ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸರ್ವೋದಯದ ಸತ್ಯಾಗ್ರಹ, ಸ್ವರಾಜ್ಯದ ಪರಿಕಲ್ಪನೆಯ ಭಾರತವನ್ನು ನಾವು ಕಟ್ಟಬೇಕು. ರಾಜಕೀಯ ಚಿಂತನೆಗಳು ಮೂಲಭೂತ ಚಿಂತನೆಗಳಿಗೆ ಒಳಗಾಗಬೇಕು. ಅಂದಿನ ಚಿಂತನೆಗಳನ್ನು ಇಂದು ನೋಡಲು ಸಾಧ್ಯವಿಲ್ಲ . ಆದರೆ ಸರ್ವಧರ್ಮ ಸಮಭಾವ, ಸರ್ವೋದಯದ ಪರಿಕಲ್ಪನೆಯ ರಾಷ್ಟ್ರೀಯತೆ ರೂಪುಗೊಳ್ಳಬೇಕು ಎಂದು ಮಣಿಪಾಲ ಗಾಂಧಿಯನ್ ಸೆಂಟರ್ ಫಾರ್ ಫಿಲೋಸಾಫಿಕಲ್ ಆರ್ಟ್ಸ್ ಮತ್ತು ಸೈನ್ಸ್ ಹೈಯರ್ ಎಜುಕೇಷನ್ ಇದರ ನಿರ್ದೇಶಕರಾದ ವರದೇಶ್ ಹಿರೆಗಂಗೆ ಹೇಳಿದರು.
ಅವರು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗ, ಆಂತರಿಕ ಗುಣಮಟ್ಟ ಭರವಸೆ ಕೋಶ, ಮತ್ತು ಮಂಗಳೂರು ವಿಶ್ವವಿದ್ಯಾಲಯದ ರಾಜ್ಯ ಶಾಸ್ತ್ರ ಉಪನ್ಯಾಸಕರ ಸಂಘದ ಸಹಯೋಗದಲ್ಲಿ ಗುರುವಾರ ನಡೆದ ತೃತೀಯ ಸೆಮಿಸ್ಟರ್ ರಾಜ್ಯ ಶಾಸ್ತ್ರ ಪಠ್ಯಕ್ರಮದ ಕುರಿತು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಪಠ್ಯಕ್ರಮದ ನೆಲೆಯಲ್ಲಿ ರಾಜಕೀಯ ಚಿಂತನೆಗಳಲ್ಲಿ ಆಯಾ ಕಾಲಘಟ್ಟದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ರಾಜಕೀಯ ಶಾಸ್ತ್ರ ಎನ್ನುವುದು ವಿಶಾಲ ವ್ಯಾಪ್ತಿಯ ಕ್ಷೇತ್ರ. ಜಗತ್ತಿನಾದ್ಯಂತ ಹರಡಿಕೊಂಡ ಪ್ರಾಚೀನ ಜ್ಞಾನ ಶಾಸ್ತ್ರ. ವಿಶ್ವದೆಲ್ಲೆಡೆ ಹಲವು ಮಜಲುಗಳನ್ನು ಕಾಯ್ದುಕೊಂಡಿದೆ. ಹಲವು ಸಿದ್ಧಾಂತಗಳನ್ನು ಒಳಗೊಂಡಿದೆ.
ಪ್ರಪಂಚದ ಬೇರೆ ಬೇರೆ ದೇಶಗಳಲ್ಲಿ ರಾಜಕೀಯ ಚಿಂತನೆ ಮತ್ತು ಚಿಂತಕರ ವಿಚಾರಗಳನ್ನು ತಿಳಿಯುತ್ತೇವೆ. ಆದರೆ ಮಹಿಳಾ ರಾಜಕೀಯ ಚಿಂತನೆಗಳನ್ನು ಗುರುತಿಸಿದಂತೆ ಇಲ್ಲ. ಭಾರತದಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯರಂತಹ ರಾಜಕೀಯ ಚಿಂತಕರಿದ್ದಾರೆ. ಮಹಿಳೆಯರು ಕೇವಲ ಸಾಹಿತ್ಯ, ಸ್ತ್ರೀ ವಾದ, ಸಾಮಾಜಿಕವಾಗಿ ಸೀಮಿತವಾಗಿಲ್ಲ. ಅವರು ಇಂದು ಎಲ್ಲ ಕ್ಷೇತ್ರಗಳಲ್ಲೂ ಇದ್ದಾರೆ. ಕೌಟಿಲ್ಯ ಗಾಂಧೀಜಿ, ನೆಹರು, ಅಂಬೇಡ್ಕರ್ ಮೌಲಾನಾ ಅಬ್ದುಲ್ ಕಲಾಂ ಅಜಾದ್ , ಕಮಲಾದೇವಿ ಚಟ್ಟೋಪಾಧ್ಯಾಯ ಇವರ ರಾಜಕೀಯ ಚಿಂತನೆಗಳನ್ನು ಗುರುತಿಸುತ್ತೇವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕರಾದ ಸತ್ಯನಾರಾಯಣ, ಮಂಗಳೂರು ವಿಶ್ವವಿದ್ಯಾಲಯ ರಾಜ್ಯ ಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಐವಿನ್ ಫ್ರಾನ್ಸಿಸ್ ಲೋಬೋ, ಕಾರ್ಕಳದ ಎಸ್.ವಿ.ಟಿ.ಕಾಲೇಜಿನ ಪ್ರಾಂಶುಪಾಲರಾದ ಗೀತಾ ಜಿ. ಉಪಸ್ಥಿತರಿದ್ದರು .
ಕಾವ್ಯಶ್ರೀ ಪರಿಚಯಿಸಿದರು. ಭಂಡಾರ್ಕಾರ್ಸ್ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಹರ್ಷಿತಾ ಸ್ವಾಗತಿಸಿ, ಮಂಗಳೂರು ವಿಶ್ವವಿದ್ಯಾಲಯ ರಾಜ್ಯ ಶಾಸ್ತ್ರ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಡಾ. ಗಣೇಶ್ ಶೆಟ್ಟಿ ವಂದಿಸಿ, ಉಪನ್ಯಾಸಕಿಯರಾದ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.















