ಬಿ. ರಾಘವೇಂದ್ರ ಪೈ
ಗಂಗೊಳ್ಳಿ : ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ಪ್ರತಿಯೊಬ್ಬರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಅನೇಕ ಸಂಘ ಸಂಸ್ಥೆಗಳು ವಿವಿಧ ಇಲಾಖೆಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರೂ ಅನೇಕ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಅವಕಾಶ ದೊರೆಯುತ್ತಿಲ್ಲ. ಕಲಾವಿದ ಆರ್ಥಿಕ ಸ್ಥಿತಿವಂತನಾಗಿದ್ದರೆ ಮಾತ್ರ ಆತನ ಕಲೆಗೆ ಹೆಚ್ಚಿನ ಪ್ರೋತ್ಸಾಹ, ಸಹಕಾರ ದೊರೆಯುತ್ತಿರುತ್ತದೆ ಎಂಬ ಮಾತುಗಳಿಗೆ ಇಂಬು ನೀಡುವಂತಿದೆ ಗಂಗೊಳ್ಳಿ ಸಮೀಪದ ಗುಜ್ಜಾಡಿಯ ಕಲಾವಿದನೊಬ್ಬನ ಕಲಾ ಬದುಕು.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗುಜ್ಜಾಡಿ ಎಂಬ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿರುವ ದಿ. ಚಂದ್ರ ಆಚಾರಿ ಮತ್ತು ಸುಶೀಲಾ ಆಚಾರಿ ದಂಪತಿಯ ಪುತ್ರ ಮಂಜುನಾಥ ಆಚಾರಿ (36) ಎಂಬಾತ ಕಲಿತದ್ದು 7ನೇ ತರಗತಿ ಮಾತ್ರ. ಆದರೆ ಈತನಲ್ಲಿರುವ ಪ್ರತಿಭೆ ಮಾತ್ರ ಅತ್ಯದ್ಬುತವಾದದ್ದು. ವಿವಿಧ ರೀತಿಯ ಕೈಚಳಕ, ಕಲೆಗಳನ್ನು ಕರಗತ ಮಾಡಿಕೊಂಡಿರುವ ಅದೆಷ್ಟೋ ಕಲಾವಿದರು ನಮ್ಮ ಮುಂದೆ ಇದ್ದರೂ ಕಡಿಮೆ ಶಿಕ್ಷಣ ಪಡೆದುಕೊಂಡ ಮಂಜುನಾಥನ ಕಲಾ ಸಾಧನೆ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದೆ. ಈತ ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಅಕ್ಷರಗಳನ್ನು, ವಾಕ್ಯಗಳನ್ನು ಮತ್ತು ಶಬ್ದಗಳನ್ನು ಉಲ್ಟಾ ಬರೆಯುತ್ತಾನೆ. ಈತ ಬರೆದಿರುವ ಅಕ್ಷರಗಳನ್ನು ಕನ್ನಡಿಯ ಮುಂದೆ ಹಿಡಿದು ನೋಡಿದರೆ ಈತ ಬರೆದಿರುವುದು ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ. ಯಾವುದೇ ಅಂಜಿಕೆ ಇಲ್ಲದೆ ಕೈಯಲ್ಲಿ ಪೆನ್ನು, ಪೆನ್ಸಿಲ್ ಹಿಡಿದು ಹೇಳಿದ ಯಾವುದೇ ಶಬ್ದ ಅಥವಾ ಹೆಸರುಗಳನ್ನು ಮೂರು ಭಾಷೆಗಳಲ್ಲಿ ನಿರರ್ಗಳವಾಗಿ ಉಲ್ಟಾ ಬರೆದು ತೋರಿಸುವ ಈತನ ಕಲೆಯನ್ನು ಈವರೆಗೆ ಯಾರೂ ಗುರುತಿಸಿಲ್ಲ ಎಂಬುದು ವಿಪರ್ಯಾಸದ ಸಂಗತಿ. (ಕುಂದಾಪ್ರ ಡಾಟ್ ಕಾಂ)
ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಈತನಿಗೆ ತಾಯಿ, ಓರ್ವ ಸಹೋದರ ಮತ್ತು ಇಬ್ಬರು ಸಹೋದರಿಯಿದ್ದಾರೆ. ಮನೆಯಲ್ಲಿನ ಕಿತ್ತು ತಿನ್ನುವ ಬಡತನ ಇವರ ಶಿಕ್ಷಣಕ್ಕೆ ಅಡ್ಡಿಯಾಯಿತು. ಇಲೆಕ್ಟ್ರಿಶಿನ್ ಸಹಾಯಕನಾಗಿ ಕೆಲಸ ಮಾಡುತ್ತಿರುವ ಈತನಲ್ಲಿ ಹುದುಗಿರುವ ಈ ಕಲೆಯನ್ನು ನೋಡಿ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಕಿತ್ತು ತಿನ್ನುವ ಬಡತನದ ಮಧ್ಯೆ ಇಂತಹ ಅದ್ಭುತ ಕಲಾವಿದ ಅರಳಿದ್ದರೂ ಈತನ ಈ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸುವವರ ಸಂಖ್ಯೆ ಬಹಳ ವಿರಳವಾಗಿದೆ. ಈತ ಬರೆಯುವುದನ್ನು ನೋಡಿ ಶಬ್ಬಾಸ್ ಎಂದು ಹೇಳಿದರಷ್ಟೇ ಸಾಲದು, ಈತನಲ್ಲಿರುವ ಕಲೆಯನ್ನು ಬೆಳೆಸಲು ಅಗತ್ಯವಿರುವ ಸಹಕಾರ ಪ್ರೋತ್ಸಾಹ ಬೇಕಾಗಿದೆ. (ಕುಂದಾಪ್ರ ಡಾಟ್ ಕಾಂ)
ನನ್ನಲ್ಲಿ ಇಂತಹ ಕಲೆಯಿದೆ ಎಂದು ಎಲ್ಲಿಯೂ ಹೇಳಿಕೊಳ್ಳದ ಮಂಜುನಾಥ ಮಿತಭಾಷಿ. ಕೇಳಿದರೆ ಮಾತ್ರ ಹೇಳುವ ನಗುಮುಖದ ಸ್ವಭಾವ ಹೊಂದಿರುವ ಈತ ತನ್ನ ಕುಟುಂಬ ಸಂಸಾರದ ಬಂಡಿ ಸಾಗಿಸಲು ಕಷ್ಟಪಡುತ್ತಿದ್ದಾನೆ. ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಈತ ತನ್ನ ಕಲೆಯನ್ನು ಇತರರಿಗೆ ತಿಳಿಸಿ ಆ ಕಲೆಯ ಮೂಲಕ ತಾನು ಏನನ್ನಾದರೂ ಸಾಧಿಸಬೇಕೆಂಬ ಛಲ ಹಂಬ ಹೊಂದಿದ್ದಾನೆ. ಈತನ ಆಸೆಗೆ ಒತ್ತಾಸೆಯಾಗುವ, ಈತನ ಕಲೆಯನ್ನು ಪ್ರೋತ್ಸಾಹಿಸುವ ಕಲಾವಿದರ, ದಾನಿಗಳ ಸಹಾಯ ಸಹಕಾರ ದೊರೆತರೆ ಈತನ ಮುಂದೊಂದು ದಿನ ಅದ್ಭುತ ಕಲಾವಿದನಾಗುವುದರಲ್ಲಿ ಎರಡು ಮಾತಿಲ್ಲ. (ಕುಂದಾಪ್ರ ಡಾಟ್ ಕಾಂ)