ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ನಮ್ಮ ಹಿರಿಯರ ಜೀವನ ತಳಹದಿ, ಅವರ ಆದರ್ಶ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಹೆಸರು ಉಳಿಸುವ ಜತೆಗೆ ಮುಂದಿನ ಪೀಳಿಗೆಗೆ ತಿಳಿ ಹೇಳುವ ಕಾಯಕ ಸಾರ್ಥಕ್ಯ ಕಂಡ ಕ್ಷಣಗಳಿಗೆ ವೇದಿಕೆ ಕಲ್ಪಿಸಿದೆ. ವಾಸುದೇವ ನಾಯಕ್ ಎಂದರೆ ನನ್ನಗೆ ಆ ಕಾಲದಲ್ಲಿ ಅನ್ನ ಅರಿವೆ, ಆಸರೆ ನೀಡಿದ ಮಹಾಶಕ್ತಿ ಶಾಶ್ವತವಾಗಿ ನೆನಪುಳಿಯುವಂತ ವ್ಯಕ್ತಿಯಾಗಿದ್ದಾರೆ, ಕಷ್ಟದಲ್ಲಿರುವರಿಗೆ ನೆರವು ನೀಡುವ ಅವರ ಮನಸ್ಥಿತಿ ಮಸ್ತಕದಲ್ಲಿ ಸದಾ ಚಿರಸ್ಥಾಯಿಯಾಗಿ ಉಳಿದುಕೊಂಡಿದೆ. ಅಂತವರ ಹೆಸರನ್ನು ಉಳಿಸುವ ಪಂಚವರ್ಣ ಸಂಘಟನೆ ಸಮಾಜಮುಖಿ ಕಾರ್ಯಚಟುವಟಿಕೆಗಳು ಇನ್ನಷ್ಟು ಗಟ್ಟಿಗೊಳಿಸುವಂತೆ ಮಾಡಿದೆ ಎಂದು ಉಡುಪಿ – ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಕೋಟದ ಮಹತೋಭಾರ ಹಿರೇಮಹಾಲಿಂಗೇಶ್ವರ ದೇಗುಲದ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ಕೋಟದ ಪಂಚವರ್ಣ ಸಂಘಟನೆಯ ಸಹಕಾರದೊಂದಿಗೆ ನಡೆದ ಕೋಟದ ರಾಘವ ನಾಯಕ್ ಸಹೋದರರ ವತಿಯಿಂದ ಅವರ ತಂದೆ ಕೋಟ ವಾಸುದೇವ ನಾಯಕ್ ಸ್ಮರಣಾರ್ಥ ನಿರ್ಮಾಣಗೊಂಡ ಸಾರ್ವಜನಿಕರಿಗೆ ಅನುಕೂಲ ಸೃಷ್ಠಿಸುವ ತಂಗುದಾಣವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಇದೇ ವೇಳೆ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ದೀಪ ಬೆಳಗಿಸಿದರು. ಕೋಟ ಅಮೃತೇಶ್ವರಿದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ. ಕುಂದರ್ ತಂಗುದಾಣ ಸಮೀಪ ಗಿಡ ನೆಟ್ಟು ಶುಭಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಸುದೇವ ನಾಯಕ್ ಪುತ್ರ ರಾಘವ ನಾಯಕ್ ವಹಿಸಿದ್ದರು.
ಕೋಟ ಗ್ರಾ.ಪಂ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ, ವಾಸುದೇವ ನಾಯಕ್ ಪುತ್ರ ರಘುರಾಮ್ ನಾಯಕ್, ವತ್ಸಲ ರಾಧಕೃಷ್ಣ ನಾಯಕ್, ಕೋಟ ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಜಿ.ಎಸ್.ಬಿ. ಮುಖಂಡರಾದ ರಮೇಶ್ ಪಡಿಯಾರ್, ಶ್ರೀಕಾಂತ್ ಶೆಣೈ, ಸತೀಶ್ ಜಿ. ಹೆಗ್ಡೆ, ರಮೇಶ್ ಹೆಗ್ಡೆ, ವೆಂಕಟೇಶ ಹೆಗ್ಡೆ, ಗೌತಮ್ ಶೆಣೈ, ಕೋಟ ಗ್ರಾಮಪಂಚಾಯತ್ ಸದಸ್ಯರಾದ ಅಜಿತ್ ದೇವಾಡಿಗ, ಸಂತೋಷ್ ಪ್ರಭು, ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಸದಾನಂದ ಪೂಜಾರಿ, ಭಗತ್ ಸಿಂಗ್ ಯುವ ವೇದಿಕೆ ಅಧ್ಯಕ್ಷ ಪ್ರಸಾದ್ ಬಿಲ್ಲವ, ಪಂಚವರ್ಣದ ಕಾರ್ಯಾಧ್ಯಕ್ಷ ಶಶಿಧರ ತಿಂಗಳಾಯ, ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಉಪಸ್ಥಿತರಿದ್ದರು.
ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ವಂದಿಸಿ ಸಂಯೋಜಿಸಿದರು.