ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಮಣಿಪಾಲದ ಮಾಹೆ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ʼಅಂತರಾಷ್ಟ್ರೀಯ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಾಟ ವಿರೋಧಿ ದಿನʼ ಪ್ರಯುಕ್ತ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಾಟ ಇದರ ಬಗ್ಗೆ ಅರಿವು ಕಾರ್ಯಕ್ರಮ ನಡೆಯಿತು.
ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರ ಆಚಾರಿ ಅಧ್ಯಕ್ಷತೆ ವಹಿಸಿದ್ದರು. ಮಾಹೆ ವಿಶ್ವವಿದ್ಯಾನಿಲಯ ಮಣಿಪಾಲದ ಸ್ಟುಡೆಂಟ್ ಅಫೇರ್ಸ್ ನಿರ್ದೇಶಕರಾದ ಡಾ. ಪೂರ್ಣಿಮಾ ಪಿ ಕುಂದಾಪುರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾದಕ ವಸ್ತುಗಳ ಸೇವನೆ ಮತ್ತು ಸಾಗಾಟದ ನಕಾರಾತ್ಮಕ ದುಷ್ಪರಿಣಾಮಗಳು ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾದ ಮಾಹೆ ವಿಶ್ವವಿದ್ಯಾನಿಲಯ ಮಣಿಪಾಲದ ಸ್ಟುಡೆಂಟ್ ಅಫೇರ್ಸ್ ಇದರ ಉಪನಿರ್ದೇಶಕರಾದ ಡಾ. ರಶ್ಮಿ ಮತ್ತು ಡಾ. ಅರವಿಂದ್ ಅವರು ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉಪನ್ಯಾಸ ನೀಡಿದರು. ಸಲಹೆಗಾರರಾದ ಡಾ. ರಯಾನ್, ಅಚಲಾ, ಜೀವನ್ ಲೆವಿಸ್ ಮತ್ತು ಕರುಣಾ ಮಾದಕ ವಸ್ತುಗಳ ಸೇವನೆ ಮತ್ತು ಅಕ್ರಮ ಸಾಗಾಟದ ವಿರೋಧಿ ದಿನದ ಅರಿವು ಮೂಡಿಸುವ ಕುರಿತು ಪ್ರಾತ್ಯಕ್ಷಿಕೆ ನೀಡಿದರು.
ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಸರೋಜಾ ಎಂ. ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆಂಗ್ಲ ಭಾಷಾ ಉಪನ್ಯಾಸಕ ಡೊಮಿನಿಕ್ ಬ್ರಗಾಂಝಾ ವಂದಿಸಿದರು. ಉಪನ್ಯಾಸಕಿ ರೇಣುಕಾ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

















