ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಅಂಪಾರು ಸಂಜಯಗಾಂಧಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದ ಮೊದಲ ಪೋಷಕರ ಸಭೆ ಇತ್ತೀಚಿಗೆ ಜರುಗಿತು.
ಈ ಸಂದರ್ಭದಲ್ಲಿ ಶಾಲಾ ಆಡಳಿತ ಚುಕ್ಕಾಣಿ ಹಿಡಿದ ಸಂಜಯಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಅವಿರತ ಶ್ರಮಕ್ಕೆ ನೈತಿಕ ಹಾಗೂ ಆರ್ಥಿಕ ನೆರವನ್ನು ನೀಡಿ ಪ್ರೋತ್ಸಾಹಿಸಿದ, ಶಾಲಾ ವಾಹನವನ್ನು ಪಡೆಯಲು ಸಹಕರಿಸಿದ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರಾದ ಕಿಶೋರ್ ಕುಮಾರ್ ಕೊಡ್ಗಿ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಿ, ಸಂಜಯಗಾಂಧಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗೌರವ ಸಮರ್ಪಣೆ ಸ್ವೀಕರಿಸಿ ಮಾತನಾಡಿ, ತಮ್ಮ ಊರಿನ ಸಮೀಪದ ಶಾಲೆಗೆ ನೆರವು ನೀಡಿರುವುದು ತಮಗೆ ಸಂತೋಷದ ವಿಷಯ ಎಂದು ತಿಳಿಸಿ, ಸಂಜಯಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಕಾರ್ಯವನ್ನು ಶ್ಲಾಘಿಸಿದರು ಮತ್ತು ಪೋಷಕರು, ಗ್ರಾಮಸ್ಥರು ಶಾಲಾ ಅಭಿವೃದ್ಧಿ ಕಾರ್ಯಗಳಿಗೆ ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ಸಂಜಯಗಾಂಧಿ ಪ್ರೌಢಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ದಾಮೋದರ ಶಾಸ್ತ್ರೀ ಅವರು ಈ ಗೌರವ ಸಮರ್ಪಣೆ ಕಾರ್ಯಕ್ರಮ ನೆರವೇರಿಸಿ, ಶಾಲೆಗೆ ನೆರವು ನೀಡಿದ ಅತಿಥಿಗಳಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ, ಪೋಷಕರ ಸಭೆಯಲ್ಲಿ ಅತ್ಯುತ್ತಮ ಕಿವಿಮಾತು ನುಡಿದರು, ಮಕ್ಕಳ ಪ್ರಗತಿಯಲ್ಲಿ ಪೋಷಕರ ಪಾತ್ರದ ಕುರಿತು ಯಥೋಚಿತ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕತೆಯನ್ನು ಸಂಜಯಗಾಂಧಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಬಲಾಡಿ ಅವರು ವಹಿಸಿ, ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಟ್ರಸ್ಟ್ ಅತ್ಯುತ್ತಮ ಶಿಕ್ಷಣ ನೀಡಲು ಬದ್ಧ, ಈ ನಿಟ್ಟಿನಲ್ಲಿ ನಿಸ್ವಾರ್ಥ ಮನೋಭಾವದಿಂದ ಅವಿರತವಾಗಿ ಶ್ರಮಿಸುತ್ತಿದೆ ಎಂದು ತಿಳಿಸಿ, ಪೋಷಕರಿಗೆ ತಮ್ಮ ಮಗುವಿಗಾಗಿ ನಮ್ಮ ಉತ್ತಮ ಸಂಸ್ಥೆಯನ್ನು ಆಯ್ದುಕೊಂಡದ್ದಕ್ಕೆ ಅಭಿನಂದನೆ ಸಲ್ಲಿಸಿ, ಪೋಷಕರ ಸಭೆಗೆ ಪೋಷಕರ ಹಾಜರಾತಿ ಕಡ್ಡಾಯ ಎಂದು ತಿಳಿಸಿದರು ಮತ್ತು ಸಭೆಯಲ್ಲಿ ಗೈರು ಹಾಜರಿದ್ದ ಪೋಷಕರು ಮುಂದಿನ ಪೋಷಕರ ಸಭೆಯಲ್ಲಿ ಕಡ್ಡಾಯವಾಗಿ ಉಪಸ್ಥಿತರಿರುವಂತೆ ಕರೆ ಕೊಟ್ಟರು.
