ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಮಾತೃಭಾಷಾಭಿಮಾನ ಕಡಿಮೆಯಾಗುತ್ತಿದೆ. ಐಶಾರಾಮಿ ಜೀವನ ಕ್ರಮಗಳು ನಮ್ಮನ್ನು ಕುಗ್ಗಿಸುತ್ತಿವೆ. ಈಗ ಕೃತಕ ಬುದ್ಧಿಮತ್ತೆ ಪ್ರವೇಶದಿಂದ ನಾವು ಜೀವಂತ ಶವಗಳಾಗುತ್ತಿದ್ದೇವೆ. ಮಾನವೀಯ ವಿಷಯಗಳು ಮರಿಚೀಕೆಯಾಗುತ್ತಿವೆ. ಪದವಿದರರ ಸೃಷ್ಟಿಯಾಗುತ್ತಿದೆಯೇ ಹೊರತು ಮನುಷ್ಯತ್ವದ ಸೃಷ್ಟಿ ಆಗುತ್ತಿಲ್ಲ. ನಮ್ಮನ್ನು ನಾವು ಅರ್ಥ ಮಾಡಿಕೊಂಡು ನಮ್ಮ ಆಚೆಯನ್ನು ನೋಡಬೇಕಾದರೆ ಅದು ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಖ್ಯಾತ ಲೇಖಕ ಡಾ. ನರೇಂದ್ರ ರೈ ದೇರ್ಲ ಹೇಳಿದರು.

ಅವರು ರವಿವಾರ ಕುಂಭಾಶಿಯ ವಿನಾಯಕ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲ್ಲೂಕು ಘಟಕ ತನ್ನ ಇಪ್ಪತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನ ನುಡಿ ಬೆಳಕು ಉದ್ಘಾಟಿಸಿ ಮಾತನಾಡಿದರು. ಇವತ್ತು ಪೋಷಕರು ಶಾಲೆಗಳ ಬಾಹ್ಯ ಆಡಂಬರವನ್ನು ನೋಡಿ ತಮ್ಮ ಮಕ್ಕಳನ್ನು ಅಲ್ಲಿಗೆ ಸೇರಿಸುವ ಕಾಲ ಬಂದಿದೆ. ಇವತ್ತು ನಮಗೆ ಸಂವೇದನೆ, ಬ೦ಧುತ್ವಗಳೊ೦ದಿಗೆರ ಮನಸ್ಸು ಕಟ್ಟುವ ಶಾಲೆಗಳು ಬೇಕು ಎ೦ದು ಹೇಳಿದ ಅವರು, ಮಾಧ್ಯಮ ಹಾಗೂ ಸಾಹಿತ್ಯಕ್ಕೂ ನಿಕಟ ಸ೦ಬ೦ಧ. ಕಲ್ಲಿನ ಬರಹ, ತಾಮ್ರದ ಹಾಳೆ, ತಾಳೆಗರಿ, ಕಾಗದ ಪ್ರಸ್ತುತ ಡಿಜಿಟಲ್ ಪರದೆ ಅಕ್ಷರ ರೂಪ ಪಡೆಯುತ್ತಿದೆ. ಸಾಹಿತ್ಯದ ತ್ಯದ ಬೆಳವಣಿಗೆಯಲ್ಲಿ ಮಾಧ್ಯಮಗಳು ಪರಿಣಾಮಕಾರಿ ಕೆಲಸ ಮಾಡುತ್ತಿವೆ. ಆದರೆ ಇವತ್ತು ಒಳ್ಳೆಯ ಓದುಗರು ಇದ್ದಾರೆಯೇ ಎನ್ನುವ ಪ್ರಶ್ನೆಯನ್ನು ಮೂಡಿಸುತ್ತಿದೆ.
ನೆಲ ಸಂಸ್ಕೃತಿಯನ್ನು ಸಮೃದ್ಧಗೊಳಿಸಿದ್ದು ಸಾಹಿತ್ಯ, ಜ್ಞಾನಪೀಠ ಪ್ರಶಸ್ತಿಗಳನ್ನು ಕನ್ನಡ ಪಡೆದಿದೆ. ಆದರೆ ಕೇರಳ, ತಮಿಳುನಾಡು ರಾಜ್ಯಗಳಿಗೆ ಹೋಲಿಸಿದರೆ ಮಾತೃಭಾಷೆಯ ಅಭಿಮಾನ ಕಡಿಮೆಯಾಗುತ್ತಿದೆ ಎ೦ದು ಅನ್ನಿಸುತ್ತಿದೆ. ಭಾಷೆಯ ವಿಚಾರದಲ್ಲಿ ಓದುವ, ಅಧ್ಯಯನ, ಸಂಶೋಧನ ಆಸಕ್ತಿಗಳು ಕಡಿಮೆಯಾಗುವುದೇ ಕನ್ನಡದ ಹಿನ್ನಡೆಗೆ ಕಾರಣ ಎನ್ನಬಹುದು ಎ೦ದರು.
