ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ತಾರಾಪತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಟ್ರಾಕ್ಸೂಟ್ ಉಚಿತ ವಿತರಣೆ ಹಾಗೂ ಚದುರಂಗ ತರಗತಿ ಉದ್ಘಾಟನಾ ಸಮಾರಂಭ ಗುರುವಾರ ಜರುಗಿತು.
ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಕೃಷ್ಣ ಖಾರ್ವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ವಿದ್ಯಾರ್ಥಿಗಳಿಗೆ ಉಚಿತವಾಗಿ 150 ಟ್ರಾಕ್ಸೂಟ್ಗಳನ್ನು ನೀಡಿದ ಶಾಲೆಯ ಹಳೆ ವಿದ್ಯಾರ್ಥಿ, ಕೇಂದ್ರ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರದ ಸದಸ್ಯ ಯೋಗೇಶ್ ಕುಮಾರ್ ಪರವಾಗಿ, ಅವರ ತಾಯಿ ವೆಂಕಮ್ಮ ಅವರನ್ನು ಸನ್ಮಾನಿಸಲಾಯಿತು.
ನಮ್ಮ ಶಾಲೆಯ ಮಕ್ಕಳಿಗೆ ಚೇಸ್ ತರಬೇತಿಯನ್ನು ಉಚಿತವಾಗಿ ನೀಡಲಿರುವ ನಮ್ಮ ಶಾಲೆಯ ಹಳೆ ವಿದ್ಯಾರ್ಥಿ ಬಾಬು ಜೆ. ಪೂಜಾರಿ, ದಾನಿಗಳಾದ ವಾಸುದೇವ ಪೂಜಾರಿ, ಶೇಖರ ಪೂಜಾರಿ ಉಪ್ಪುಂದ, ಹರೀಶ್ ಪೂಜಾರಿ, ಗೋಪಾಲ ಮಲ್ಯ, ಭಾಸ್ಕರ ಕೋಣನಮನೆ, ನಿವೃತ್ತ ಮುಖ್ಯ ಶಿಕ್ಷಕ ಆನಂದ ಅವರು ಶುಭ ಹಾರೈಸಿದರು.
ಪ್ರಭಾರ ಮುಖ್ಯ ಶಿಕ್ಷಕರಾದ ಸುಬ್ರಹ್ಮಣ್ಯ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಟಿಜಿಟಿ ಶಿಕ್ಷಕ ದಿನಕರ ಜಿ. ಅವರು ವಂದಿಸಿದರು.
ಜಿಪಿಟಿ ಶಿಕ್ಷಕ ಸಂದೀಪ್ ನಾಯ್ಕ್ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕಿಯರಾದ ಕಾವೇರಿ, ಮಾಲತಿ ಮರಾಠಿ, ಗೌರವ ಶಿಕ್ಷಕಿಯರು ಕಾರ್ಯಕ್ರಮಕ್ಕೆ ಸಹಕರಿಸಿದರು.