ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ವಿಶ್ವ ಜೇನುನೊಣ ದಿನಾಚರಣೆಯ ಅಂಗವಾಗಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ (ಸ್ವಾಯತ್ತ) ಸ್ನಾತಕೋತ್ತರ ಪ್ರಾಣಿಶಾಸ್ತ್ರ ವಿಭಾಗದ ‘ಜೇನುನೊಣ ಕೃಷಿ’ ಸರ್ಟಿಫಿಕೇಟ್ ಕೋರ್ಸ್ನ ವಿದ್ಯಾರ್ಥಿಗಳು ಜೇನುಸಾಕಣೆಯ ಪ್ರಾಯೋಗಿಕ ತರಬೇತಿಗಾಗಿ ಸಂಪಿಗೆ ಬಳಿಯ ಜೇನುಸಾಕಣೆ ಘಟಕಕ್ಕೆ ಭೇಟಿ ನೀಡಿದರು.
ಸಂಪಿಗೆಯ ರೋಶು’ಸ್ ಹನಿ ಫಾರ್ಮ್ನ, ಅನುಭವಿ ಜೇನುಸಾಕಣೆದಾರ ಮತ್ತು ತರಬೇತುದಾರ ರೋಶನ್ ಲಾರೆನ್ಸ್ ಫೆರ್ನಾಂಡಿಸ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಪ್ರಕೃತಿಯಲ್ಲಿ ಮನುಷ್ಯನಿಲ್ಲವಾದರೂ ಭೂಮಿ ಉಳಿದಿತು ಆದರೆ ಜೇನುನೊಣಗಳಿಲ್ಲದೆ ಭೂಮಿಯನ್ನು ಊಹಿಸಲು ಸಾಧ್ಯವಿಲ್ಲ. ಪ್ರಕೃತಿಯಲ್ಲಾಗುವ ಶೇಕಡಾ 80 ಪರಾಗಸ್ಪರ್ಶ ಜೇನುನೊಣಗಳಿಂದ ನಡೆಯುತ್ತದೆ. ಆದ್ದರಿಂದ ಭೂಮಿಯ ಮೇಲೆ ಜೇನು ಜಾತಿಯೇ ಶ್ರೇಷ್ಠ ಜಾತಿ ಎಂದರು.ಅವರು ಜೇನುನೊಣಗಳ ಸಾಕಣೆ, ಜೇನುನೊಣ ಘಟಕದ ಸ್ಥಾಪನೆ, ಗಂಡು ಮತ್ತು ಹೆಣ್ಣು ಜೇನುನೊಣಗಳ ನಡುವಿನ ವ್ಯತ್ಯಾಸ, ಅವುಗಳ ಜೀವಿತಾವಧಿ ಮತ್ತು ಜೇನುಸಾಕಣೆಯ ಅಗತ್ಯ ಅಂಶಗಳಾದ ಜೇನುಸಾಕಣೆ ಪೆಟ್ಟಿಗೆ, ಪ್ರವೇಶ ದ್ವಾರ ಕಡಿತಗೊಳಿಸುವ ಸಾಧನ ಇತ್ಯಾದಿಗಳ ಬಗ್ಗೆ ಆಳವಾದ ಒಳನೋಟಗಳನ್ನು ಒದಗಿಸಿದರು.
ವಿದ್ಯಾರ್ಥಿಗಳು ಜೇನು ತೆಗೆಯುವ ಪ್ರಕ್ರಿಯೆಯನ್ನು ಕೈಯಿಂದ ತಯಾರಿಸಿದ ಜೇನುತುಪ್ಪ ತೆಗೆಯುವ ಯಂತ್ರವನ್ನು ಬಳಸಿ ವೀಕ್ಷಿಸಿದರು. ಜೇನು ಗೂಡುಗಳು ಮತ್ತು ಜೇನುಕುಟುಂಬ ಖರೀದಿಸುವ ಬಗ್ಗೆ ಮಾರ್ಗದರ್ಶನವನ್ನು ಸಹ ನೀಡಲಾಯಿತು.
ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ರಶ್ಮಿ, ಉಪನ್ಯಾಸಕರಾದ ಮಾನಸ ಭಟ್, ಮನು ಡಿ. ಎಲ್., ರಶ್ಮಿತಾ ಅಮೀನ್, ವಿನೇಶ್ ಪೂಜಾರಿ ಇದ್ದರು.
ಜೇನುಸಾಕಣೆ ವೃತ್ತಿಯನ್ನು ಪ್ರಾರಂಭಿಸಲು ಹೆಚ್ಚಿನ ಬಂಡವಾಳವೂ ಅಗತ್ಯವಿಲ್ಲ. ಪ್ರಾಥಮಿಕವಾಗಿ 2-3 ಪೆಟ್ಟಿಗೆಯ ಮೂಲಕ ಆರಂಭಿಸಿ, ಕ್ರಮೇಣ ಅನುಭವದ ಆಧಾರದ ಮೇಲೆ ಘಟಕವನ್ನು ವಿಸ್ತರಿಸಬಹುದು. ಸರ್ಕಾರದಿಂದಲೂ ಸಹ ಹಲವಾರು ತರಬೇತಿ ಶಿಬಿರಗಳು, ಅನುದಾನಗಳು ಮತ್ತು ಬ್ಯಾಂಕ್ ಸಾಲ ಸೌಲಭ್ಯಗಳು ಲಭ್ಯವಿವೆ. ಜೇನುಸಾಕಣೆಯ ತರಬೇತಿ ಪಡೆದವರು ಈ ಕ್ಷೇತ್ರದಲ್ಲಿ ಉದ್ಯಮಶೀಲರಾಗಬಹುದು- ರೋಶನ್ ಲಾರೆನ್ಸ್ ಫೆರ್ನಾಂಡಿಸ್