ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯ ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಗಳ ವಿಶ್ವಾಸವನ್ನು ಹೆಚ್ಚಿಸುವ ಕೆಲಸ ಇಲಾಖೆಗಳು ಮಾಡಬೇಕು. ಇವುಗಳ ಜೊತೆಗೆ ಬ್ಯಾಂಕುಗಳು ಆರ್ಥಿಕ ನೆರವನ್ನು ನೀಡುವುದರೊಂದಿಗೆ ಉದ್ಯಮವು ಹೆಚ್ಚು ಅಭಿವೃದ್ಧಿ ಹೊಂದಿ, ಹೆಚ್ಚಿನ ಉದ್ಯೋಗಗಳು ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಸೋಮವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ 15,000 ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಹೆಚ್ಚಿನದಾಗಿ ಗೋಡಂಬಿ ಸಂಸ್ಕರಣಾ ಘಟಕಗಳು, ಮೆರಿನ್ ಪ್ರೋಡಕ್ಟ್, ಸಿದ್ಧ ಆಹಾರ ಘಟಕಗಳು, ಸೇರಿದಂತೆ ಮತ್ತಿತರ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಇನ್ಫ್ರಾಸ್ಟçಕ್ಟರ್ ಸೇರಿದಂತೆ ಕಾರ್ಯನಿರತ ಬಂಡವಾಳಗಳ ಅವಶ್ಯಕತೆ ಇದ್ದಲ್ಲಿ ಅವರುಗಳಿಗೆ ಬ್ಯಾಂಕುಗಳು ಆರ್ಥಿಕ ನೆರವನ್ನು ನೀಡಬೇಕು. ಮಾಲೀಕರು ಆರ್ಥಿಕ ನೆರವನ್ನು ಪಡೆಯಲು ಎಂ.ಎಸ್.ಎಂ.ಇ ನಲ್ಲಿ ನೋಂದಣಿ ಮಾಡಿಸಬೇಕು ಎಂದರು.

ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಸರಿಯಾದ ಸಹಕಾರ ಬ್ಯಾಂಕುಗಳಲ್ಲಿ ಸಿಗುತ್ತಿಲ್ಲ ಎಂಬ ದೂರುಗಳು ಸಹ ಕೇಳಿ ಬರುತ್ತಿವೆ. ಹೀಗಾಗದಂತೆ ಬ್ಯಾಂಕಿಂಗ್ ಸೆಕ್ಟರ್ಗಳು ಎಚ್ಚರವಹಿಸಬೇಕು. ಮಹಿಳಾ ಸಂಘಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವನ್ನು ಕೋರಿ ಬ್ಯಾಂಕುಗಳಿಗೆ ಬಂದಾಗ ಅವರುಗಳಿಗೆ ಅಗತ್ಯ ನೆರವುಗಳನ್ನು ಕಲ್ಪಿಸಬೇಕು ಎಂದರು.
ಹವಾಮಾನಾಧಾರಿತ ಬೆಳೆ ವಿಮೆ ಕಾರ್ಯಕ್ರಮದಡಿ ನೊಂದಣಿ ಮಾಡಿಕೊಳ್ಳಲು ರೈತರಿಗೆ ಸಾಕಷ್ಟು ಕಾಲಾವಕಾಶ ಕಲ್ಪಿಸಿ, ಈ ಬಗ್ಗೆ ಹೆಚ್ಚು ಅರಿವು ಮೂಡಿಸಿ, ಹೆಚ್ಚಿನ ರೈತರು ಇದರ ವ್ಯಾಪ್ತಿಗೆ ತರುವಂತೆ ನೋಡಿಕೊಳ್ಳಬೇಕು. ವಿಮೆ ಪ್ರೀಮಿಯಂ ಹಣವನ್ನು ತುಂಬಲು ಪ್ರತಿಯೊಬ್ಬ ರೈತರಿಗೂ ಅವಕಾಶ ಕಲ್ಪಿಸಬೇಕು. ಒಂದೊಮ್ಮೆ ತಾಂತ್ರಿಕ ಸಮಸ್ಯೆಗಳು ಕಂಡುಬಂದಲ್ಲಿ ಕೂಡಲೇ ಅದನ್ನು ಬಗೆಹರಿಸಿ, ವಿಮಾ ವ್ಯಾಪ್ತಿಗೆ ಹೊಂದುವಂತೆ ನೋಡಿಕೊಳ್ಳಬೇಕು ಎಂದರು.
