ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ವಕ್ವಾಡಿ ಗುರುಕುಲ ಪಬ್ಲಿಕ್ ಸ್ಕೂಲ್ನಲ್ಲಿ ವಿದ್ಯಾರ್ಥಿ ಸಂಸತ್ ಪದಗ್ರಹಣ ಕಾರ್ಯಕ್ರಮವು ಗುರುವಾರ ನಡೆಯಿತು.
ನಾಯಕತ್ವ ಗುಣವನ್ನು ಬೆಳೆಸಿಕೊಂಡು ಸುಸ್ಥಿರ ಸಮಾಜದ ರಚನೆಗೆ ಪ್ರೇರಣೆ ನೀಡುವ ಈ ಕಾರ್ಯಕ್ರಮವನ್ನು ಕುಂದಾಪುರ ಪೊಲೀಸ್ ಇಲಾಖೆಯ ಸಬ್ ಇನ್ಸ್ಪೆಕ್ಟರ್ ಅನೂಪ್ ನಾಯಕ್ ಅವರು ಉದ್ಘಾಟಿಸಿ ಮಾತನಾಡಿ, ಜನಸೇವೆಯೇ ಜನಾರ್ದನ ಸೇವೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅವಧಿಯಲ್ಲಿ ಶಿಸ್ತು ಮತ್ತು ಸಂಯಮವನ್ನ ಪಾಲಿಸಿ, ಕಾನೂನು ವ್ಯವಸ್ಥೆ ಮತ್ತು ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ವಿದ್ಯಾರ್ಥಿ ಸಂಸತ್ತಿನಲ್ಲಿ ಕಲಿತ ಪಾಠ ಮುಂದೆ ಜೀವನದಲ್ಲಿಯೂ ಅಮೂಲ್ಯ ಪಾತ್ರವನ್ನು ವಹಿಸಬೇಕು. ಕಾನೂನು ವ್ಯವಸ್ಥೆಯನ್ನು ಕಾಪಾಡುವಲ್ಲಿ ಸಾಮಾನ್ಯರಿಗೆ ಪೊಲೀಸ್ ಅಂದರೆ ಭಯವಿರದೆ ಭರವಸೆ ಎಂಬ ಭಾವವಿರಬೇಕೆಂದರು.

ಸಭಾಧ್ಯಕ್ಷತೆ ವಹಿಸಿದ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಅನುಪಮಾ ಎಸ್. ಶೆಟ್ಟಿ ಅವರು ಮಾತನಾಡಿ, ನಾವು ರೂಢಿಸಿಕೊಂಡ ಶಿಸ್ತು ನಮ್ಮ ಜೀವನವನ್ನು ಪಾವನವಾಗಿಸುತ್ತದೆ. ವಿದ್ಯಾರ್ಥಿಗಳು ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತರೆ ಉತ್ತಮವಾಗಿ ಬದುಕಲು ಸಾಧ್ಯ. ವಿದ್ಯಾರ್ಥಿ ಸಂಸತ್ತಿನಿಂದ ಕಲಿತಂತಹ ಪ್ರತಿಯೊಂದು ಉತ್ತಮ ವಿಚಾರಗಳು ನಿಮ್ಮ ಬದುಕಿಗೆ ಹೊಸ ದಿಕ್ಕನ್ನು ನೀಡಲಿ ಎಂದು ಹಾರೈಸಿದರು.
ಪ್ರಾಂಶುಪಾಲರಾದ ಡಾ. ರೂಪಾ ಶೆಣೈ ಅವರು ವಿದ್ಯಾರ್ಥಿ ಸಂಸತ್ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ, ಕಾರ್ಯಕ್ರಮಕ್ಕೆ ಶುಭ ಕೋರಿದರು. ಶಿಕ್ಷಕಿ ಸಹನ ಅತಿಥಿಗಳನ್ನು ಪರಿಚಯಿಸಿ, ಸುಮಲತಾ ಎಸ್. ಭಂಡಾರಿ ಕಾರ್ಯಕ್ರಮ ನಿರೂಪಿಸಿ, ಪ್ರಿಯಾಂಕ ಸ್ವಾಗತಿಸಿ, ವಿದ್ಯಾರ್ಥಿ ನಾಯಕ ಪ್ರಥಮ್ ವಂದಿಸಿದರು.
















