ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗ ಹಾಗೂ ಐಟಿ ಎಸೋಸಿಯೇಷನ್ ನ ಜಂಟಿ ಆಶ್ರಯದಲ್ಲಿ ಸೈಬರ್ ಸೆಕ್ಯೂರಿಟಿಯಲ್ಲಿ ಎಐ ಬಳಕೆ ಕುರಿತು ಕಾಲೇಜಿನ ಮೂಕಾಂಬಿಕ ಸಭಾಂಗಣದಲ್ಲಿ ಬಿಸಿಎ ವಿಭಾಗದ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಆಯೋಜಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಮಣಿಪಾಲ ಎಂಐಟಿಯ ಎಲೆಕ್ಟ್ರಾನಿಕ್ ಹಾಗೂ ಕಮ್ಯುನಿಕೇಷನ್ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ಯಶವಂತ್ ಎನ್. ಅವರು ಮಾತನಾಡಿ, ವರ್ತಮಾನ ಕಾಲಘಟ್ಟದಲ್ಲಿ ಸಮಾಜದಲ್ಲಿ ನಡೆಯುವ ಅದೆಷ್ಟೋ ವಂಚನೆಗಳನ್ನು ಭವಿಷ್ಯದಲ್ಲಿ ಎಐ ಮೂಲಕ ಸಮರ್ಥವಾಗಿ ಕಂಡುಹಿಡಿದು ಸಾಮಾಜಿಕ ಭದ್ರತೆ ಕಾಪಾಡಬಹುದು ಎಂದರು.
ಕಾಲೇಜಿನ ಉಪ ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಕಾಲಮಾನಕ್ಕೆ ತಕ್ಕಂತೆ ಕಾಲೇಜಿನ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸೈನ್ಸ್ ಜೊತೆ ಸೈಬರ್ ಸೆಕ್ಯೂರಿಟಿ ಮತ್ತು ಎಐ ಬೋಧಿಸಲಾಗುತ್ತಿದೆ. ಜೊತೆಗೆ ನಿರಂತರವಾಗಿ ಇಂತಹ ವಿಶೇಷ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದರು.
ಗಣಕವಿಜ್ಞಾನ ವಿಭಾಗದ ಮುಖ್ಯಸ್ಥರಾದ ಮಹೇಶ್ ಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮ ಸಂಯೋಜಕರಾದ ಗಣಕಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಜಯಲಕ್ಷ್ಮಿ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿ, ರಶ್ಮಿ ಗಾವಡಿ ಸ್ವಾಗತಿಸಿದರು. ಐಟಿ ಅಸೋಸಿಯೇಷನ್ ಸಂಯೋಜಕರಾದ ಪವಿತ್ರಾ ಶೆಟ್ಟಿ ವಂದಿಸಿದರು. ಗಣಕಶಾಸ್ತ್ರ ಪ್ರಾಧ್ಯಾಪಕರಾದ ಪ್ರಣಮ್ ಆರ್ ಕಾರ್ಯಕ್ರಮವನ್ನು ನಿರೂಪಿಸಿದರು.
ವಿಭಾಗದ ಇತರ ಪ್ರಾಧ್ಯಾಪಕರು ಉಪಸ್ಥಿತರಿದ್ದ, ಈ ವಿಚಾರ ಸಂಕೀರ್ಣದಲ್ಲಿ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯೂರಿಟಿಯಲ್ಲಿ ಕೃತಕಬುದ್ಧಿಮತ್ತೆಯ ಸದ್ಭಳಕೆಯ ಕುರಿತು ಸಂಪೂರ್ಣ ಮಾಹಿತಿ ನೀಡಲಾಯಿತು.