ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿಯ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಆಹಾರದ ಬಗ್ಗೆ ಸರಿಯಾದ ಮಾಹಿತಿಯನ್ನು ಒದಗಿಸಲು ಶುಗರ್ ಬೋರ್ಡ್ ಕಾರ್ಯಕ್ರಮವನ್ನು ಇತ್ತೀಚಿಗೆ ಆಯೋಜಿಸಿದರು.
ಮಣಿಪಾಲದ ಮಕ್ಕಳ ತಜ್ಞರಾದ ಮತ್ತು ಸಹಾಯಕ ಪ್ರಾಧ್ಯಾಪಕರಾದ ಡಾ. ಕೌಶಿಕ್ ಹೆಚ್. ಮಾತನಾಡಿ, ಪ್ರತಿ 20 ಜನ ಮಕ್ಕಳಲ್ಲಿ ಒಬ್ಬರ ತೂಕ ವಯಸ್ಸಿಗೆ ಮೀರಿ ಹೆಚ್ಚುತ್ತಿದೆ. ಇದಕ್ಕೆ ನಮ್ಮ ಜೀವನ ಶೈಲಿ ಮತ್ತು ಆಹಾರವೇ ಕಾರಣವಾಗಿರುತ್ತದೆ. ಆಲಸ್ಯವೂ ತೂಕದ ಹೆಚ್ಚುವಿಕೆಗೆ ಪ್ರಧಾನ ಕಾರಣವಾಗಿರುತ್ತದೆ. ವಿದ್ಯಾರ್ಥಿಗಳು ಹೆಚ್ಚಾಗಿ ಪಾಠವನ್ನು ಆಲಿಸುವ ಕೆಲಸದಲ್ಲೇ ಸಮಯವನ್ನು ಕಳೆಯುವುದರಿಂದ ದೇಹದ ಅಂಗಾಂಗಗಳು ಬಹಳ ಚಟುವಟಿಕೆಯಿಂದ ಕೂಡಿರುವುದಿಲ್ಲ. ಆದ್ದರಿಂದ ದಿನಕ್ಕೊಂದು ಘಂಟೆಯಾದರೂ ಓಟ, ಆಟ, ಕೆಲಸಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಮಾತ್ರ ಆಲಸ್ಯದಿಂದ ಮುಕ್ತರಾಗಿ ಆರೋಗ್ಯ ಹೊಂದಬಹುದು.
ಆಹಾರ ಸೇವನೆಯಲ್ಲೂ ಶುದ್ಧತೆ, ಸಮಯಪಾಲನೆ ಅತ್ಯಗತ್ಯ. ಕರಿದ ಪದಾರ್ಥಗಳ, ಮಾಂಸಾಹಾರದ ಅಥವಾ ಅತ್ಯಂತ ಸಿಹಿ ಪದಾರ್ಥಗಳ ಅತಿಯಾದ ಸೇವನೆ ಆರೋಗ್ಯವನ್ನು ಹಾಳುಮಾಡುತ್ತದೆ. ಹಸಿ ತರಕಾರಿಗಳ, ಮೊಳಕೆ ಭರಿಸಿದ ಧಾನ್ಯಗಳ, ಹಾಲು ಮತ್ತು ಕಾಲಕ್ಕನುಗುಣವಾದ ಹಣ್ಣುಗಳ ಸೇವನೆ ಆರೋಗ್ಯಕ್ಕೆ ಪೂರಕ. ಮಿತವಾದ ಒಣಹಣ್ಣುಗಳ ಸೇವನೆ ಅರೋಗ್ಯಕ್ಕೆ ಹಿತ. ಆರೋಗ್ಯವೇ ಎಲ್ಲಾ ಸಾಧನೆಗೂ ಮೂಲ ಕಾರಣವಾಗಿರುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ಅತ್ಯಗತ್ಯ. ಎಂದರು.
ಈ ಸಂದರ್ಭದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿಗಳು ಮತ್ತು ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ, ಶಾಲೆಯ ಆಡಳಿತಾಧಿಕಾರಿಗಳಾದ ವೀಣಾ ರಶ್ಮಿ ಎಂ., ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ, ಶಿಕ್ಷಕ – ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಆರ್. ಲಹರಿ ನಿರೂಪಿಸಿ, ವಿದ್ಯಾರ್ಥಿನಿ ಕೃಪಾಲಿ ಸ್ವಾಗತಿಸಿ, ವಿದ್ಯಾರ್ಥಿ ಚಿದಾನಂದ ಧನ್ಯವಾದ ಸಮರ್ಪಿಸಿದರು.
















