ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಮಹಿಳೆಯರ ಸುರಕ್ಷತೆ, ಆರ್ಥಿಕ ಸಬಲೀಕರಣಕ್ಕೆ ಅನುಕೂಲ ವಾತಾವರಣ ಸೃಷ್ಠಿಸಿ ಅವರುಗಳ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸುವ ಕುರಿತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾಜದ ದುರ್ಬಲ, ಶೋಷಿತ ಹಾಗೂ ಅಸಹಾಯಕ ಮಹಿಳೆಯರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢಗೊಳಿಸುವ ಉದ್ದೇಶದಿಂದ ಸರಕಾರ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ಅವರುಗಳಿಗೆ ಅರಿವು ಮೂಡಿಸಿ, ಮಹಿಳೆಯರು ಸ್ವಂತ ಉದ್ಯೋಗ ಕೈಗೊಂಡು ಸ್ವಾವಲಂಭಿಗಳನ್ನಾಗಿಸಿ, ಇವರ ಮಾದರಿಯನ್ನು ಇತರ ಮಹಿಳೆಯರರು ಅನುಸರಿಸುವಂತಾಗಬೇಕು ಎಂದರು.
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಯೋಜನೆಗಳಾದ ಚೇತನಾ, ಧನಶ್ರೀ, ಉದ್ಯೋಗಿನಿ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆಗಳ ಬಗ್ಗೆ ಅರ್ಹ ಮಹಿಳೆಯರಿಗೆ ಅರಿವು ಮೂಡಿಸಿ, ಹೆಚ್ಚು ಫಲಾನುಭವಿಗಳನ್ನಾಗಿಸಿ, ಈ ಯೋಜನೆಗಳ ಲಾಭ ಪಡೆದು, ಸ್ವಾವಲಂಭಿ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಎಂದರು.
ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ಸುರಕ್ಷತೆಯ ಖಾತ್ರಿಗಾಗಿ ಆಂತರಿಕ ದೂರು ಸಮಿತಿಗಳನ್ನು ರಚಿಸಲು ಸರ್ವೋಚ್ಛ ನ್ಯಾಯಾಲಯವು ನೀಡಿದ ಮಾರ್ಗಸೂಚಿ ಅನ್ವಯ ಪ್ರತಿಯೊಂದು ಉದ್ಯೋಗಸ್ಥ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ದೂರು ಸಮಿತಿಗಳನ್ನು ರಚಿಸಬೇಕು. ಸಮಿತಿಗಳು ದೂರುಗಳು ಬಂದಾಗ ವಿಚಾರಣೆ ಕೈಗೊಂಡು ನೊಂದ ಮಹಿಳೆಯರಿಗೆ ನ್ಯಾಯ ಪರಿಹಾರ ನೀಡಲು ಮುಂದಾಗಬೇಕು ಎಂದ ಅವರು, ಜಿಲ್ಲೆಯಲ್ಲಿ 3149 ಕ್ಕೂ ಹೆಚ್ಚು ಸಂಸ್ಥೆಗಳು ಇವೆ. ಆದರೆ 789 ಸಂಸ್ಥೆಗಳಲ್ಲಿ ಮಾತ್ರ ಆಂತರಿಕ ಸಮಿತಿ ರಚಿಸಲಾಗಿದ್ದು, ಬಾಕಿ ಉಳಿದ ಸಂಸ್ಥೆಗಳಲ್ಲಿಯೂ ಸಹ ಶೀಘ್ರದಲ್ಲಿ ಸಮಿತಿ ರಚನೆಗೆ ಮುಂದಾಗಬೇಕೆಂದರು.
ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಒಟ್ಟು 47 ನಿವಾಸಿನಿಯರು ವಾಸಿಸುತ್ತಿದ್ದಾರೆ. ನಿವಾಸಿನಿಯರ ಆರೋಗ್ಯ ತಪಾಸಣೆ, ಔಷದೋಪಚಾರಕ್ಕೆ ಅನುಕೂಲವಾಗುವಂತೆ ಶುಶ್ರೂಷಕರ ಅವಶ್ಯಕತೆ ಇದ್ದು, ವಾರಕ್ಕೆ 2 ದಿನದಂತೆ ನಮ್ಮ ಕ್ಲಿನಿಕ್ ನ ಸಿಬ್ಬಂದಿಯನ್ನು ನಿಯೋಜಿಸುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ನಿಲಯದಲ್ಲಿ ಪದವಿ ಶಿಕ್ಷಣ ಪೂರೈಸಿದ ಹೆಣ್ಣು ಮಕ್ಕಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ, ಅವರುಗಳಿಗೆ ಅರ್ಹ ಉದ್ಯೋಗ ಹೊಂದುವಂತೆ ಮಾಡಬೇಕು ಎಂದು, ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 0-6 ವರ್ಷದೊಳಗಿನ ಮಕ್ಕಳಲ್ಲಿರುವ ಅಪೌಷ್ಠಿಕತೆಯನ್ನು ಹೋಗಲಾಡಿಸಲು, ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಹೊಂದಿ ಅಪೌಷ್ಠಿಕ ಮುಕ್ತ ಜಿಲ್ಲೆಯನ್ನಾಗಿಸಲು ಮುಂದಾಗಬೇಕು. ಜಿಲ್ಲೆಯಲ್ಲಿ 34,149 ಮಕ್ಕಳು ಅಂನಗವಾಡಿಗೆ ದಾಖಲಾಗಿದ್ದು, ಸಾಮಾನ್ಯ 34,006, ಸಾಧಾರಣ ತೂಕ ಹೊಂದಿದ 123 ಮಕ್ಕಳು ಹಾಗೂ ತೀವ್ರ ಅಪೌಷ್ಠಿಕತೆ ಹೊಂದಿದ 20 ಮಕ್ಕಳಿದ್ದಾರೆ. ಅಂಗನವಾಡಿ ಕೇಂದ್ರಗಳ ಮಕ್ಕಳ ಆರೋಗ್ಯವನ್ನು ಆಗಾಗ ತಪಾಸಣೆ ನಡೆಸಬೇಕು. ಪೌಷ್ಠಿಕಾಂಶ ಆಹಾರ ನೀಡಲು ಹೆಚ್ಚು ಆದ್ಯತೆ ನೀಡಬೇಕು. ಹೊರ ಜಿಲ್ಲೆಯ ಮಕ್ಕಳಲ್ಲಿ ಅಪೌಷ್ಠಿಕತೆಯ ಕೊರತೆ ಕಂಡುಬಂದಿದ್ದು, ಈ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ವಿಶೇಷ ಕಾಳಜಿ ವಹಿಸಬೇಕು ಎಂದರು.
ಜಿಲ್ಲೆಯಲ್ಲಿ 1222 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ 1061 ಸ್ವಂತ ಕಟ್ಟಡಗಳಲ್ಲಿ, 42 ಬಾಡಿಗೆ ಕಟ್ಟಡಗಳಲ್ಲಿ ಸೇರಿದಂತೆ ಬಾಕಿ ಉಳಿದವು ಮತ್ತಿತರ ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. 9 ಹೊಸ ಕಟ್ಟಡಗಳಿಗೆ ಮಂಜೂರಾತಿ ದೊರಕಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಕೆಲವು ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕೆ ನಿವೇಶನ ಲಭ್ಯವಿರುವುದಿಲ್ಲ. ಈ ಬಗ್ಗೆ ಸೂಕ್ತ ಕ್ರಮವಹಿಸಬೇಕು ಎಂದ ಅವರು ಅಂಗನವಾಡಿ ಕಟ್ಟಡಗಳಿಗೆ ಮೂಲಭೂತ ಸೌಕರ್ಯ, ಆವರಣ ಗೋಡೆ, ಆಟದ ಮೈದಾನ ಸೇರಿದಂತೆ ಮತ್ತಿತರ ಸೌಲಭ್ಯ ಕಲ್ಪಿಸಬೇಕು ಎಂದರು.
