ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾಲೇಜು ಅವಧಿಯಲ್ಲಿ ಹೆಚ್ಚುವರಿ ಸರಕಾರಿ ಬಸ್ ಸೌಲಭ್ಯ ಒದಗಿಸುವಂತೆ ಬೈಂದೂರು ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಯಿಂದ ಕುಂದಾಪುರ ಡಿಪೋ ವ್ಯವಸ್ಥಾಪಕರಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು.
ಪ್ರತಿನಿತ್ಯ ಬೈಂದೂರಿನಿಂದ ಕುಂದಾಪುರದ ತನಕ ವಿವಿಧ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಸರಕಾರಿ ಬಸ್ಸಿನಲ್ಲಿ ಸ್ಥಳಾವಕಾಶ ಸಿಗದೇ ಪುಟ್ ಬೋರ್ಡ್ ಮೇಲೆಗೆ ನಿಂತು ಪ್ರಯಾಣಿಸುತ್ತಿರುವುದನ್ನು ನೋಡುತ್ತಿದ್ದೇವೆ. ಇದು ಅತ್ಯಂತ ಅಪಾಯಕಾರಿ ಆದರೆ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಶಾಲಾ ಕಾಲೇಜಿಗೆ ತೆರಳುವುದು ಅನಿವಾರ್ಯವಾಗಿದೆ. ಆದ್ದರಿಂದ ಈ ಅವಧಿಯಲ್ಲಿ ಬೈಂದೂರಿನಿಂದ ಕುಂದಾಪುರಕ್ಕೆ ಹೆಚ್ಚುವರಿ ಸರಕಾರಿ ಬಸ್ಸುಗಳನ್ನು ಓಡಿಸಬೇಕು. ಇಲ್ಲವಾದಲ್ಲಿ ವಿದಾರ್ಥಿಗಳು ಅಪಾಯಕಾರಿ ಸ್ಥಿತಿಯಲ್ಲಿ ತೆರಳುವ ಸರಕಾರಿ ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭ ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ್ ಪೂಜಾರಿ ಉಪ್ಪುಂದ, ಯುವ ಕಾಂಗ್ರೆಸ್ ನಾಯಕರಾದ ಉದಯ್ ಪೂಜಾರಿ, ವಸಂತ ಉಪ್ಪುಂದ, ಸಂತೋಷ ಹೊಸ್ಕೊಟೆ, ಸುಬ್ರಹ್ಮಣ್ಯ ದೇವಾಡಿಗ, ಸಚಿನ್ ಹೊಸ್ಕೋಟೆ ಹಾಜರಿದ್ದರು.