ಮೂಡುಬಿದಿರೆ: ನುಡಿಸಿರಿ ಎಂದರೆ ಸಾಕು ಕಲೆ, ಸಾಹಿತ್ತಿಕ, ಸಾಂಸ್ಕೃತಿಕ ವಿಚಾರಗಳು ಕಣ್ಮುಂದೆ ಹಾದುಹೋಗುತ್ತವೆ. ಮೂರುದಿನಗಳ ಕಾರ್ಯಕ್ರಮದಲ್ಲಿ ಹತ್ತಾರು ವಿಚಾರಗಳು ಚರ್ಚೆಗೆ ಬರುವುದರೊಂದಿಗೆ ಆಯಾ ವರ್ಷದ ಪರಿಕಲ್ಪನೆಗೊಂದು ಸ್ಪಷ್ಟ ರೂಪು ನೀಡುವ ಪ್ರಯತ್ನ 12 ವರ್ಷಗಳಿಂದಲೂ ನಡೆದು ಬಂದಿದೆ. ಬೆಳೆಗ್ಗೆ 5:30ರ ಉದಯರಾಗದಿಂದ ಆರಂಭಗೊಳ್ಳುವ ಕಾರ್ಯಕ್ರಮ ಸರಣಿ ವಿಚಾರಗೋಷ್ಠಿ, ವಿಶೇಷೋಪನ್ಯಾಸ, ಕವಿಸಮಯ-ಕವಿನಮನ, ಸಂಸ್ಮರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಲಕ ಭರಪೂರ ಸಾಹಿತ್ತಿಕ ಸಾಂಸ್ಕೃತಿಕ ರಸದೌತಣವನ್ನು ನೀಡುತ್ತದೆ. ಏಕಕಾಲದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ರಸದೌತಣವನ್ನು ನೀಡಲು ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರ, ಶ್ರೀಮತಿ ಜಯಲಕ್ಷ್ಮೀ ಆಳ್ವ ವೇದಿಕೆ, ಬಿ.ವಿ. ಕಾರಂತ ವೇದಿಕೆ, ಕೆ.ಎನ್. ಟೈಲರ್ ವೇದಿಕೆ, ಮಾ| ವಿಠಲ ಶೆಟ್ಟಿ ವೇದಿಕೆ-ಡಾ| ವಿ.ಎಸ್. ಆಚಾರ್ಯ ಸಭಾಭವನ, ಕು.ಶಿ. ಹರಿದಾಸ ಭಟ್ಟ ವೇದಿಕೆ ಸೇರಿ ಒಟ್ಟು 8 ವೇದಿಕೆಗಳು ತೆರೆದುಕೊಂದಿದೆ.
ಈ ಭಾರಿಯ ಸಮ್ಮೇಳನದ ಮೂರು ದಿನಗಳ ಕಾಲ ಕೃಷಿಗೆ ಸಂಬಂಧಿಸಿದ 100ಕ್ಕೂ ಹೆಚ್ಚು ಮಳಿಗೆಗಳು, 250ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು, ವೈವಿಧ್ಯಮಯ ದೇಶೀ ಆಹಾರ ಖಾದ್ಯ ಮಳಿಗೆಗಳಿವೆ. ಪುಷ್ಟ ಪ್ರದರ್ಶನ, ಚಿತ್ರಕಲಾ ಪ್ರದರ್ಶನ, ಶಕ್ತಿ ಪ್ರದರ್ಶನ, ಕುದುರೆ, ಒಂಟೆ ಸವಾರಿ, ಗಾಯನ ಕಲಾವಿದರು, ಕೀರ್ತನ ಕಲಾವಿದರು, ಗೊಂಬೆಗಳು ಸೇರಿದಂತೆ ದಿನವಿಡಿ ಆಳ್ವಾಸ್ ಕ್ಯಾಂಪಸ್ ಸುತ್ತಲಿನ ಕಲಾ ಸಾಂಸ್ಕೃತಿಕ ತಂಡಗಳ ವೈವಿಧ್ಯಮಯ ಪ್ರದರ್ಶನ ಮನೋವಿಲಾಸವನ್ನು ನೀಡುತ್ತವೆ.