ಕೇಂದ್ರ ಹಾಗೂ ರಾಜ್ಯ ಸರಕಾರದ ಪ್ರಾಯೋಜಿತ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಬ್ಯಾಂಕುಗಳ ಪಾತ್ರ ಮಹತ್ವದ್ದಾಗಿದ್ದು, ಅಧಿಕಾರಿಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಬೇಕು. ಸರಕಾರದ ನಾನಾ ಯೋಜನೆಯಡಿ ನೀಡಲಾಗುವ ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಇಲಾಖೆಯ ಅಧಿಕಾರಿಗಳು ಮತ್ತು ಬ್ಯಾಂಕ್ ಅಧಿಕಾರಿ ಹಾಗೂ ಸಿಬ್ಬಂದಿ ಸೂಕ್ತ ಮಾರ್ಗದರ್ಶನ ನೀಡಬೇಕು. ಫಲಾನುಭವಿಗಳ ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಅರ್ಜಿ ಸಲ್ಲಿಸುವಾಗ ತಾಂತ್ರಿಕ ಸಮಸ್ಯೆ ಇದ್ದಲ್ಲಿ ಅದನ್ನು ಸರಿಪಡಿಸುವುದರೊಂದಿಗೆ ಅವಶ್ಯಕತೆ ಇರುವವರಿಗೆ ಆದ್ಯತೆಯ ಮೇಲೆ ಆರ್ಥಿಕ ನೆರವು ಒದಗಿಸಬೇಕು ಎಂದರು.
ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಬ್ಯಾಂಕ್ಗಳ ಸಾಲ ಮತ್ತು ಠೇವಣಿ ಅನುಪಾತ ಶೇ.48.99 ಇದ್ದು, ಈ ಪ್ರಮಾಣವು ರಿಸರ್ವ್ ಬ್ಯಾಂಕ್ ಮಾರ್ಗಸೂಚಿಯಂತೆ ಕನಿಷ್ಠ ಶೇ.60 ಇರಬೇಕಾಗಿದೆ. ಬ್ಯಾಂಕ್ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಲ ಸೌಲಭ್ಯಗಳನ್ನು ವಿತರಣೆ ಮಾಡುವಂತೆ ತಿಳಿಸಿದ ಅವರು, ವಸತಿ, ಶೈಕ್ಷಣಿಕ ಉದ್ದೇಶ, ಸ್ವ-ಉದ್ಯೋಗ ಕೈಗೊಳ್ಳುವವರು, ಸರ್ಕಾರಿ ಯೋಜನೆಗಳ ಫಲಾನುಭವಿಗಳಿಗೆ ಆದಷ್ಟು ಸೌಲಭ್ಯ ಕಲ್ಪಿಸಬೇಕು ಎಂದರು.
ಪಿ.ಎಂ.ಎಫ್.ಎಂ.ಇ ಯೋಜನೆಯಡಿ 516 ಫಲಾನುಭವಿಗಳಿಗೆ 59.34 ಕೋಟಿ ರೂ. ಹಾಗೂ ಪಿ.ಎಂ.ಎಸ್.ಜಿ.ಎಂ.ಬಿ.ವೈ ಅಡಿಯಲ್ಲಿ ಕಳೆದ ಸಾಲಿನಲ್ಲಿ ಜಿಲ್ಲೆಯ ವಿವಿಧ ಬ್ಯಾಂಕುಗಳಿಗೆ 837 ಅರ್ಜಿಗಳು ಸಲ್ಲಿಕೆಯಾಗಿದ್ದು, 229 ಅರ್ಜಿಗಳು ತಿರಸ್ಕೃತಗೊಂಡು, 558 ಫಲಾನುಭವಿಗಳಿಗೆ 8.20 ಕೋಟಿ ರೂ. ಆರ್ಥಿಕ ನೆರವನ್ನು ಮಂಜೂರು ಮಾಡಲಾಗಿದೆ. ಪಿ.ಎಂ.ವಿಶ್ವಕರ್ಮ ಯೋಜನೆಯಡಿ ಏಪ್ರಿಲ್ ವರೆಗೆ 5889 ಅರ್ಜಿಗಳು ಸ್ವೀಕೃತವಾಗಿದ್ದು, 4079 ಫಲಾನುಭವಿಗಳಿಗೆ 37.16 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದರು.
ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಉಪ ಮಹಾ ಪ್ರಬಂಧಕ ಮಹಾಮಾಯ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಸಾಲಿನಲ್ಲಿ ಜಿಲ್ಲೆಗೆ ಆದ್ಯತೆಯ ಮತ್ತು ಆದ್ಯತೆಯೇತರ ವಲಯಗಳೆರಡಕ್ಕೂ ಒಟ್ಟಾರೆಯಾಗಿ 15,514.08 ಕೋಟಿ ರೂ.ಗಳ ವಾರ್ಷಿಕ ಕ್ರೆಡಿಟ್ ಯೋಜನೆ ಗುರಿಯನ್ನು ನಿಗದಿಪಡಿಸಲಾಗಿದ್ದು, 2026 ರ ಮಾರ್ಚ್ ಅಂತ್ಯದವರೆಗೆ 17,191.28 ಗುರಿ ಸಾಧಿಸಿ, ಶೇ. 110.81 ಸಾಧನೆ ಮಾಡಲಾಗಿದೆ ಎಂದ ಅವರು, ಕೃಷಿ ವಲಯದಲ್ಲಿ 4230.28 ನಿಗಧಿತ ಗುರಿಗೆ 4738.22 ಗುರಿ ಸಾಧಿಸಿ ಶೇ.112.01, ಎಂ.ಎಸ್.ಎA.ಇ ವಲಯಕ್ಕೆ 3712.58 ನಿಗಧಿತ ಗುರಿಗೆ 3709.94 ಗುರಿ ಸಾಧಿಸಿ ಶೇ. 99.93 ರಷ್ಟು, ಶಿಕ್ಷಣ ವಲಯದಲ್ಲಿ 187.07 ನಿಗಧಿತ ಗುರಿಗೆ 168.75 ಗುರಿ ಸಾಧಿಸಿ ಶೇ. 90.21 ರಷ್ಟು, ವಸತಿ ಕ್ಷೇತ್ರಗಳಿಗೆ 510 ನಿಗಧಿತ ಗುರಿಗೆ 270.92 ಗುರಿ ಸಾಧಿಸಿ ಶೇ. 53.12 ರಷ್ಟು, ಇತರೆ ಕ್ಷೇತ್ರಗಳಿಗೆ 395.31 ನಿಗಧಿತ ಗುರಿಗೆ, 407.77 ಗುರಿ ಸಾಧಿಸಿ ಶೇ. 103.15 ಹಾಗೂ ಆದ್ಯತೇತರ ವಲಯಗಳಿಗೆ 6474.31 ನಿಗಧಿತ ಗುರಿಗೆ, 7890.36 ಗುರಿ ಸಾಧಿಸಿ ಶೇ. 121.87 ರಷ್ಟು ಸಾಧನೆ ಮಾಡಲಾಗಿದೆ ಎಂದರು.
ಸಭೆಯಲ್ಲಿ ಆರ್.ಬಿ.ಐ ಎ.ಜಿ.ಎಂ ನಿಶಾ ಠಾಕೂರ್, ನಬಾರ್ಡ್ನ ಡಿ.ಡಿ.ಎಂ ಸಂಗೀತಾ ಕಾರ್ಥಾ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಬ್ಯಾಂಕುಗಳ ಮುಖ್ಯಸ್ಥರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

















