ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಿವಮೊಗ್ಗದಲ್ಲಿ 2026ರ ಜುಲೈ 17 ರಿಂದ 19ರವರೆಗೆ ನಡೆದ ಕರ್ನಾಟಕ ರಾಜ್ಯ ಅಂಡರ್-17 ಬಾಲಕಿಯರ ಫಿಡೆ ರೇಟೆಡ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆರಾಧ್ಯ ಎಸ್. ಶೆಟ್ಟಿ ಅವರು ಅಂಡರ್-17 ರಾಷ್ಟ್ರೀಯ ಚೆಸ್ ಚಾಂಪಿಯನ್ಶಿಪ್ಗೆ ಕರ್ನಾಟಕವನ್ನು ಪ್ರತಿನಿಧಿಸಲು ಅರ್ಹತೆ ಪಡೆದಿದ್ದಾರೆ.

ರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಅಂಡರ್-17 ರಾಷ್ಟ್ರೀಯ ಬೆಳ್ಳಿ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದ ಆರಾಧ್ಯ, ಇದೀಗ ಮತ್ತೊಮ್ಮೆ ರಾಷ್ಟ್ರೀಯ ಚಾಂಪಿಯನ್ಶಿಪ್ಗೆ ಅರ್ಹತೆ ಪಡೆಯುವ ಮೂಲಕ ತಮ್ಮ ಪ್ರತಿಭೆ, ಶಿಸ್ತು, ಪರಿಶ್ರಮ ಮತ್ತು ಸಮರ್ಪಣೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
ಟೂರ್ನಮ್ನೆಟ್ ಆರಂಭದಿಂದಲೇ ಆರಾಧ್ಯ ಅತ್ಯುತ್ತಮ ಆಟವನ್ನು ಪ್ರದರ್ಶಿಸಿದರು. ಕರ್ನಾಟಕ ಅಂಡರ್-19 ತಂಡವನ್ನು ಪ್ರತಿನಿಧಿಸಿದ್ದ ಹಾಗೂ ಬೆಂಗಳೂರು ಅರ್ಬನ್ AFM ದೀಪ್ತಾ ಶ್ರೀನಿವಾಸ್ ಅವರನ್ನು ಸೋಲಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಎಲ್ಲರಿಗೂ ತೋರಿಸಿದರು.
7ನೇ ಸುತ್ತಿನಲ್ಲಿ, ಮಂಗಳೂರಿನ 1884 ರೇಟಿಂಗ್ ಹೊಂದಿರುವ ಆರುಶ್ರಿ ಸೆವೆರಿನ್ ಹೆಲೆನ್ ಡಿ ವಿರುದ್ಧ ಅತ್ಯುತ್ತಮ ಮಧ್ಯದಾಟ (Middlegame) ಪ್ರದರ್ಶಿಸಿದರೂ, ಕೊನೆಯ ಹಂತದಲ್ಲಿ ನಡೆದ ಸಣ್ಣ ತಾಂತ್ರಿಕ ತಪ್ಪಿನಿಂದ ಪಂದ್ಯವನ್ನು ಕಳೆದುಕೊಂಡರು.
ಆದರೆ, ನಿಜವಾದ ಚಾಂಪಿಯನ್ನ ಗುಣವನ್ನು ತೋರಿದ ಆರಾಧ್ಯ ಯಾವುದೇ ನಿರಾಶೆಗೆ ಒಳಗಾಗದೆ 8ನೇ ಸುತ್ತಿನಲ್ಲಿ 1547 ರೇಟಿಂಗ್ ಹೊಂದಿದ್ದ ದ್ರಿಥಿ ವಿ ಚಿತ್ರದುರ್ಗ ಅವರನ್ನು ಸೋಲಿಸಿ ಅದ್ಭುತವಾಗಿ ಪುನರಾಗಮನ ಮಾಡಿದರು.
ಅತ್ಯಂತ ನಿರ್ಣಾಯಕವಾಗಿದ್ದ ಕೊನೆಯ ಸುತ್ತಿನಲ್ಲಿ, 1751 ರೇಟಿಂಗ್ ಹೊಂದಿರುವ ಸಿಮ್ರಾ ನದಾಫ್ ಧಾರವಾಡ ಅವರನ್ನು ಮಣಿಸಿ ಅದ್ಭುತ ಗೆಲುವು ದಾಖಲಿಸುವ ಮೂಲಕ ಕರ್ನಾಟಕವನ್ನು ಪ್ರತಿನಿಧಿಸಿ ಅಂಡರ್-17 ರಾಷ್ಟ್ರೀಯ ಚೆಸ್ ಚಾಂಪಿಯನ್ಶಿಪ್ಗೆ ಅಧಿಕೃತವಾಗಿ ಅರ್ಹತೆ ಪಡೆದರು.
ಆರಾಧ್ಯ ಎಸ್. ಶೆಟ್ಟಿ ಅವರು ಕುಂದಾಪುರದ ಕಶ್ವಿ ಚೆಸ್ ಸ್ಕೂಲ್ನ ವಿದ್ಯಾರ್ಥಿನಿ ಆಗಿದ್ದಾಳೆ.
