ಆಧಾರ್ ಕಾರ್ಡ್ ಹೊಂದಿಲ್ಲದ 0-5 ವರ್ಷದ ಮಕ್ಕಳಿಗೆ ಹೊಸ ಬಾಲ ಆಧಾರ್ ನೋಂದಣಿಗೆ ಶಿಬಿರವನ್ನು ಅಂಗನವಾಡಿ ಕೇಂದ್ರಗಳಲ್ಲಿ ಅಂಚೆ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಬೇಕು. ಜಿಲ್ಲೆಯಲ್ಲಿ 4 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ 38,377 ಮಕ್ಕಳಿದ್ದು, ಇವರಲ್ಲಿ 28,290 ಮಕ್ಕಳು ಆಧಾರ್ ಹೊಂದಿದ್ದು, ಬಾಕಿ ಉಳಿದ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಲು ವಲಯ ಮೇಲ್ವಿಚಾರಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಕ್ರಮವಹಿಸಬೇಕು ಎಂದರು.
ಜಿಲ್ಲೆಯಲ್ಲಿರುವ ಶಿಶು ಪಾಲನಾ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚು ದಾಖಲಿಸಲು ಸಿಬ್ಬಂದಿಗಳು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ವಿವಿಧ ಇಲಾಖೆಗಳು, ಆಸ್ಪತ್ರೆಗಳಿಗೆ ಭೇಟಿ ನೀಡಿ, ಶಿಶುಪಾಲನಾ ಕೇಂದ್ರದಲ್ಲಿ ಮಕ್ಕಳಿಗೆ ಸಿಗುವ ಸೌಲಭ್ಯಗಳು, ಮಕ್ಕಳ ಆರೈಕೆ, ಪೋಷಣೆಯ ಬಗ್ಗೆ ಪೋಷಕರುಗಳಿಗೆ ಮಾಹಿತಿ ನೀಡಿ, ಮಕ್ಕಳನ್ನು ಕೇಂದ್ರಗಳಿಗೆ ಕಳುಹಿಸುವಂತೆ ಅವರುಗಳ ಮನವೊಲಿಸಬೇಕು ಎಂದರು.
ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಗಳಲ್ಲಿ ಕೌಟುಂಬಿಕ ದೌರ್ಜನ್ಯ ಸಂತ್ರಸ್ತರಿಗೆ, ವಿಚ್ಚೇಧನ, ಬಹು ಪತ್ನಿತ್ವ ಸೇರಿದಂತೆ ಮತ್ತಿತರ ಪ್ರಕರಣಗಳಲ್ಲಿ ನೊಂದು ದೂರು ನೀಡಲು ಬಂದ ಮಹಿಳೆಯರಿಗೆ ಸಾಂತ್ವನ ಹೇಳುವುದರ ಜೊತೆಗೆ ಆಪ್ತ ಸಮಾಲೋಚನೆ ನಡೆಸಿ, ಕಾನೂನು ನೆರವುಗಳನ್ನು ಒದಗಿಸಬೇಕು. ಇದರ ಜೊತೆಯಲ್ಲಿಯೇ ಸ್ವ ಉದ್ಯೋಗ ಮಾಡಲು ಉತ್ತೇಜನ ನೀಡಿ, ಅವರುಗಳನ್ನು ಆರ್ಥಿಕವಾಗಿ ಸ್ವಾವಲಂಭಿಗಳಾಗಿಸಲು ಮುಂದಾಗಬೇಕು ಎಂದರು.
