ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇತ್ತೀಚೆಗೆ ಪ್ರಕಟಗೊಂಡ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ತಾಲೂಕಿನ ಕೆಂಚನೂರಿನ ಸಾಧಕ, ಉಪನ್ಯಾಸಕ, ಬರಹಗಾರ ಡಾ. ಪ್ರದೀಪ್ ಕುಮಾರ ಶೆಟ್ಟಿ ಅವರಿಗೆ ಸ್ವರ್ಣಕಮಲ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಅವರ ಬರಹ ‘ನಾನಿರುವುದು ನಮಗಾಗಿ ನಾಡಿರುವುದು ನಮಗಾಗಿ- ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ’ ಕೃತಿಯು ಅತ್ಯುನ್ನತ ಪ್ರಶಸ್ತಿ ಗೆದ್ದುಕೊಂಡಿದೆ. ಚಲನಚಿತ್ರ ಕುರಿತ ಅತ್ಯುತ್ತಮ ಕೃತಿಗೆ ನೀಡಲಾಗುವ ಈ ಪ್ರಶಸ್ತಿಯು ಕನ್ನಡ ಸಾಹಿತ್ಯ ಲೋಕಕ್ಕೆ ಅಷ್ಟೇ ಅಲ್ಲ ಕರಾವಳಿಗೆ ಸಂದ ಬಹುದೊಡ್ಡ ಗೌರವಾಗಿದೆ.
ಮಂಗಳೂರು ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪ್ರದೀಪ್ ಅವರು, ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ‘ಕನ್ನಡ ಸಿನಿಮಾದ ಸೈದ್ಧಾಂತಿಕತೆ ಮತ್ತು ಸಾಂಸ್ಕೃತಿಕ ಪ್ರಶ್ನೆಗಳು’ ವಿಷಯದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಪ್ರಸ್ತುತ ಸುಳ್ಯದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತಿಹಾಸ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪುಣೆಯ ಪ್ರತಿಷ್ಠಿತ ಎಫ್ ಟಿಐಐ ನಿಂದ ಫಿಲ್ಡ್ ಅಫ್ರಿಸಿಯೇಶನ್ ಕೋರ್ಸ್, ಕೋಲೊತ್ತಾದ ಎಸ್ಆರ್ಎಫ್ಟಿಐಐ ನಿಂದ ಧ್ವನಿ ಕೋರ್ಸ್ ಪೂರ್ಣಗೊಳಿಸಿದ್ದಾರೆ. ಈವರೆಗೆ ಸಿನಿಮಾ ಮತ್ತು ಚರಿತ್ರೆಗೆ ಸಂಬಂಧಿಸಿದಂತೆ 50ಕ್ಕೂ ಹೆಚ್ಚು ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.
ಪ್ರದೀಪ್ ಅವರು ರಾಷ್ಟ್ರಪ್ರಶಸ್ತಿ ವಿಜೇತ ‘ರಿಸರ್ವೇಶನ್’ ಚಿತ್ರಕ್ಕೆ ಕಥೆ- ಚಿತ್ರಕಥೆ ಬರೆಯುವಲ್ಲಿಯೂ ಸಹಕರಿಸಿದ್ದರು. ಬರಹದ ಜೊತೆಗೆ ಮೊದಲ ಬಾರಿಗೆ ಆಕ್ಷನ್ – ಕಟ್ ಹೇಳಿದ ʼದಿ ಹಗ್ ಅರ್ಫ ಎಂಪಿನೆಸ್ʼ ಸಾಕ್ಷ್ಯಚಿತ್ರಕ್ಕೆ 19ನೇ ಮುಂಬಯಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಅಂತಾರಾಷ್ಟ್ರೀಯ ‘ಎಫ್ಐಪಿಆರ್ಇಎಸ್ಸಿಐ’ ವಿಮರ್ಶಕರ ಪ್ರಶಸ್ತಿ ಪಡೆದಿದ್ದರು.
ಇದನ್ನೂ ಓದಿ ► ಡಾ. ಪ್ರದೀಪ್ ಕೆಂಚನೂರು ಅವರಿಗೆ ಅಂತರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ – https://kundapraa.com/?p=98971 .
















