ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಪ್ರಸ್ತುತ ಆಧುನಿಕ ಕಾಲದ ಆಹಾರ ಕ್ರಮಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಅನಾರೋಗ್ಯಕ್ಕಿಡಾಗುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರೇಮಮೂರ್ತಿ ಹೇಳಿದರು.
ಅವರು ಕೋಟ ಗ್ರಾಮಂಚಾಯತ್ ಸಭಾಂಗಣದಲ್ಲಿ ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ, ಶಿಶು ಅಭಿವೃದ್ಧಿ ಯೋಜನೆ ಬ್ರಹ್ಮಾವರ, ತಾಲೂಕು ಪಂಚಾಯತ್ ಬ್ರಹ್ಮಾವರ, ಸಮುದಾಯ ಆರೋಗ್ಯ ಕೇಂದ್ರ ಕೋಟ ಹಾಗೂ ಗ್ರಾಮ ಪಂಚಾಯತ್ ಕೋಟ ಇವುಗಳ ಸಂಯುಕ್ತ ಆಶ್ರಯದಲ್ಲಿ ಪೋಷಣ್ ಅಭಿಯಾನ ಹಾಗೂ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಂಕ್ ಫುಡ್ ಸೇವನೆ ಮನುಕುಲವನ್ನು ಕಂಗೆಡಿಸಿದ್ದು ಇದರಿಂದ ದೇಹದ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಅನುಭವಿಸುತ್ತಾ ಇದ್ದೇವೆ,ಆಗಿನ ಕಾಲದ ಆಹಾರ ಕ್ರಮಗಳು ಮನುಷ್ಯನ ಆರೋಗ್ಯವನ್ನು ಸಮೃದ್ಧಗೊಳಿಸಿದ್ದು ಇಂದಿನ ಪೋಷಣ್ ಮಾಸಾಚರಣೆಯಲ್ಲಿ ಕಂಡುಬರುವ ಸೊಪ್ಪು ತರಕಾರಿಗಳು ಗರ್ಭಿಣಿಯರಿಗೆ ಪೌಷ್ಟಿಕ ಆಹಾರದ ಭಾಗವಾಗಿದೆ ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಪೋಷಣ್ ಮಾಸಾಚರಣೆ ಅರ್ಥಪೂರ್ಣವಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಭಾಗದಲ್ಲಿರುವ ಗರ್ಭಿಣಿಯರಿಗೆ ಸೀಮಂತ ಶಾಸ್ತ್ರವನ್ನು ವೇದಿಕೆಯಲ್ಲಿದ್ದ ಗಣ್ಯರು ನೇರವೆರಿಸಿದರು. ಅನ್ನಪ್ರಾಶನ, ವ್ಯಾಪ್ತಿಯ ಕೆಲ ಮಕ್ಕಳ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ಗೀಡಕ್ಕೆ ನೀರೆರವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಭೆಯಲ್ಲಿ ವಿಶೇಷವಾಗಿ ಸೊಪ್ಪು ತರಕಾರಿಗಳು,ಹಣ್ಣು ಹಂಪಲು,ಬೆಳೆಕಾಳುಗಳು ಸೇರಿದಂತೆ ರಂಗೋಲಿ ಚಿತ್ರಗಳು ಗಮನ ಸೆಳೆದವು. ಕೋಟ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಾಧವ ಪೈ ಆರೋಗ್ಯದ ಕುರಿತಾಗಿ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ನಿರೂಪಣಾಧಿಕಾರಿ ಅನುರಾಧ ಹಾದಿಮನೆ, ಕೋಟ ಪಂಚಾಯತ್ ಲೆಕ್ಕಾಧಿಕಾರಿ ಶೇಖರ್ ಮರವಂತೆ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಆಶಾದೇವಿ ನಾಯಕ್ ಉಪಸ್ಥಿತರಿದ್ದರು.
ಹಿರಿಯ ಮೇಲ್ವಿಚಾರಕಿ ಸಿಂಧೂ ಶೆಟ್ಟಿ ಸ್ವಾಗತಿಸಿದರು. ಕಾರ್ಯಕ್ರಮದ ಮೇಲುಸ್ತುವಾರಿ ವಿಜಯನಾರಾಯಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಕಲ್ಮಾಡಿ ಅಂಗನವಾಡಿ ಶಿಕ್ಷಕಿ ಜಯಲಕ್ಷ್ಮಿ ನಿರೂಪಿಸಿದರು. ಹಿರಿಯ ಮೇಲ್ವಿಚಾರಕಿ ಭಾಗಿರಥಿ ವಂದಿಸಿದರು.
