ಸಮ್ಮೇಳನದ ಸರ್ವಾಧ್ಯಕ್ಷರಾದ ಯು. ಎಸ್. ಶೆಣೈ ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ವಿಚಾರ ವಿಮರ್ಶೆ ಮಾಡುವ, ಸದಾವಕಾಶ ದೊರೆಯುತ್ತದೆ.ಮಕ್ಕಳಲ್ಲಿ ಸಾಮಾನ್ಯಜ್ಞಾನ, ಕನ್ನಡ ವೃದ್ಧಿಸುವ ಕೆಲಸ ಆಗಬೇಕು, ನಮ್ಮಊರು, ತಾಲೂಕಿನ ಹಿರಿಯರ ಸಾಧನೆ, ಈ ನೆಲದ ಭಾಷೆ, ಸಾಹಿತ್ಯ, ಸಂಸ್ಕೃತಿಯ ಪರಿಚಯ ಮಾಡುವ ವಿಷಯದಲ್ಲಿ ಕಾರ್ಯಕ್ರಮ ರೂಪಿಸಬೇಕು, ಕಿರಿಯರಿಗೆ ಹಿರಿಯರಿಂದ ಜ್ಞಾನ ಪ್ರಸಾರ ಪ್ರಮುಖ ಆದ್ಯತೆಯಾಗಬೇಕು, ಕನ್ನಡದ ಅಭಿಮಾನ ರಾಜ್ಯಕ್ಕೆ ಮಾದರಿಯಾಗಬೇಕು ಎಂದರು.
ಕನ್ನಡ ರಾಜ್ಯೋತ್ಸವದ ದಿನ ಹಲವು ಸಾಧಕರನ್ನು ಸನ್ಮಾನಿಸಿ, ಘೋಷಣೆ ಮಾಡುವ ಸರ್ಕಾರ ಕನ್ನಡ ಭಾಷಾಭಿವೃದ್ಧಿಯ ಬಗ್ಗೆ ಇಚ್ಚಾಶಕ್ತಿಯನ್ನೇ ಪ್ರದರ್ಶಿಸುವುದಿಲ್ಲ. ಕನ್ನಡ ಮಾಧಯಮ ಶಾಲೆಗಳನ್ನು ಉಳಿಸಲು ಇಂಗ್ಲೀಷ್ ಮೀಡಿಯಂ ಮಾಡುವುದೇ ಪರ್ಯಾಯ ಎಂದು ನಿರ್ಧರಿಸುತ್ತಾರೆ. ಕನ್ನಡ ಮಾತನಾಡುವುದನ್ನೇ ವಿರೋಧಿಸುವ ಇಂಗ್ಲೀಷ್ ಮೀಡಿಯಂ ಶಾಲೆಗಳಲ್ಲಿ ಕನ್ನಡ ಕಲಿಸಲೇಬೇಕು ಎಂಬ ಆದೇಶ ಮಾಡುವುದಿಲ್ಲ ಎಂದರು.
ಕರ್ನಾಟಕ ಸರಕಾದ ವ್ಯಾಪ್ತಿಯಲ್ಲಿ 6 ಲಕ್ಷ ಸರಕಾರಿ ನೌಕರರಿದ್ದಾರೆ. ಈ ಸರಕಾರಿ ನೌಕರರಲ್ಲಿ ಎಷ್ಟು ಮಂದಿ ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ ಎಂದು ಸಮೀಕ್ಷೆ ಮಾಡಲಾಗಿದೆಯೇ? ಕನ್ನಡ ಶಾಲಾ ಶಿಕ್ಷಕರಲ್ಲಿ ಶೇ.೫೦ಕ್ಕಿಂತ ಹೆಚ್ಚು ಶಿಕ್ಷಕರು ತಮ್ಮ ಮಕ್ಕಳನ್ನು ಇಂಗ್ಲೀಷ್ ಮೀಡಿಯಂ ಶಾಲೆಗಳಿಗೆ ಕಳುಹಿಸುತ್ತಾರೆ. ಏಕೆ ಕಳುಹಿಸುತ್ತಾರೆ ಎಂಬ ಬಗ್ಗೆ ಸಮೀಕ್ಷೆ ನಡೆದಿದೆಯೇ? ಕನ್ನಡ ಶಾಲೆಗಳ ಗುಣಮಟ್ಟ ಸರಿ ಇಲ್ಲ ಎಂಬ ಕಾರಣಕ್ಕೆ ತಮ್ಮ ಮಕ್ಕಳನ್ನು ತಾವೇ ದುಡಿಯುವ ಸರಕಾರಿ ಶಾಲೆಗೆ ಕಳುಹಿಸುವುದಿಲ್ಲವೇಕೆ? ಕಾರಣ ತಿಳಿಯುವ ಕೆಲಸ ಸರಕಾರ ಮಾಡಿದೆಯೇ? ಎಂದು ಪ್ರಶ್ನಿಸಿದರು.
