ಕುಂದಾಪ್ರ ಡಾಟ್ ಕಾಂ ಸದ್ದಿ.
ಕೋಟ: ಪ್ರತಿಯೊಂದು ವಿದ್ಯಾರ್ಥಿಯು ತನ್ನದೇ ಆದ ಗುಣವಿಶೇಷತೆಗಳನ್ನು ಹೊಂದಿರುತ್ತಾನೆ. ಅದನ್ನು ಆತ ಅರಿತು ತನ್ನಲ್ಲಿ ಅವಿರತ ಪ್ರಯತ್ನ, ಪರಿಶ್ರಮ, ಅಧ್ಯಯನ ಶೀಲತೆ ಮೈಗೂಡಿಸಿಕೊಂಡರೆ ಸಾಧಕನಾಗಬಹುದು. ಈ ಸಾಧನೆಗೆ ನಿಮ್ಮ ಸುತ್ತಮುತ್ತಲಿನ ಪರಿಸರದ ವ್ಯಕ್ತಿಗಳು, ಪೋಷಕರು, ಶಿಕ್ಷಕರು ಪ್ರೇರಣೆಯಾಗಬಹುದು. ಶೈಕ್ಷಣಿಕ ಸಂತ ಕೆ.ಎಲ್. ಕಾರಂತರ ಬದುಕು ನಮಗೆ ಆದರ್ಶವಾಗಲಿ ಎಂದು ಪೂರ್ಣಪ್ರಜ್ಞ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಡಾ| ಅನಂತ ಪದ್ಮನಾಭ ಭಟ್ ನುಡಿದರು.
ಅವರು ಇತ್ತೀಚಿಗೆ ವಿವೇಕ ಆಂಗ್ಲಮಾಧ್ಯಮ ಪ್ರೌಢಶಾಲೆಯ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ಕೃಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾದ 89 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕೋಟ ವಿದ್ಯಾಸಂಘದ ಅಧ್ಯಕ್ಷರಾದ ಪಿ. ಭಾಸ್ಕರ ಹಂದೆ ವಹಿಸಿದ್ದರು. ಕೋಟ ವಿದ್ಯಾಸಂಘದ ಕಾರ್ಯದರ್ಶಿ ಎಂ. ರಾಮದೇವ ಐತಾಳ್ ಶುಭಾಶಂಸನೆಗೈದರು. ಆಡಳಿತ ಮಂಡಳಿಯ ಸದಸ್ಯರಾದ ಶ್ರೀಪತಿ ಹೇರ್ಳೆ, ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಚೇಂಪಿ ರಮಾನಂದ ಭಟ್ ಹಿತನುಡಿಗೈದರು. ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದ ಚೈತನ್ಯಶ್ರೀ ಉಡುಪ, ನಾಲ್ಕನೆಯ ಸ್ಥಾನವನ್ನು ಪಡೆದ ಸಂಕಲ್ಪ ಕುಮಾರ್ ಹಾಗೂ ಹತ್ತನೆಯ ಸ್ಥಾನವನ್ನು ಪಡೆದ ಅಭಯ ಸೋಮಯಾಜಿ, ಸಮೃದ್ಧಿ ಪೈ, ಸೃಜನಿ ಇವರನ್ನು ಪುರಸ್ಕರಿಸಲಾಯಿತು.
ಜೊತೆ ಕಾರ್ಯದರ್ಶಿ ಪಿ. ಮಂಜುನಾಥ ಉಪಾಧ್ಯ, ಆಡಳಿತ ಮಂಡಳಿಯ ಸದಸ್ಯರಾದ ವಸಂತ ಶೆಟ್ಟಿ, ಪ್ರಾಂಶುಪಾಲರಾದ ಜಗದೀಶ ನಾವಡ, ಮುಖ್ಯ ಶಿಕ್ಷಕರಾದ ವೆಂಕಟೇಶ ಉಡುಪ, ಪ್ರೇಮಾನಂದ ಉಪಸ್ಥಿತರಿದ್ದರು.
ಶಿಕ್ಷಕಿ ಸುಜಾತ ಕಾರ್ಯಕ್ರಮವನ್ನು ನಿರೂಪಿಸಿ, ಮುಖ್ಯೋಪಾಧ್ಯಾಯಿನಿ ಪ್ರೀತಿರೇಖಾ ಸ್ವಾಗತಿಸಿ, ಶಿಕ್ಷಕಿ ಅನಿತಾ ಡಿಸೋಜ ವಂದಿಸಿದರು.
















