ಕುಂದಾಪುರ: ತಾಲೂಕು ಕೇಂದ್ರವೊಂದರಲ್ಲಿ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿರುವುದು ಕ್ರೀಡಾ ಪ್ರೇಕ್ಷಕರಿಗೆ ಮನೋರಂಜನೆ ನೀಡುತ್ತಿರುವುದಲ್ಲದೇ ವಿವಿಧ ರಾಜ್ಯಗಳ ಉಡುಗೆ-ತೊಡುಗೆ, ಭಾಷೆ, ಸಂಸ್ಕೃತಿಗಳ ಸಮಾಗಮವೂ ಆದಂತಾಗಿದೆ. ಶಾಂತಿ ಮತ್ತು ಸಾಮರಸ್ಯದ ರಾಯಭಾರಿಯಾದ ಕ್ರಿಕೆಟ್ ನಾಡಿನ ಸೌಹಾರ್ದತೆಯ ಕೊಂಡಿಯಾಗಿ ಉಳಿಯಲಿ ಎಂದು ಕುಂದಾಪುರದ ಡಿಎಸ್ಪಿ ಮಂಜುನಾಥ ಶೆಟ್ಟಿ ಹೇಳಿದರು.
ಇಲ್ಲಿನ ಗಾಂಧಿ ಮೈದಾನದಲ್ಲಿ ಕುಂದಾಪುರ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟ ’ಚಕ್ರವರ್ತಿ ಟ್ರೋಫಿ’ಯನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಜಗತ್ತು ಶಾಂತಿ ಸಾಮರಸ್ಯವನ್ನು ಅರಸಿ ಭಾರತದತ್ತ ಮುಖಮಾಡುತ್ತಿದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.65ರಷ್ಟು ಯುವಜನರೇ ಇರುವುದರಿಂದ ಅದನ್ನು ಕಾಪಿಡುವ ಜವಬ್ದಾರಿ ಅವರ ಮೇಲಿದೆ ಎಂದರು.
ಕುಂದಾಪುರ ಪುರಸಭೆ ಅಧ್ಯಕ್ಷೆ ಕಲಾವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಂಬೈ ಉದ್ಯಮಿಗಳಾದ ಎನ್.ಟಿ. ಪೂಜಾರಿ, ಸುರೇಶ್ ಎನ್. ಶೆಟ್ಟಿ ಮರತ್ತೂರು, ಉದ್ಯಮಿ ಕೃಷ್ಣ ಪೂಜಾರಿ, ಜಗದೀಶ್ ಶೆಟ್ಟಿ, ಪಿಡಬ್ಲ್ಯೂಡಿ ಗುತ್ತಿಗೆದಾರ ರಾಜೇಶ್ ಕಾರಂತ್ ಅತಿಥಿಗಳಾಗಿದ್ದರು. ಚಕ್ರವರ್ತಿ ಕ್ರಿಕೆಟ್ ಕ್ಲಬ್ ಗೌರವಾಧ್ಯಕ್ಷ ಮಡಾಮಕ್ಕಿ ಶಶಿಧರ ಶೆಟ್ಟಿ, ಸಂಚಾಲಕ ಅಭಿನಂದನ್ ಶೆಟ್ಟಿ, ಮಾಜಿ ಅಧ್ಯಕ್ಷ ರಾಜೀವ ಕೋಟ್ಯಾನ್, ಪ್ರದೀಪ್ ವಾಜ್, ಸತೀಶ್ ಕೋಟ್ಯಾನ್ ಉಪಸ್ಥಿತರಿದ್ದರು.
ರೋಟರಿ ಜಿಲ್ಲೆ 3182ಇದರ 2018-19ನೇ ಸಾಲಿನ ಗವರ್ನರ್ ಆಗಿ ಆಯ್ಕೆಯಾದ ಅಭಿನಂದನ್ ಶೆಟ್ಟಿ ಹಾಗೂ ರಕ್ತದಾನಿ ವಿಜಯ ಎಸ್. ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಚಕ್ರವರ್ತಿ ಕ್ರಿಕೆಟ್ ಕ್ಲಬ್ ಅಧ್ಯಕ್ಷ ಶ್ರೀಪಾದ್ ಉಪಾಧ್ಯ ಸ್ವಾಗತಿಸಿದರು. ಖಜಾಂಚಿ ರಂಜಿತ್ಕುಮಾರ್ ಶೆಟ್ಟಿ ವಂದಿಸಿದರು. ರಾಘವೇಂದ್ರ ಚರಣ ನಾವಡ ಕಾರ್ಯಕ್ರಮ ನಿರ್ವಹಿಸಿದರು. (ಕುಂದಾಪ್ರ ಡಾಟ್ ಕಾಂ)
ಆಕರ್ಷಿಸಿದ ಡೈನೋಸರ್, ಬಲೂನು. ಲೈವ್
ಅಂತರಾಷ್ಟ್ರೀಯ ಮಾದರಿಯಲ್ಲಿ ಪಂದ್ಯಾಟವನ್ನು ಆಯೋಜಿಸಿರುವ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಗಾಂಧಿ ಮೈದಾನದಲ್ಲಿ ಹತ್ತಾರು ವೈಶಿಷ್ಟ್ಯಗಳನ್ನು ಸಾಕ್ಷೀಕರಿಸಿದೆ. ಪಂದ್ಯಾಟದ ನಡುವೆ ಮೈದಾನದ ಸುತ್ತ ತಿರುಗುವ ಡೈನೋಸರ್ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಇದದೊಂದಿಗೆ ಎಸಿಡಿ ಸ್ಕ್ರೀನ್ ಮೂಲಕ ಹಾಗೂ ಟಿವಿಗಳಲ್ಲಿ ಪಂದ್ಯಾಟವನ್ನು ನೇರ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟರುವುದು, ಮೈದಾನದಲ್ಲಿ ಮಾಡಲಾಗಿರುವ ವ್ಯವಸ್ಥೆಗಳು ಪ್ರೇಕ್ಷಕರಿಗೆ ರಂಜಿಸಿರುವುದಲ್ಲದೇ ದೊಡ್ಡ ಮಟ್ಟದ ಕ್ರಿಕೆಟ್ ವೀಕ್ಷಿಸಿದ ಅನುಭವವಾಗುತ್ತಿದೆ.