ಕುಂದಾಪ್ರ ಡಾಟ್ ಕಾಂಸುದ್ದಿ.
ಕೋಟ: ಧ್ವನಿ ವರ್ಧಕ ಬಳಕೆಯ ಕಾರಣಕ್ಕೆ ಯಕ್ಷಗಾನ ಮೇಳಗಳ ಪ್ರದರ್ಶನಕ್ಕೆ ಅಡ್ಡಿಯಾಗುತ್ತಿರುವ ಪ್ರಸಂಗಗಳು ಎದುರಾಗುತ್ತಿರುವುದರಿಂದ ಬಡಗುತಿಟ್ಟಿನ ಬಹುತೇಕ ಮೇಳಗಳ ಯಜಮಾನರು, ಮುಖ್ಯಸ್ಥರು ರವಿವಾರ ಕೋಟ ಈ ಅಮೃತೇಶ್ವರೀ ದೇಗುಲದಲ್ಲಿ ಸಭೆ ನಡೆಸಿ ಪರಿಹಾರ ಸೂತ್ರಗಳ ಬಗ್ಗೆ ಭಾನುವಾರ ಚರ್ಚಿಸಿದರು.
ಕೋಟದ ಶ್ರೀ ಅಮೃತೇಶ್ವರೀ ಯಕ್ಷಗಾನ ಮೇಳದ ಯಜಮಾನರಾದ ಆನಂದ್ ಸಿ. ಕುಂದರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಲ ತಿರ್ಮಾನಗಳನ್ನು ಕೈಗೊಳ್ಳಲಾಯಿತು.
ಈ ಬಗ್ಗೆ ವಿವಿಧ ಮೇಳಗಳ ಯಜಮಾನರಾದ ಮಂದಾರ್ತಿ ಧನಂಜಯ ಶೆಟ್ಟಿ ಅಮೃತೇಶ್ವರಿ ಮೇಳದ ಯಜಮಾನರಾದ ಆನಂದ ಸಿ. ಕುಂದರ್, ಮಾರಣಕಟ್ಟೆ ಮೇಳದ ಸದಾಶಿವ ಶೆಟ್ಟಿ, ರಘುರಾಮ್ ಶೆಟ್ಟಿ ಮಡಾಮಕ್ಕಿ ಮೇಳದ ಶಶಿಧರ ಶೆಟ್ಟಿ, ಹಾಲಾಡಿ ಮೇಳದ ಅಮರನಾಥ ಶೆಟ್ಟಿ ಗೋಳಿಗರಡಿ ಮೇಳದ ವಿಟ್ಠಲ ಪೂಜಾರಿ, ಆಜ್ರಿ ಮೇಳದ ಅಶೋಕ್ ಶೆಟ್ಟಿ ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.
ಪಿ. ಕಿಶನ್ ಹೆಗ್ಡೆ ಮಾತನಾಡಿ, ರಾತ್ರಿ ವೇಳೆ ಧ್ವನಿವರ್ಧಕ ಬಳಕೆಗೆ ಅನುಮತಿ ನಿರಾಕರಿಸಿ ಪ್ರದರ್ಶನವನ್ನು ಸ್ಥಗಿತಗೊಳಿಸುವ ಪ್ರಸಂಗಗಳು ಅಲ್ಲಲ್ಲಿ ನಡೆಯುತ್ತಿದೆ. ಹೀಗಾಗಿ ಬೆಳಗ್ಗೆಯ ತನಕ ಪ್ರದರ್ಶನ ನಡೆಸಲು ಸಮಸ್ಯೆಯಾಗುತ್ತಿದ್ದು ಡೇರೆ ಮೇಳ ಹೊರತುಪಡಿಸಿ ಎಲ್ಲ ಬಯಲಾಟ ಮೇಳಗಳು ಏಕ ರೀತಿಯ ಸಮಯವನ್ನು ನಿಗಡಿಪಡಿಸಿಕೊಂಡು ಅದರಂತೆ ಪ್ರದರ್ಶನಕ್ಕೆ ಅವಕಾಶ ಜಿಲ್ಲಾಡಳಿತ, ಸರಕಾರಕ್ಕೆ ಅವಕಾಶ ಕೋರುವ ಎಂದು ತಿಳಿಸಿದರು.
