ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ದೇಶದಲ್ಲಿ ಜನ್ ಜೀ ಹೆಸರಿನ ಮೂಲಕ ವಿದ್ಯಾರ್ಥಿ ಜೀವನ ಅತಂತ್ರವಾಗುತ್ತಿದೆ, ತಾವೇನು ಮಾಡುತ್ತಿದ್ದೇವೆ ಎಂಬ ಅರಿವೆ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತಿದೆ ಇದಕ್ಕೆ ಕಾರಣ ನಮ್ಮ ಶಿಕ್ಷಣ ನೀತಿ ಇದರ ಬದಲಾವಣೆ ಅಗತ್ಯವಾಗಿದೆ ಎಂದು ಶಿಕ್ಷಣ ತಜ್ಞ, ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ. ಜಗದೀಶ ನಾವಡ ಹೇಳಿದರು.
ಅವರು ಶನಿವಾರ ಕೋಟದ ಪಂಚವರ್ಣ ಯುವಕ ಮಂಡಲ ಮತ್ತು ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಕೋಟತಟ್ಟು ಪರಿಸರದ ನಿವೃತ್ತ ಪ್ರಾಂಶುಪಾಲ ಸೀತಾರಾಮ ಮಧ್ಯಸ್ಥ ಇವರಿಗೆ ಪಂಚವರ್ಣ ಗುರುವಂದನೆ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನಾಡಿದರು.
ಜೀವಲನದ ಮೌಲ್ಯಗಳನ್ನು ಕಲಿಸುವ ಮೌಲ್ಯಾಧಾರಿತ ಶಿಕ್ಷಣದ ಕೊರತೆ ಇಂದು ಎದ್ದು ಕಾಣುತ್ತಿದೆ ಮಕ್ಕಳಲ್ಲಿ ಕೌಶಲ್ಯ ಇಲ್ಲದಿರುವುದು ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಈ ಹಿನ್ನಲೆಯಲ್ಲಿ ಸರಕಾರ ಅಥವಾ ಇಲಾಖೆ ಗಮನ ಹರಿಸಿದರೆ ಮುಂದಿನ ದಿನಗಳಲ್ಲಿ ನೈಜ ವಿದ್ಯಾಸಂಪತ್ತನ್ನು ಸೃಷ್ಠಿಸಲು ಸಾಧ್ಯ ಎಂದರಲ್ಲದೆ ಪಂಚವರ್ಣ ಪ್ರತಿ ಸಾಮಾಜಿಕ ಹೆಜ್ಜೆ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದರು.
ಕಾರ್ಯಕ್ರಮವನ್ನು ಕೋಟ ವಿವೇಕ ವಿದ್ಯಾಸಂಸ್ಥೆಯ ನಿವೃತ್ತ ಪ್ರಾಂಶುಪಾಲ ನಾಗೇಶ್ ಶ್ಯಾನುಭಾಗ್ ದೀಪ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ ವಹಿಸಿದ್ದರು.
ಇದೇ ವೇಳೆ ಸೀತಾರಾಮ ಮಧ್ಯಸ್ಥರನ್ನು ಕೋಟ ವಿವೇಕ ಆಂಗ್ಲ ಮಾಧ್ಯಮ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ಶ್ರೀಪತಿ ಹೇರ್ಳೆ ಶಾಲು ಹೋದಿಸಿ ಗೌರವಿಸಿದರು.ಅದೇ ರೀತಿ ಸಂಘಟನೆ ಪದಾಧಿಕಾರಿಗಳು ಸದಸ್ಯರು ಗುರುವಂದನೆ ಸಲ್ಲಿಸಿಕೊಂಡರು.
ಈ ಸಂದರ್ಭದಲ್ಲಿ ಪಂಚವರ್ಣ ಸಂಘಟನೆಯ ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಉಪಸ್ಥಿತರಿದ್ದರು. ಸನ್ಮಾನ ಪತ್ರವನ್ನು ಐರೋಡಿ ಗ್ರಾ.ಪಂ ಕಾರ್ಯದರ್ಶಿ ಪೂರ್ಣಿಮಾ ಅಧಿಕಾರಿ ವಾಚಿಸಿದರು. ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಹಿಳಾ ಮಂಡಲದ ವೀಣಾ ಪ್ರಕಾಶ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್ ನಿರೂಪಿಸಿದರು. ಮಹಿಳಾ ಮಂಡಲದ ಜೊತೆಕಾರ್ಯದರ್ಶಿ ಶಕೀಲ ನಾಗರಾಜ್ ವಂದಿಸಿದರು. ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.
















