ವಿಧಾನ ಪರಿಷತ್ ಚುನಾವಣೆ ಮುಂಬರುವ ಚುನಾವಣೆಗಳಿಗೆ ಅಡಿಗಲ್ಲು : ಶ್ರೀನಿವಾಸ ಪೂಜಾರಿ

Call us

Call us

Call us

ಗಂಗೊಳ್ಳಿ: ಡಿ.27ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಯು ಮುಂಬರುವ ತಾಪಂ., ಜಿಪಂ., ಹಾಗೂ ವಿಧಾನಸಭಾ ಚುನಾವಣೆಗೆ ಅಡಿಗಲ್ಲಾಗಿದ್ದು, ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ನಿರೀಕ್ಷೆಗೂ ಮೀರಿದ ಮತ ದೊರೆತು ಜಯಗಳಿಸಿದರೆ ಮುಂಬರುವ ಚುನಾವಣೆಗೆ ಹೆಚ್ಚಿನ ಸ್ಫೂರ್ತಿ, ಆತ್ಮವಿಶ್ವಾಸ ದೊರೆಯಲಿದೆ. ಹೀಗಾಗಿ ಈ ಚುನಾವಣೆಯನ್ನು ಯಾರೊಬ್ಬರೂ ಹಗುರವಾಗಿ ಪರಿಗಣಿಸದೆ ಬಿಜೆಪಿಯ ಅಭ್ಯರ್ಥಿ ಗೆಲುವಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ವಿಧಾನಪರಿಷತ್ ಬಿಜೆಪಿ ಅಭ್ಯರ್ಥಿ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Call us

Click Here

ಅವರು ತ್ರಾಸಿಯ ಪ್ರವಾಸಿ ಮಂದಿರದ ಬಳಿ ವಿಧಾನಪರಿಷತ್ ಚುನಾವಣೆಯ ಪೂರ್ವಭಾವಿಯಾಗಿ ನಡೆದ ತ್ರಾಸಿ ಜಿಪಂ ಕ್ಷೇತ್ರ ವ್ಯಾಪ್ತಿಯ ಗ್ರಾಪಂ. ಸದಸ್ಯರ ಹಾಗೂ ಪಕ್ಷದ ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷವು ಒಂದು ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸಿದ್ದು, ಎಲ್ಲಾ ಗ್ರಾಪಂ., ತಾಪಂ. ಹಾಗೂ ಜಿಪಂ ಸದಸ್ಯರು ಪಕ್ಷದ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಬೇಕು. ಇನ್ನುಳಿದ ಯಾವುದೇ ಅಭ್ಯರ್ಥಿಗೆ ಪ್ರಥಮ ಅಥವಾ ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ನೀಡಬಾರದು ಎಂದು ಪಕ್ಷದ ಹಿರಿಯ ಮುಖಂಡರು ಈಗಾಗಲೇ ಸ್ಪಷ್ಟ ಸೂಚನೆ ನೀಡಿದ್ದಾರೆ. ಹೀಗಾಗಿ ಬಿಜೆಪಿ ಅಭ್ಯರ್ಥಿಗೆ ಮಾತ್ರ ಮತ ನೀಡಬೇಕು ಎಂಬುದನ್ನು ಎಲ್ಲರೂ ಗಮನದಲ್ಲಿರಿಸಬೇಕು ಎಂದರು.

ಈ ಹಿಂದೆ ಸದನದಲ್ಲಿ ಗ್ರಾಪಂ ಸಮಸ್ಯೆಗಳ ಬಗ್ಗೆ ಮಾತನಾಡುವಾಗ ನಿರ್ಲಕ್ಷ್ಯ ಭಾವನೆ ತಾಳಲಾಗುತ್ತಿತ್ತು. ಆದರೆ ಕಳೆದ ಅನೇಕ ವರ್ಷಗಳಿಂದ ಇಂತಹ ಭಾವನೆಗಳನ್ನು ದೂರ ಮಾಡುವ ಮೂಲಕ ಗ್ರಾಪಂ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸದನದ ಗಮನ ಸೆಳೆದು ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಪಂ ಗಳಿಗೆ ಇನ್ನಷ್ಟು ಹೆಚ್ಚಿನ ಅಧಿಕಾರ ದೊರೆಯಲಿದ್ದು, ಗ್ರಾಪಂ ಹಾಗೂ ಗ್ರಾಪಂ ಸದಸ್ಯರ ಸಮಸ್ಯೆಗಳನ್ನು ಸದನದ ಗಮನ ಸೆಳೆಯಲು, ಗ್ರಾಪಂ ಸದಸ್ಯರ ಧ್ವನಿಯಾಗಲು ಬಿಜೆಪಿ ಅಭ್ಯರ್ಥಿಗೆ ಮತ ನೀಡಬೇಕು ಎಂದು ಅವರು ಮನವಿ ಮಾಡಿದರು.

ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಬಿ.ಎಂ.ಸುಕುಮಾರ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಗುರುರಾಜ್ ಗಂಟಿಹೊಳೆ, ರಾಜ್ಯ ಬಿಜೆಪಿ ಪ್ರಮುಖರಾದ ಶ್ಯಾಮಲಾ ಕುಂದರ್, ತ್ರಾಸಿ ಶಕ್ತಿ ಕೇಂದ್ರದ ಅಧ್ಯಕ್ಷ ಹರೀಶ ಮೇಸ್ತ ಮೊದಲಾದವರು ಉಪಸ್ಥಿತರಿದ್ದರು. ರಾಜ್ಯ ಬಿಜೆಪಿ ರೈತಮೋರ್ಚಾ ಮುಖಂಡ ದೀಪಕಕುಮಾರ್ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

Leave a Reply