ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಾರತದ ಸ್ವಾತಂತ್ರ್ಯದ ಕನಸಿಗೆ ಮೊತ್ತ ಮೊದಲ ಶ್ರೀಕಾರ ಹಾಕಿದವರು ಉಳ್ಳಾಲದ ವೀರ ರಾಣಿ ಅಬ್ಬಕ್ಕ. ಹೆಣ್ಣು ಸರ್ವಶಕ್ತೆ, ಅಶಕ್ತೆಯಲ್ಲ. ಅಪರಿಮಿತ ಧೈರ್ಯದಿಂದ ಮುನ್ನುಗ್ಗುವ ಆತ್ಮವಿಶ್ವಾಸ, ಸವಾಲನ್ನು ಎದುರಿಸಬಲ್ಲೆನೆಂಬ ಭರವಸೆ ಮತ್ತು ಛಲ, ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ರಾಣಿ ಅಬ್ಬಕ್ಕಳಂತೆ ಆಧುನಿಕ ಮಹಿಳೆಯರು ಹೊಂದಿದರೆ ಮಹಿಳಾ ಸಶಕ್ತೀಕರಣ ಸಾಧ್ಯವೆಂದು ಕಾಳಾವರ ಕಾಲೇಜಿನ ಉಪನ್ಯಾಸಕಿ ಶರಾವತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕೋಟೇಶ್ವರ ಕುಂದಾಪುರ ಐಕ್ಯೂಎಸಿ, ಇತಿಹಾಸ ವಿಭಾಗ ಹಾಗೂ ಕರ್ನಾಟಕ ರಾಜ್ಯ ಮಾಹಾವಿದ್ಯಾಲಯ ಶಿಕ್ಷಕ ಸಂಘ ರಿ. ಮಂಗಳೂರು ಇವರು ಜಂಟಿ ಆಶ್ರಯದಲ್ಲಿ ಏರ್ಪಡಿಸಿದ ರಾಣಿ ಅಬ್ಬಕ್ಕ @ 500 ಇದರ ಪ್ರೇರಣಾದಾಯಿ 100 ಉಪನ್ಯಾಸಗಳ ಸರಣಿಯ ಎಸಳಿನ 93ನೇ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾರಂಭವನ್ನು ಉದ್ಘಾಟಿಸಿ, ಅಧ್ಯಕ್ಷತೆಯನ್ನು ವಹಿಸಿದ್ಧ ಕಾಲೇಜಿನ ಪ್ರಾಂಶುಪಾಲರಾದ ರಾಮರಾಯ ಆಚಾರ್ಯ ರಾಣಿ ಅಬ್ಬಕ್ಕಳ ಸಾಹಸಗಾಥೆಯನ್ನು ಕೇಳಿದ ನೀವು ಭವಿಷ್ಯದಲ್ಲಿ ಆತ್ಮ ಸ್ಥೆರ್ಯದಿಂದ ಸವಾಲುಗಳನ್ನು ಎದುರಿಸುವ ಗುಣಗ್ರಾಹಿಗಳಾಗಬೇಕೆಂದು ಹಿತ ನುಡಿದರು.
ಎನ್.ಎಂ.ಎ.ಎಂ.ಐ.ಟಿ. ನಿಟ್ಟೆಯ ಪ್ರಾಧ್ಯಾಪಕ ಸುರೇಂದ್ರ ಶೆಟ್ಟಿ, ಕಾಲೇಜಿನ ಐಕ್ಯೂಎಸಿ ಸಂಚಾಲಕ ನಾಗರಾಜ ಯು, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ., ನಿವೃತ್ತ ಇತಿಹಾಸ ಪ್ರಾಧ್ಯಾಪಕ ಜಯರಾಮ್ ಶೆಟ್ಟಿಗಾರ್, ಜಿಲ್ಲಾ ಸಮನ್ವಯಾಧಿಕಾರಿ ಯಶವಂತ, ಮಾನವಿಕ ಸಂಘದ ನಾಗದೀಪ ಮತ್ತು ಸುಸ್ಸಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿಸರ್ಗ ಪ್ರಾರ್ಥಿಸಿದರೆ, ಕೆ.ಆರ್.ಎಂ.ಎನ್.ಎಸ್. ಕರ್ನಾಟಕ ರಾಜ್ಯ ಇದರ ಜಂಟಿ ಕಾರ್ಯದರ್ಶಿ ಡಾ. ಮಾಧವ ಎಂ.ಕೆ. ಪ್ರಾಸ್ತಾವಿಸಿದರು. ಕಾಲೇಜಿನ ಇತಿಹಾಸ ವಿಭಾಗದ ಗಣೇಶ್ ಪೈ ಎಂ. ಸ್ವಾಗತಿಸಿ, ಕೃತಿಕ ಕಾರ್ಯಕ್ರಮ ನಿರೂಪಿಸಿ, ರಾಜ್ಯಶಾಸ್ತ್ರ ವಿಭಾಗದ ಡಾ. ಭಾಗೀರಥಿ ನಾಯ್ಕ ವಂದಿಸಿದರು.















