ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳು ಕಲಿಕೆ ಮಾತ್ರವಲ್ಲದೆ ಅನೇಕ ಮೌಲ್ಯಗಳು, ಶಿಸ್ತು, ಆತ್ಮವಿಶ್ವಾಸವನ್ನು ಮೈಗೂಡಿಸಿಕೊಳ್ಳಬೇಕೆಂಬ ಸದುದ್ದೇಶದಿಂದ ಪ್ರಾರಂಭವಾದ ಕ್ರಿಯೇಟಿವ್ ಸಂಸ್ಥೆಯ ವಿನೂತನ ಪರಿಕಲ್ಪನೆ ಕ್ರಿಯೇಟಿವ್ ಸ್ಫೂರ್ತಿ ಮಾತು ಕಾರ್ಯಕ್ರಮದ 15 ಸರಣಿ ಕಾರ್ಯಕ್ರಮವು ಸಪ್ತಗಿರಿ ವೇದಿಕೆಯಲ್ಲಿ ಜರುಗಿತು.

ಖ್ಯಾತ ವಾಗ್ಮಿಗಳು, ರಾಷ್ಟ್ರೀಯ ಜೆಸಿಐ ತರಬೇತುರಾರರಾದ ಕೆ. ರಾಜೇಂದ್ರ ಭಟ್ ಕಾರ್ಯಕ್ರಮವನ್ನು ನಡೆಸಿಕೊಟ್ಟು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅನೇಕ ಸಾಮರ್ಥ್ಯಗಳಿವೆ ಅದನ್ನು ಶೋಧಿಸಿ ಹೊರತೆಗೆದಾಗ ಅವರಿಗೆ ತಮ್ಮ ಸಾಮರ್ಥ್ಯದ ಅರಿವು ಉಂಟಾಗುತ್ತದೆ. ಓದು ಅನ್ನುವುದು ಭಾವನಾತ್ಮಕವಾದಾಗ ಅದು ಸಾರ್ಥಕತೆಯನ್ನು ಪಡೆಯುತ್ತದೆ. ತಾಳ್ಮೆ ವಿದ್ಯಾರ್ಥಿಯನ್ನು ಉತ್ತುಂಗ ಮಟ್ಟಕ್ಕೆ ಕೊಂಡೊಯ್ಯುತ್ತದೆ. ವಿದ್ಯಾರ್ಥಿಗಳು ನಿರ್ಭೀತಿಯಿಂದ ಕೆಲಸ ಕಾರ್ಯಗಳನ್ನು ಮಾಡಿದಾಗ ಯಶಸ್ಸನ್ನು ಕಾಣಲು ಸಾಧ್ಯ. ಸರಳ ಜೀವನ ಶೈಲಿಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕೆಂದು ವಿವಿಧ ಪ್ರಾತ್ಯಕ್ಷಿಕೆ ಗಳ ಮೂಲಕ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.
ಕಾರ್ಯಕ್ರಮದಲ್ಲಿ ಕ್ರಿಯೇಟಿವ್ ಕಾಲೇಜಿನ ಸಹ ಸಂಸ್ಥಾಪಕರಾದ ಡಾ. ಗಣನಾಥ ಶೆಟ್ಟಿ ಅವರು ಸಂಸ್ಥೆಯಲ್ಲಿ ನಡೆಯುವ ಪಾಠ ಪ್ರವಚನಗಳು ಹಾಗೂ ಶೈಕ್ಷಣಿಕ ವರ್ಷದಲ್ಲಿ ನಡೆಯುವ ಅನೇಕ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು. ವಿದ್ಯಾರ್ಥಿ ವೃಂದ, ಉಪನ್ಯಾಸಕ ವರ್ಗ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಉಪನ್ಯಾಸಕರಾದ ಲಕ್ಷ್ಮಿಕಾಂತ್ ಕಾರ್ಯಕ್ರಮ ನಿರೂಪಿಸಿದರು.