ಕಸಾಪ ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಆಶಯ ಮಾತುಗಳನ್ನಾಡಿದರು. ನಿಕಟಪೂರ್ವ ಸಮ್ಮೇಳನ ಅಧ್ಯಕ್ಷರಾದಂತಹ ಪ್ರೊ. ಬಾಲಕೃಷ್ಣ ಶೆಟ್ಟಿ ಮೊಳಹಳ್ಳಿ ಕನ್ನಡ ಧ್ವಜವನ್ನು ಸಮ್ಮೇಳನಾಧ್ಯಕ್ಷರಿಗೆ ಹಸ್ತಾಂತರಿಸಿದರು. ಪುಸ್ತಕ ಮಳಿಗೆಯನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಲ್ಪಿ ಶ್ರೀ ಲಕ್ಷ್ಮಿನಾರಾಯಣ ಆಚಾರ್ಯ ನೆರವೇರಿಸಿದ್ದರು.
ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ, ಉದ್ಯಮಿ ಆನಂದ ಸಿ. ಕುಂದರ್, ಸ್ವಾಗತ ಸಮಿತಿಯ ಅಧ್ಯಕ್ಷರಾದ ರಮಣ ಉಪಾಧ್ಯಾಯ, ಡಾ. ಅಣ್ಣಯ್ಯ ಕುಲಾಲ್, ಕಾರ್ಯಾಧ್ಯಕ್ಷರಾದ ಕೆ. ರತ್ನಾಕರ್ ನಾಯಕ್, ಆರ್ಥಿಕ ಸಮಿತಿ ಸಂಚಾಲಕರಾದ ಗಣೇಶ್ ಪುತ್ರನ್, ಸಮ್ಮೇಳನ ಸ್ವಾಗತ ಸಮಿತಿ ಕಾರ್ಯದರ್ಶಿ ದಿನಕರ ಆರ್. ಶೆಟ್ಟಿ, ಅಕ್ಷತಾ ಗಿರೀಶ್, ನರೇಂದ್ರ ಕುಮಾರ್ ಕೋಟ, ಕ.ಸಾ.ಪ ಕಾಪು ತಾಲೂಕು ಅಧ್ಯಕ್ಷ ಪುಂಡಲೀಕ ಮರಾಠ, ಹೆಬ್ರಿ ತಾಲೂಕು ಅಧ್ಯಕ್ಷ ಶ್ರೀನಿವಾಸ ಭಂಡಾರಿ, ಕಾರ್ಕಳ ತಾಲೂಕು ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ, ಬ್ರಹ್ಮಾವರ ತಾಲೂಕು ಅಧ್ಯಕ್ಷ ರಾಮಚಂದ್ರ ಐತಾಳ ಉಪಸ್ಥಿತರಿದ್ದರು.
ತೆಂಕನಿಡಿಯೂರು ಸ.ಪ.ಪೂ.ಕಾಲೇಜು ಪ್ರಾಂಶುಪಾಲರಾದ ವಿಶ್ವನಾಥ ಕರಬ ಸಮ್ಮೇಳನಾಧ್ಯಕ್ಷರ ಪರಿಚಯಿಸಿದರು. ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ. ಉಮೇಶ ಪುತ್ರನ್ ಸ್ವಾಗತಿಸಿದರು. ಕ.ಸಾ.ಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು. ಗೌರವ ಕೋಶಾಧ್ಯಕ್ಷ ಕೆ. ಎಸ್. ಮಂಜುನಾಥ ವಂದಿಸಿದರು.

















