ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಉಪ್ಪುಂದದ ಮೂರ್ತೆದಾರರ ಸೇವಾ ಸಹಕಾರಿ ಸಂಘದ 35ನೇ ಮಹಾಸಭೆ ಸೆ.6ರಂದು ಶಾಲೆಬಾಗಿಲು ಮಾತೃಶ್ರಿ ಸಭಾಭವನದಲ್ಲಿ ಜರುಗಿತು.
ಸಹಕಾರಿ ಅಧ್ಯಕ್ಷ ಮೋಹನ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವ್ಯವಹಾರದ ಪೈಪೋಟಿಗಳ ನಡುವೆ ನಮ್ಮ ಸಹಕಾರಿ ಸಂಸ್ಥೆ ಉತ್ತಮ ಜನಮನ್ನಣೆ ಗಳಿಸಿ ವರದಿ ವರ್ಷದಲ್ಲಿ ರೂ. 179.93 ಕೋಟಿಯಷ್ಟು ವ್ಯವಹಾರ ನಡೆಸಿ, 5.14 ಕೋಟಿ ರೂ. ಆದಾಯ ಹಾಗೂ 63.44 ಲಕ್ಷ ರೂ. ನಿವ್ವಳ ಲಾಭಗಳಿಸಿದೆ. ಮುಂದಿನ ವರ್ಷ 200 ಕೋಟಿ ರೂ. ವ್ಯವಹಾರದ ಗುರಿ ಹೊಂದಿದ್ದೇವೆ. ಈ ಬಾರಿ ಶೇ.12ರಷ್ಟು ಡಿವಿಡೆಂಡ್ ನೀಡಲಾಗುತ್ತಿದ್ದು, ಪಡೆದ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವ ಸದಸ್ಯರಿಗೆ ಶೇ.0.75ರಷ್ಟು ಬಡ್ಡಿ ರಿಯಾಯಿತಿ ನೀಡಲು ನಿರ್ಧರಿಸಲಾಗಿದೆ ಎಂದರು.
ಸಹಕಾರಿಯ ಕಲ್ಪತರು ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರಿಗೆ ಮಾಹಿತಿ ಶಿಬಿರ ಹಾಗೂ ಸಂಘಗಳಿಗೆ ಸಾಲ ಸೌಲಭ್ಯ ನೀಡಿ, ವ್ಯವಹಾರ ಹೆಚ್ಚಿಸಲಾಗುವುದು 192 ಕಲ್ಪತರು ಮಹಿಳಾ ಸ್ವ-ಸಹಾಯ ಗುಂಪುಗಳನ್ನು ಹೊಂದಿದ್ದು, ಮಹಿಳಾ ಸಶಕ್ತಿಕರಣಕ್ಕಾಗಿ ಸಾಲ ಸೌಲಭ್ಯ ನೀಡಲಾಗಿದೆ. ಸ್ವಸಹಾಯ ಗುಂಪುಗಳ ಸಾಲದಲ್ಲಿ ಶೇ. 99.32ರಷ್ಟು ವಸೂಲಾತಿ ಆಗಿದೆ ಎಂದರು.
ಕಳೆದ ಬಾರಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಪಡೆದ ಸಂಘದ ಸದಸ್ಯ ಮಕ್ಕಳನ್ನು ಸನ್ಮಾನಿಸಿ, ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು.
ಉಪಾಧ್ಯಕ್ಷ ತಿಮ್ಮಪ್ಪ ಪೂಜಾರಿ, ನಿರ್ದೇಶಕರಾದ ಎಚ್. ನರಸಿಂಹ ಪೂಜಾರಿ, ಬಿ.ನಾರಾಯಣ ಪೂಜಾರಿ, ಮಂಜ ಪೂಜಾರಿ, ರಾಜು ಪೂಜಾರಿ, ಸುರೇಶ ಪೂಜಾರಿ, ಸಂತೋಷ, ಶಾರದಾ, ಲಕ್ಷ್ಮೀ ಉಪಸ್ಥಿತರಿದ್ದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಎಚ್. ವಾರ್ಷಿಕ ವರದಿ, ಲೆಕ್ಕಪತ್ರ, ಮುಂದಿನ ವರ್ಷದ ಅಂದಾಜು ಆಯವ್ಯಯ ಪತ್ರ ಮಂಡಿಸಿದರು.
