ಕಾಲಮಿತಿ ಪ್ರದರ್ಶನಕ್ಕೆ ಒಲವು:
ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆದು ಮುಂದಿನ ತಿರುಗಾಟದಿಂದ ಎಲ್ಲ ಬಯಲಾಟ ಮೇಳಗಳನ್ನು ಕಾಲಮಿತಿ ಪ್ರದರ್ಶನಕ್ಕೆ ಸೀಮಿತಗೊಳಿಸುವುದು. ರಾತ್ರಿ 7.30 ರಿಂದ 1 ಗಂಟೆ ಅಥವಾ ಅನಿವಾರ್ಯ ಸಂದರ್ಭದಲ್ಲಿ 1.30ರ ತನಕ ಮಾತ್ರ ಪ್ರದರ್ಶನಗಳನ್ನು ನಡೆಸುವುದು. ತೆಂಕಿನ ಧರ್ಮಸ್ಥಳ ಮೇಳದವರು ಕೂಡ ಈ ತೀರ್ಮಾನಕ್ಕೆ ಒಮ್ಮತ ಹೊಂದಿದ್ದು ಮಾದರಿಯಲ್ಲಿ ಪ್ರದರ್ಶನ ನೀಡುತ್ತಾರೆ. ಈ ಸಮಯದಲ್ಲಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವಂತೆ ಡಿಸಿ, ಎಸ್ಪಿ, ಜಿಲ್ಲಾ ಉಸ್ತುವಾರಿ ಸಚಿವರು, ಸಿಎಂಗೆ ಮನವಿ ಸಲ್ಲಿಸುವುದು.
ಸೇವಾದಾರರು ಹಾಗೂ ಕ್ಯಾಂಪ್ ಸಂಯೋಜಕರಲ್ಲಿ ಈ ಬಗ್ಗೆ ಸಹಕಾರ ಕೋರುವುದು. ಈಗ ಕೆಲವು ಮೇಳಗಳಲ್ಲಿ ಕೂಡಾಟಕ್ಕೆ ಅವಕಾಶವಿರುವುದಿಲ್ಲ ಮುಂದೆ ಮೇಳ-ಮೇಳಗಳ ನಡುವೆ ದಿನಾಂಕ, ಇನ್ನಿತರ ಹೊಂದಾಣಿಕೆ ಗಳಾದರೆ ಕೂಡಾಟಕ್ಕೆ ಅವಕಾಶ ನೀಡುವುದು ಎನ್ನುವ ತೀರ್ಮಾನಕ್ಕೆ ಬರಲಾಯಿತು.
ಯಕ್ಷಗಾನ ವಿಮರ್ಶಕ ಎಸ್.ವಿ. ಉದಯಕುಮಾರ್ ಶೆಟ್ಟಿ ಅಮೃತೇಶ್ವರೀ ದೇಗುಲದ ಸಮಿತಿಯ ಸುಭಾಷ್ ಶೆಟ್ಟಿ ಗಿಳಿಯಾರು, ಚಂದ್ರ ಆಚಾರ್ಯ, ಶಿವ ಪೂಜಾರಿ, ಗಣೇಶ್ ನೆಲ್ಲಿಬೆಟ್ಟು, ಮಂದಾರ್ತಿ ದೇಗುಲದ ಅಶೋಕ್ ಕುಂದರ್, ರವಿ ಶೆಟ್ಟಿ ವಿಜಯ್, ಗೋಳಿಗರಡಿಯ ಗಣಪಯ್ಯ ಆಚಾರ್, ಎಳ್ಳಂಪಳ್ಳಿ ಜಗನ್ನಾಥ್ ಆಚಾರ್ಯ ಇದ್ದರು.















