ಕುಂದಾಪುರ: ಸಮುದ್ರದಲ್ಲಿ ಉಪ್ಪು ಹೇಗೆ ಬೆರೆತಿದೆಯೋ ಹಾಗೇ ನಾವು ಭಗವಂತನೊಂದಿಗೆ ಭಕ್ತಿಯ ಮೂಲಕ ಬೆರೆಯಬೇಕು. ಭಗವಂತನಿಗೆ ಹತ್ತಿರವಾಗುವುದು ಎಂದರೆ ಆತನಲ್ಲಿ ಲೀನವಾಗುವುದು ಎಂದರ್ಥ. ಪರಿಶುದ್ಧ ಭಾವನೆಯಿಂದ ಭಗವಂತನನ್ನು ನೆನೆದು ನಮ್ಮಲ್ಲಿರುವ ಕೆಡುಕನ್ನು ದೂರ ಮಾಡುವ ಮೂಲಕ ಆತನ ಕೃಪೆಗೆ ಪಾತ್ರರಾಗಬೇಕಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಅವರು ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನ ರಜತಮಹೋತ್ಸವದ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಕೃಪಾ ಭವನವನ್ನು ಉದ್ಘಾಟಿಸಿ ಮಾತನಾಡಿದರು.
ಸಹಬಾಳ್ವೆ, ಸಾಹಸ, ಕಠಿಣ ಕೆಲಸಕ್ಕೆ ಖಾರ್ವಿ ಸಮಾಜ ಹೆಸರಾಗಿದ್ದು ಒಗ್ಗಟ್ಟು, ಶ್ರಮ ಜೀವನ ಸಮಾಜಕ್ಕೆ ಮಾದರಿ. ಅತ್ಯಂತ ನಂಬಿಕೆ, ಪ್ರಾಮಾಣಿಕತೆ ಖಾರ್ವಿ ಸಮಾಜದ ಹೆಚ್ಚುಗಾರಿಕೆ. ಕಳೆದ ನಾಲ್ಕಾರು ದಶಕಗಳಲ್ಲಿ ಸಮಾಜ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ ಎಂದ ಅವರು ದುಡಿಮೆಗೆ ತಕ್ಕ ಪ್ರತಿಫಲ ಈಗ ಸಿಗುತ್ತಿದ್ದು ಹಿಂದಿನ ಕಷ್ಟದ ಬದುಕಿಗಿಂತ ಈಗಿನ ಜೀವನ ಸುಧಾರಣೆ ಕಾಣಲು ಸಾಧ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಬಸ್ರೂರು ಮಹಾಲಿಂಗೇಶ್ವರ ದೇವಳದ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ, ನಿವೃತ್ತ ಉಪನ್ಯಾಸಕ ಡಾ| ಎನ್. ವಿ. ನರಸಿಂಹಮೂರ್ತಿ, ದೇವಸ್ಥಾನದ ಅನುವಂಶೀಯ ಮೊಕ್ತೇಸರರಾದ ಶಂಕರ ನಾಯ್ಕ್, ಆನಂದ ನಾಯ್ಕ್, ದೇವಳದ ಅಧ್ಯಕ್ಷ ಜಯಾನಂದ ಖಾರ್ವಿ, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸಂದೀಪ ಖಾರ್ವಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶ್ರೀ ಮಹಾಕಾಳಿ ದೇವಳಕ್ಕೆ ಆಗಮಿಸಿದ ಹೆಗ್ಗಡೆಯವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಶ್ರೀ ಮಹಾಕಾಳಿ ದೇವಿ ಹಾಗೂ ಶ್ರೀ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಅವರು ಧಾರ್ಮಿಕ ಪ್ರವಚನ ನೀಡಿದರು.