ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಶ್ರಮ ವಹಿಸಿ ಶ್ರದ್ಧೆಯಿಂದ ಕೆಲಸ ಮಾಡಿದರೆ ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು ಎಂದು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಬೋಜೇಗೌಡ ತಿಳಿಸಿದರು
ಆಳ್ವಾಸ ತಾಂತ್ರಿಕ ಮಹಾವಿದ್ಯಾಲಯದ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪ್ರವೇಶಾತಿ ಕಾರ್ಯಕ್ರಮ – ಆಳ್ವಾಸ್ ಆಗಮನ ೨೦೨೧-೨೨ರ ಸರಣಿ ಕಾರ್ಯಕ್ರಮದ ಏಳನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣದಿಂದ ಇಂದು ಸಮಾಜದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಶಿಕ್ಷಣದ ನೆಲೆಯಲ್ಲಿ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಿದೆ. ಜೀವನದಲ್ಲಿ ಸಂಪ್ರದಾಯಿಕ ಶಿಕ್ಷಣದ ಜತೆಗೆ ಜೀವನ ಶಿಕ್ಷಣವನ್ನು ನಮ್ಮ ದಿನ ನಿತ್ಯದ ಅನುಭವದಿಂದ ಕಲಿಯುವುದು ಮುಖ್ಯ. ದುರಾದೃಷ್ಟವಶಾತ್, ಮನುಷ್ಯ ಇಂದು ಬುದ್ದಿವಂತನಾದಂತೆ ಸಂಬಂಧಗಳು ಸಹಕಾರ ಗುಣ, ಅನ್ಯೋನ್ಯತೆಯ ಭಾವಗಳು ನಮ್ಮಲ್ಲಿ ಕ್ಷೀಣಿಸುತ್ತಾ ಸಾಗಿದೆ. ಪ್ರೀತಿ ವಾತ್ಸಲ್ಯ ನಮ್ಮ ನಡುವೆ ಉಳಿದಿಲ್ಲ. ಬುದ್ದಿಯಿಂದ ಹಣವನ್ನು ಸಂಪಾದಿಸಬಹುದೇ ಹೊರತು, ಹಣದಿಂದ ಬುದ್ದಿಯನ್ನು ಸಂಪಾದಿಸಲು ಸಾಧ್ಯವಿಲ್ಲ ಎಂಬ ಸತ್ಯವನ್ನು ನಾವೆಲ್ಲ ಅರಿಯಬೇಕು. ಮನುಷ್ಯತ್ವವನ್ನು ಕಳೆದುಕೊಂಡು ಎಷ್ಟೂ ವಿದ್ಯೆಯನ್ನು ಸಂಪಾದಿಸಿದರೂ ಅಪ್ರಯೋಜಕ ಎಂದರು.
ರಾಷ್ಟ್ರೀಯ ಶಿಕ್ಷಣ ನೀತಿ ಒಂದು ಐತಿಹಾಸಿಕ ಹೆಜ್ಜೆ. ಆದರೆ ಅದರ ಸಾಧಕ ಭಾದಕಗಳನ್ನು ಎಲ್ಲಾ ಆಯಾಮದಿಂದ ಮನಗಂಡು, ಚರ್ಚಿಸಿ ಕಾರ್ಯರೂಪಕ್ಕೆ ತಂದರೆ ಉತ್ತಮ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಪ್ರತಿ ವರ್ಷ ನಡೆಯುವ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಹಬ್ಬ- ಆಳ್ವಾಸ್ ನುಡಿಸಿರಿ- ಮಕ್ಕಳಿಗೆ ಸರ್ವ ಶಿಕ್ಷಣವನ್ನು ನೀಡುವ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಭರತ ಖಂಡದಲ್ಲೆ ಅನುಕರಣನೀಯ ಎಂದರು.
ಕಾರ್ಯಕ್ರದಲ್ಲಿ ಉಪಸ್ಥಿತರಿದ್ದ ತಾಂತ್ರಿಕ ಮಹಾವಿದ್ಯಾಲಯದ ಪ್ರಾಚಾರ್ಯ ಡಾ ಪೀಟರ್ ಫೆರ್ನಾಂಡೀಸ್ ಮಾತನಾಡಿ, ಶಿಸ್ತು, ಸಂಯಮ, ಕಾರ್ಯ ತತ್ಪರತೆ, ಮಾನವೀಯ ಮೌಲ್ಯಗಳು ವಿದ್ಯಾರ್ಥಿ ದೆಸೆಯಲ್ಲೆ ಬೆಳೆಸಿಕೊಂಡರೆ, ಉತ್ತಮ ಭವಿಷ್ಯ ನಿರ್ಮಾಣವಾಗಲು ಸಾಧ್ಯ. ಭೂಮಿ ತನ್ನ ಕಾರ್ಯವನ್ನು ಒಂದು ಕ್ಷಣವು ತಪ್ಪದೆ ಮಾಡುತ್ತಿರುತ್ತದೆ. ಕಾರ್ಯ ತತ್ಪರತೆ ಹಾಗೂ ಪರಿಪೂರ್ಣತೆಗೆ ಭೂಮಿಗಿಂತ ಉತ್ತಮ ನಿದರ್ಶನವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಗಣಕ ಯಂತ್ರ ವಿಭಾಗದ ಸಹಪ್ರಾಧ್ಯಾಪಕ ವಾಸುದೇವ ಶಹಾಪುರ್ ಕಾರ್ಯಕ್ರಮವನ್ನು ನಿರೂಪಿಸಿದರು.