ಟ್ರಸ್ಟ್ ನ ಕಾರ್ಯದರ್ಶಿ ನವೀನ್ ಕುಮಾರ್ ಶೆಟ್ಟಿ ಅವರು ಸಂಸ್ಥೆಯ ಧ್ಯೇಯೋದ್ದೇಶಗಳನ್ನು, ಅವುಗಳನ್ನು ಸಾಕಾರಗೊಳಿಸಲು ಟ್ರಸ್ಟ್ ನ ಬದ್ಧತೆ, ನಮ್ಮ ಶಾಲೆಯ ಗುಣಮಟ್ಟದ ಶಿಕ್ಷಣದ ಖಚಿತವಾಗಿ ನೀಡುತ್ತಿದೆ ಎಂದರು.
ಖಜಾಂಚಿ ಸುಭಾಶ್ಚಂದ್ರ ಶೆಟ್ಟಿ ಕೊಡ್ಲಾಡಿ ಅವರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಮೌಲ್ಯಗಳನ್ನು ನೀಡುವ ಅನಿವಾರ್ಯತೆ, ಈ ನಿಟ್ಟಿನಲ್ಲಿ ಶಾಲೆ, ಶಿಕ್ಷಕರು ಮತ್ತು ಪೋಷಕರ ಮಹತ್ತರ ಪಾತ್ರದ ಕುರಿತು ಮನೋಜ್ಞವಾಗಿ ತಿಳಿಸಿದರು.
ನಿರ್ದೇಶಕರಾದ ಉಮೇಶ್ ಕೊಠಾರಿ ಅವರು ಪೋಷಕರ ಕರ್ತವ್ಯ, ಮಕ್ಕಳು ಪ್ರಸ್ತುತ ಎದುರಿಸುತ್ತಿರುವ ಸವಾಲುಗಳ ಕುರಿತು ಮಾತನಾಡಿದರು.
ಸಂಜಯಗಾಂಧಿ ಫಂಡ್ ಕಮಿಟಿ ಅಧ್ಯಕ್ಷೆ ಶಾರದಾ ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು, ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಚೈತ್ರ ಯಡಿಯಾಳ ಅವರು ಶಾಲಾ ಶೈಕ್ಷಣಿಕ ವರ್ಷದ ಯೋಜನೆಗಳ ಕುರಿತು ಮಾಹಿತಿ ನೀಡಿ, ಶಾಲಾ ಚಟುವಟಿಕೆಗಳ ಕುರಿತು ಸಂಪೂರ್ಣ ಮಾಹಿತಿ ನೀಡಿದರು.
ಉದಯ್ ಕುಮಾರ್ ಪ್ರೌಢಶಾಲಾ ಮುಖ್ಯೋಪಾಧ್ಯಾಯರು ಉಪಸ್ಥಿತರಿದ್ದು ಪ್ರೌಢಶಾಲೆಯ ಕಾರ್ಯ ವೈಖರಿ ಕುರಿತು ಮಾತನಾಡಿದರು.
ಸಂಜಯಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಮಕ್ಕಳ ಪ್ರಗತಿಯ ಕುರಿತು ಆರೋಗ್ಯಕರ ಚರ್ಚೆಯಲ್ಲಿ ಪಾಲ್ಗೊಂಡರು.
ಶಿಕ್ಷಕಿ ಶೈಲಜಾ ಕಾರ್ಯಕ್ರಮ ನಿರೂಪಿಸಿದರು, ಮುಖ್ಯ ಶಿಕ್ಷಕಿ ವಿಲಾಸಿನಿ ಶೆಟ್ಟಿ ವಂದಿಸಿದರು.















