ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಪರಸ್ಪರ ಸಹಕಾರ ತತ್ವವನ್ನು ಕಾರ್ಯರೂಪಕ್ಕೆ ಇಳಿಸುವುದರ ಮೂಲಕ ಸಂಸ್ಥೆಗಳನ್ನು ಬಲಪಡಿಸಬೇಕು. ಆ ಮೂಲಕ ಸಮುದಾಯದ ಅಭಿವೃದ್ಧಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಚಕ್ರಮ್ಮ ದೇವಸ್ಥಾನ ಟ್ರಸ್ಟ್ ಕೋಡಿಯ ಅಧ್ಯಕ್ಷರಾದ ಕೋಡಿ ಗೋಪಾಲ ಪೂಜಾರಿ ಅಭಿಪ್ರಾಯಪಟ್ಟರು.
ಅವರು ಗಂಗೊಳ್ಳಿಯ ಬಿಲ್ಲವರ ಹಿತರಕ್ಷಣಾ ವೇದಿಕೆಯ ವತಿಯಿಂದ ಇಲ್ಲಿನ ಸರಸ್ವತಿ ವಿದ್ಯಾಲಯದ ರೋಟರಿ ಸಭಾಂಗಣದಲ್ಲಿ ನಡೆದ ಪುಸ್ತಕ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಂಗೊಳ್ಳಿಯ ಸೀತಾಳಿ ನವದುರ್ಗೆ ದೇವಸ್ಥಾನದ ಪಾತ್ರಿಗಳಾದ ರಘುನಾಥ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಯಮಿ ಪ್ರವೀಣ್ ಪೂಜಾರಿ ಶುಭ ಹಾರೈಸಿದರು. ಉದ್ಯಮಿ ಶಶಿಕಾಂತ್ ಗಂಗೊಳ್ಳಿ, ಬಿಲ್ಲವರ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಬಿಲ್ಲವ, ಜಿ. ಎ. ಆರ್ ಲಕ್ಷ್ಮಣ ಪೂಜಾರಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಸೈನಿಕರಿಗೆ ನಮನಗಳನ್ನು ಸಲ್ಲಿಸಲಾಯಿತು. ಕಳೆದ ಬಾರಿಯ ದ್ವಿತೀಯ ಪಿಯುಸಿ ಮತ್ತು ಎಸ್ಎಸ್ಎಲ್ಸಿ ಯಲ್ಲಿ ಉತ್ತಮ ಸಾಧನೆ ಮಾಡಿದ ಬಿಲ್ಲವ ಸಮುದಾಯದ ಅಪೇಕ್ಷಾ, ವೈಷ್ಣವಿ, ಸನ್ವಿತ, ಕೃತಿಕ ಮತ್ತು ಸೇಜಲ್ ಅವರನ್ನು ಸನ್ಮಾನಿಸಲಾಯಿತು. 110 ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಬಿಲ್ಲವರ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಜಿ. ಗೋಪಾಲ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೀಕ್ಷಾ ಪೂಜಾರಿ ಪ್ರಾರ್ಥಿಸಿದರು. ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ನಿರೂಪಿಸಿ, ಆನಂದ ಬಿಲ್ಲವ ಸ್ವಾಗತಿಸಿ, ರಾಘವೇಂದ್ರ ಬಿಲ್ಲವ ವಂದಿಸಿದರು.