ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಪಂಚಾಯತ್ ಸಭಾಂಗಣದಲ್ಲಿ 2024-25 ನೇ ಸಾಲಿನಲ್ಲಿ ಜಿಲ್ಲಾ ಉದ್ಯಮ ಕೇಂದ್ರ ಹಾಗೂ ವೃತ್ತಿ ಪರ ಕುಶಲ ಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಸರಬರಾಜು ಯೋಜನೆಯಡಿ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ವೃತ್ತಿ ನಿರತ ಕುಶಲ ಕರ್ಮಿಗಳಿಗೆ ಸ್ವ ಉದ್ಯೋಗ ಸಂಬಂಧ ಸುಧಾರಿತ ಉಪಕರಣಗಳನ್ನು ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ಅವರು ವಿತರಿಸಿದರು.

ಶಾಸಕರು ಕಾರ್ಯಕ್ರಮದಲ್ಲಿ ಮಾತನಾಡಿ, ಬೈಂದೂರು ಕ್ಷೇತ್ರವು ಸಾಕಷ್ಟು ಗ್ರಾಮೀಣ ಪ್ರದೇಶಗಳನ್ನು ಹೊಂದಿದ್ದು ವಿವಿಧ ವೃತ್ತಿಪರರು ಸ್ವ ಉದ್ಯೋಗ ಮೂಲಕ ತಮ್ಮ ಜೀವನಮಟ್ಟ ಸುಧಾರಿಸಿ ಕೊಂಡು ಗೌರವಯುತ ಜೀವನ ನಡೆಸುತ್ತಿದ್ದಾರೆ ಹಾಗೂ ತಮ್ಮ ಮುಂದಿನ ಪೀಳಿಗೆಯ ಶೈಕ್ಷಣಿಕ ಭವಿಷ್ಯ ಸೇರಿದಂತೆ ಕುಟುಂಬದ ಸುಭದ್ರ ಬದುಕಿಗೆ ಶ್ರಮಿಸುತ್ತಿದ್ದಾರೆ. ಇಂತಹ ವರ್ಗವು ಹೆಚ್ಚು ಹೆಚ್ಚು ಗ್ರಾಮೀಣ ಭಾಗದಲ್ಲಿ ಏಳಿಗೆ ಕಾಣುವುದರಿಂದ ಇಡೀ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಹಾಗಾಗಿ ಪಡೆದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಟೈಲರಿಂಗ್ ವೃತ್ತಿಯ 116 ಫಲಾನುಭವಿಗಳು, ಮೆಷಿನ್, ಗಾರೆ ವೃತ್ತಿಯ 37 ಮಂದಿ, ಮರಗೆಲಸ ವೃತ್ತಿಯ 22 ಮಂದಿ, ಎಲೆಕ್ಟ್ರಿಷಿಯನ್ ವೃತ್ತಿಯ 16 ಮಂದಿ, ಬ್ಯೂಟಿಪಾರ್ಲರ್ ವೃತ್ತಿಯ 11 ಮಂದಿ, ಪ್ಲಂಬಿಂಗ್ ವೃತ್ತಿಯ 04 ಮಂದಿ, ಕ್ಷೌರಿಕ ವೃತ್ತಿಯ 02 ಮಂದಿ, ಕಮ್ಮಾರಿಕೆ ವೃತ್ತಿಯ 01 ಮಂದಿ, ದೋಬಿ ವೃತ್ತಿಯ 01 ಮಂದಿ ಸೇರಿದಂತೆ ಒಟ್ಟು 210 ಫಲಾನುಭವಿಗಳಿಗೆ ಶಾಸಕರು ಉಪಕರಣ ಕಿಟ್ ವಿತರಿಸಿದರು.










