ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಹವಾಮಾನ ವೈಪರಿತ್ಯದಿಂದಾಗಿ ಉಂಟಾಗುವ ಬೆಳೆ ನಷ್ಟಕ್ಕೆ ಪ್ರಸಕ್ತ ಸಾಲಿನ ಮರು ವಿನ್ಯಾಸಗೊಳಿಸಿದ ಹವಾಮಾನಾಧಾರಿತ ಬೆಳೆ ವಿಮೆ ಕಾರ್ಯಕ್ರಮದಡಿ ನೊಂದಣಿ ಮಾಡಿಕೊಳ್ಳಲು ರೈತರಿಗೆ ಅವಕಾಶ ಕಲ್ಪಿಸಲಾಗಿದ್ದು, ರೈತರ ಪಹಣಿಯಲ್ಲಿ ಬೆಳೆ ಸಮೀಕ್ಷೆಯಲ್ಲಿ ಅಡಿಕೆ ಮತ್ತು ಕಾಳುಮೆಣಸು ನಮೂದಾಗಿರು ವ ಬೆಳೆ ವಿಸ್ತೀರ್ಣಕ್ಕೆ ಅನುಗುಣವಾಗಿ ವಿಮಾ ಮೊತ್ತವನ್ನು ಪಾವತಿಸಿ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಯೋಜನೆಯಡಿ ನೊಂದಣಿ ಮಾಡಿಸಲು ಜೂನ್ 30 ಕೊನೆಯ ದಿನವಾಗಿದ್ದು, ರೈತರು ವಿಮಾ ಕಂತುಗಳನ್ನು ಪಾವತಿಸಲು ನಿಗದಿತ ದಾಖಲೆಗಳೊಂದಿಗೆ ಹತ್ತಿರದ ಬ್ಯಾಂಕ್, ವ್ಯವಸಾಯ ಸೇವಾ ಸಹಕಾರಿ ಸಂಘ, ಸಿ.ಎಸ್.ಸಿ ಹಾಗೂ ಗ್ರಾಮ ಒನ್ -ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ.
ಈ ಬೆಳೆ ವಿಮಾ ಯೋಜನೆಯಲ್ಲಿ ಗ್ರಾಮ ಪಂಚಾಯತ್ಗಳನ್ನು ವಿಮಾ ಘಟಕಗಳಾಗಿ ಸರ್ಕಾರದ ಆದೇಶದಲ್ಲಿ ಅಧಿಸೂಚಿಸಲಾಗಿದ್ದು, ಅಡಿಕೆ ಹಾಗೂ ಕಾಳುಮೆಣಸು ಬೆಳೆ ಸಾಲ ಪಡೆದ ಹಾಗೂ ಪಡೆಯದ ರೈತರು ಪಾಲ್ಗೊಳ್ಳಬಹುದಾಗಿದ್ದು, ಬೆಳೆ ಸಾಲ ಪಡೆಯದ ರೈತರಿಗೆ ಈ ಯೋಜನೆಯು ಐಚ್ಚಿಕವಾಗಿರುತ್ತದೆ. ಬೆಳೆ ಸಾಲ ಪಡೆದ ರೈತರು ಯೋಜನೆಯಲ್ಲಿ ಪಾಲ್ಗೊಳ್ಳದೇ ಇರಲು ಇಚ್ಚಿಸಿದಲ್ಲಿ ನೊಂದಣಿಯ ಅಂತಿಮ ದಿನಾಂಕಕ್ಕಿಂತ 7 ದಿನ ಮುಂಚಿತವಾಗಿ ಇಚ್ಚೆ ಇಲ್ಲದ ಬಗ್ಗೆ ಮುಚ್ಚಳಿಕೆ ಪತ್ರವನ್ನು ಬೆಳೆ ಸಾಲ ಪಡೆದ ಹಣಕಾಸು ಸಂಸ್ಥೆಗೆ ನೀಡಬೇಕು.
