತಿಸಿದರು. ವಿಭಾಗದ ಪ್ರಾಧ್ಯಾಪಕರಾದ ಡಾ. ಅಶ್ವತ್ಥ ನಾಯ್ಕ ಮತ್ತು ಡಾ. ಶಿವಕುಮಾರ ಇದ್ದರು.