ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಆದೇಶದನ್ವಯ ರಾಜ್ಯಾದ್ಯಂತ ಎಲ್ಲಾ ಮಹಾನಗರ ಪಾಲಿಕೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪೌರ ನೌಕರರಸಂಘ ಕೇಂದ್ರ ಕಛೇರಿ ಚಿತ್ರದುರ್ಗ, ಬೆಂಗಳೂರು ವತಿಯಿಂದ ಮೇ. 27ರಿಂದ ಆರಂಭಗೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಬೈಂದೂರು ಪಟ್ಟಣ ಪಂಚಾಯತ್ ಪೌರ ಸೇವಾ ನೌಕರರು ಭಾಗಿಯಾಗಿದ್ದು ಸೇವೆ ಸ್ಥಗಿತಗೊಳಿಸಿ ಪ.ಪಂ ಎದುರು ಎಲ್ಲಾ ನೌಕರರು ಬುಧವಾರ ಪ್ರತಿಭಟನೆ ನಡೆಸಿದರು.
ಇದರಿಂದ ಕಚೇರಿಯ ಯಾವುದೇ ಕೆಲಸಗಳು ನಡೆಯಲಿಲ್ಲ. ಪ್ರಮುಖ ವಾಗಿ ನಗರ ಸ್ವಚ್ಚತೆ ಕಾರ್ಯಕ್ಕೂ ಅಡಚಣೆಯಾಗಿದೆ. ಪ್ರತಿಭಟನೆ ಮುಂದುವರಿದಲ್ಲಿ ನೀರಿನ ಸಮಸ್ಯೆಯೂ ತಲೆದೋರುವ ಸಾಧ್ಯತೆಗಳಿದೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಪೌರ ನೌಕರರ ಬೇಡಿಕೆಗಳನ್ನು ಸರಕಾರ ಈಡೇರಿಸಲು ಒತ್ತಾಯಿಸಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಸರಕಾರದ ಗಮನ ಸೆಳೆದು, ಪೌರ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ, ಶಿಫಾರಸ್ಸು ಮಾಡಲು ಪ್ರತಿಭಟನೆ ಕಾರರು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಬೈಂದೂರು ಪಟ್ಟಣ ಪಂಚಾಯತ್ ಕಂದಾಯ ನಿರೀಕ್ಷಕ ನಂದಯ್ಯ ಪೂಜಾರಿ ಪೌರಕಾರ್ಮಿಕರ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಮಾಹಿತಿ ನೀಡಿದರು.