ವಿಮೆ ಮಾಡಿಸುವ ರೈತರು ಫ್ರುಟ್ ತಂತ್ರಾಂಶದ ನೊಂದಣಿ ಸಂಖ್ಯೆಯನ್ನು ಹೊಂದಿರುವುದರೊಂದಿಗೆ ಸದರಿ ನೊಂದಣಿ ಸಂಖ್ಯೆಗೆ ಪಹಣಿ ವಿವರವನ್ನು ಜೋಡಿಸಿಕೊಳ್ಳಬೇಕು. ನೊಂದಣಿ ಸಂಖ್ಯೆ ಇಲ್ಲದ ರೈತರು ನೊಂದಣಿ ಸಂಖ್ಯೆಯನ್ನು ಮಾಡಿಕೊಂಡು ವಿಮೆಯಲ್ಲಿ ಪಾಲ್ಗೊಳ್ಳಬಹುದಾಗಿದೆ. ವಿಮೆ ಮಾಡಿಸಿರುವ ರೈತರಿಗೆ ವಿಮೆ ಮಾಡಲ್ಪಟ್ಟ ಬೆಳೆಗಳಿಗೆ 2026 ರ ಜುಲೈ 01 ರಿಂದ 2027 ರ ಜೂನ್ 30 ರ ವರೆಗೆ ವಿಮೆ ರಕ್ಷಣೆಯ ಅವಧಿ ಇರುತ್ತದೆ. ಸದರೀ ಅವಧಿಯಲ್ಲಿ ಹವಾಮಾನ ವೈಪರಿತ್ಯಗಳಿಂದಾಗಿ ಬೆಳೆ ನಷ್ಟ ಉಂಟಾದಲ್ಲಿ ವಿಮೆ ರಕ್ಷಣೆ ಅವಧಿಯ ನಂತರದಲ್ಲಿ ವಿಮಾ ಪರಿಹಾರ ಲೆಕ್ಕಾಚಾರ ಮುಗಿದ ಒಂದು ತಿಂಗಳಿನೊಳಗಾಗಿ ವಿಮಾ ಕಂಪೆನಿಯು ನಷ್ಟ ಪರಿಹಾರವನ್ನು ಪಾವತಿಸಬೇಕಾಗಿರುತ್ತದೆ.
ಅಡಿಕೆ ಬೆಳೆಗೆ ವಿಮಾ ಮೊತ್ತ ರೂ. 1,28,000 (ಪ್ರತೀ ಹೆಕ್ಟೇರ್) ಇದ್ದು, ರೈತರು 6400 ರೂ. ವಿಮಾ ಕಂತು ಪಾವತಿಸಬೇಕು. ಕಾಳುಮೆಣಸು ವಿಮಾ ಮೊತ್ತ ರೂ. 47,000 (ಪ್ರತೀ ಹೆಕ್ಟೇರ್) ಗೆ 2,350 ವಿಮಾ ಕಂತುಗಳನ್ನು ಪಾವತಿಸಬೇಕು.
ವಿಮಾ ನಷ್ಟ ಪರಿಹಾರವು Adhaar enabled payment system ಮುಖಾಂತರ ಆಗುವುದರಿಂದ ವಿಮಾ ಅರ್ಜಿಯಲ್ಲಿ ಎನ್.ಪಿ.ಸಿ.ಐ ಸಕ್ರಿಯ ಬ್ಯಾಂಕ್ ಖಾತೆ ಮಾಹಿತಿಯನ್ನು ನೀಡಬೇಕು. ರೈತರು ಆಧಾರ್ ಮಾಹಿತಿಯೊಂದಿಗೆ ಉಳಿತಾಯ ಖಾತೆ ಮಾಹಿತಿ ದಾಖಲೆಗಳು ಹಾಗೂ ಬೆಳೆ ಸಮೀಕ್ಷೆ ತಂತ್ರಾಂಶದಲ್ಲಿ ದಾಖಲಾದ ಅಡಿಕೆ ಹಾಗೂ ಕಾಳುಮೆಣಸು ಬೆಳೆಗಳ ವಿಸ್ತೀರ್ಣದ ಪ್ರೀಮಿಯಂ ಮೊತ್ತದೊಂದಿಗೆ ಹಣಕಾಸು ಸಂಸ್ಥೆಗಳಿಗೆ ಮಾಹಿತಿ ಸಲ್ಲಿಸಿ ನೊಂದಣಿ ಮಾಡಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ವಾಣಿಜ್ಯ /ಗ್ರಾಮೀಣ ಸಹಕಾರಿ ಬ್ಯಾಂಕ್, ಹೋಬಳಿ ರೈತ ಸಂಪರ್ಕ ಕೇಂದ್ರ, ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಅಥವಾ ಜಿಲ್ಲಾ ತೋಟಗಾರಿಕೆ ಜಂಟಿ ನಿರ್ದೇಶಕರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರ ಕಛೇರಿ ಪ್ರಕಟಣೆ ತಿಳಿಸಿದೆ.

