ಹಿಂಸೆ ಹಾಗೂ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ವೈದ್ಯಕೀಯ ನೆರವು, ಪೊಲೀಸ್ ಸಹಾಯ ಮತ್ತು ಕಾನೂನು ಸಲಹೆಗಳನ್ನು ಒಂದೇ ಸೂರಿನಡಿ ಸಖಿ ಒನ್ ಸ್ಟಾಪ್ ಸೆಂಟರ್ ನೀಡುತ್ತಿದೆ. ಈ ಸಖಿ ಒನ್ ಸ್ಟಾಫ್ನ ಸಹಾಯವಾಣಿ ಸಂಖ್ಯೆ ನಿರಂತರ ಚಾಲ್ತಿಯಲ್ಲಿರಬೇಕು. ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ತಡೆಗೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಬೇಕು. ಮಹಿಳೆಯರಿಗೆ ಭದ್ರತೆ, ಉದ್ಯೋಗ, ಶೈಕ್ಷಣಿಕ ಸೌಲಭ್ಯ, ಚಿಕಿತ್ಸೆ ಕಲ್ಪಿಸಲು ಅಧಿಕಾರಿಗಳು ಕ್ರಮ ವಹಿಸಬೇಕು ಎಂದರು.
ಸಖೀ ಒನ್ ಸ್ಟಾಪ್ ಸೆಂಟರ್ನಲ್ಲಿ 2026 ರ ಏಪ್ರಿಲ್ ನಿಂದ ಜೂನ್ ವರೆಗೆ ಕೌಟುಂಬಿಕ ದೌರ್ಜನ್ಯ, ದೈಹಿಕ ಹಲ್ಲೆ, ಸುರಕ್ಷಿತ ಪಾಲನೆ, ಮಾನಸಿಕ ಕಿರುಕುಳ, ಜಾಗದ ತಕರಾರು, ಅಸಹಾಯಕ ಮಹಿಳೆಗೆ ಸಂಬಂಧಿಸಿದಂತೆ 73 ಪ್ರಕರಣಗಳೂ ದಾಖಲಾಗಿ, 46 ಪ್ರಕರಣಗಳು ಇತ್ಯರ್ಥಗೊಂಡು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ 1, ಕಾನೂನು ಸಮಾಲೋಚನೆಯಲ್ಲಿ 9 ಹಾಗೂ 17 ಆಪ್ತ ಸಮಾಲೋಚನೆಯ ಹಂತದಲ್ಲಿರುತ್ತದೆ ಎಂದರು.
ಲಿಂಗ ತಾರತಮ್ಯ ಹೋಗಲಾಡಿಸಲು ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಶಿಕ್ಷಣಕ್ಕೆ ಉತ್ತೇಜನ ನೀಡಲು ಜಾರಿಗೆ ತಂದಿರುವ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದ ಅವರು, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆಯಡಿ ಮೊದಲ ಮಗುವಿಗೆ 5000 ರೂ. ಹಾಗೂ ಎರಡನೇ ಹೆರಿಗೆಯಲ್ಲಿ ಹೆಣ್ಣು ಮಗು ಜನಿಸಿದ್ದಲ್ಲಿ 6000 ರೂ. ನೀಡಲಾಗುತ್ತಿದ್ದು, ಅರ್ಹ ಗರ್ಭಿಣಿ ಮತ್ತು ಬಾಣಂತಿಯರು ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದ್ದು, ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದರು.
ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಗಳನ್ನು ಪರಿಣಾಮಕಾರಿ ಕಾರ್ಯನಿರ್ವಹಿಸಬೇಕು. ಶಾಲೆಯಿಂದ ಯಾವೊಬ್ಬ ಮಗುವೂ ಹೊರಗುಳಿಯದಂತೆ ನೋಡಿಕೊಳ್ಳಬೇಕು. ನಿರ್ಮಾಣ ಹಂತದ ಕಟ್ಟಡದ ಸ್ಥಳಗಳಲ್ಲಿ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುವ ಸಾಧ್ಯತೆ ಇದ್ದು, ಈ ಬಗ್ಗೆ ಹೆಚ್ಚು ನಿಗಾ ವಹಿಸಬೇಕು ಎಂದರು.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ನಿತಿನ್ ವೈ.ರಾವ್, ಎಎಸ್ಪಿ ಸುಧಾಕರ್ ನಾಯಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರೇಮಮೂರ್ತಿ ಕೆ. ವಿವಿಧ ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಾಂತ್ವನ ಕೇಂದ್ರದ ಮುಖ್ಯಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
















