ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಅಂಗನವಾಡಿ ಕೇಂದ್ರಗಳು ಮಗುವಿನ ಮನೋವಿಕಾಸದ ಕೇಂದ್ರಗಳಾಗಬೇಕು ಆಗ ಮಾತ್ರ ಅಂಗನವಾಡಿ ಕೇಂದ್ರಗಳು ಭವಿಷ್ಯಕ್ಕೆ ಮುನ್ನುಡಿ ಬರೆಯಲು ಸಾಧ್ಯ. ಈ ದಿಸೆಯಲ್ಲಿ ಕಲ್ಮಾಡಿ ಅಂಗನವಾಡಿ ಕೇಂದ್ರ ಅಭಿವೃದ್ಧಿಯತ್ತ ದಾಪುಗಾಲು ಇರಿಸಿದೆ ಎಂದು ಕೋಟತಟ್ಟು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಕಾರಂತ ಥೀಂ ಪಾಕ್೯ನಲ್ಲಿರುವ ಕೋಟತಟ್ಟು ಕಲ್ಮಾಡಿ ಅಂಗನವಾಡಿ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿ ಪೂರ್ವ ಪ್ರಾಥಮಿಕ ಶಿಕ್ಷಣ ಕೇಂದ್ರ ಎಲ್ ಕೆಜಿ, ಯುಕೆಜಿ ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದರು. ಪ್ರಾಥಮಿಕ ಹಂತದಲ್ಲಿ ಮಗುವಿಗೆ ನೈಜ ಸಂಸ್ಕಾರಭರಿತ ಶಿಕ್ಷಣ ನೀಡುವ ಜೊತೆಗೆ ಶಿಕ್ಷಕಿಯ ನಡುವೆ ತಾಯ್ತನದ ಸಂಬಂಧವನ್ನು ಗಟ್ಟಿಗೊಳಿಸುತ್ತದೆ. ಅದೇ ರೀತಿ ಕಾರಂತ ಥೀಮ್ ಪಾಕ್೯ನಲ್ಲಿರುವ ಕಲ್ಮಾಡಿ ಅಂಗನವಾಡಿ ಕೇಂದ್ರ ಪ್ರಸಿದ್ಧ ಪಡೆದು ಸಾಕಷ್ಟು ಮಕ್ಕಳನ್ನು ತನ್ನತ್ತ ಆಕರ್ಷಿಸಿ ಮೇಲ್ದರ್ಜೆಯ ಕೇಂದ್ರವಾಗಿಸಿಕೊಂಡಿದೆ ಇದು ಶ್ಲಾಘನೀಯ ಕಾರ್ಯ ಎಂದರು.
ಎಲ್ ಕೆಜಿ ,ಯುಕೆಜಿ ಕೇಂದ್ರವನ್ನು ಕಾರಂತ ಪ್ರತಿಷ್ಠಾನದ ಸದಸ್ಯ ಎಂ. ಸುಬ್ರಾಯ ಆಚಾರ್ಯ ಉದ್ಘಾಟಿಸಿ ಶುಭಹಾರೈಸಿದರು.
ಇದೇ ವೇಳೆ ಪೋಷಣ್ ಮಾಸಾಚರಣೆ ಅಂಗವಾಗಿ ಸೀಮಂತ ಕಾರ್ಯಕ್ರಮ, ಪಂಚವರ್ಣ ಸಂಘಟನೆ ಕೋಟ ಇವರಿಂದ ಪರಿಸರ ಜಾಗೃತಿಯ ಹಸಿರು ಹೆಜ್ಜೆ ಮೂಲಕ ಮಕ್ಕಳಿಗೆ ಗಿಡವಿತರಿಸಲಾಯಿತು. ಅಲ್ಲದೆ ದಾನಿಗಳ ಮೂಲಕ ಪಡೆದ ಸಮವಸ್ತವನ್ನು ಕೋಟ ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಮಕ್ಕಳಿಗೆ ವಿತರಿಸಿದರು.
ಕಾರ್ಯಕ್ರಮದಲ್ಲಿ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಶಿಲ್ಪ ರಾಜೇಶ್, ಕೋಟತಟ್ಟು ಪಂಚಾಯತ್ ಕಾರ್ಯದರ್ಶಿ ಸುಮತಿ ಅಂಚನ್ ಮತ್ತಿತರರು ಉಪಸ್ಥಿತರಿದ್ದರು. ಮಕ್ಕಳ ಪೋಷಕರು ಭಾಗಿಯಾದರು. ಕಾರ್ಯಕ್ರಮವನ್ನು ಅಂಗನವಾಡಿ ಕೇಂದ್ರದ ಶಿಕ್ಷಕಿ ಜಯಲಕ್ಷ್ಮೀ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಸಹಾಯಕಿ ಶೈಲಜ ಸಹಕರಿಸಿದರು.
















