ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ
ಆಧುನಿಕತೆಯತ್ತ ಮುಖಮಾಡಿರುವ ಮಾನವರು ತಮ್ಮ ಸಂಸ್ಕೃತಿ-ಸಂಪ್ರದಾಯಗಳನ್ನು ಮರೆತು ನಡೆಯುತ್ತಿರುವ ಹೊತ್ತಿನಲ್ಲಿಯೂ ಮರಾಠಿ, ಗೊಂಡ ಸಮುದಾಯದ ಹೋಳಿಕುಣಿತ ಹಾಗೂ ಹೊಳಿ ಹಬ್ಬ ಇಂದಿಗೂ ನಮ್ಮ ನಡುವಿನ ಸಂಪ್ರದಾಯ ಕೊಂಡಿಯಾಗಿ ಉಳಿದಿದೆ.
ಈ ಜನಾಂಗದ ಹೊಳಿ ಕುಣಿತ ಒಂದು ವಿಶಿಷ್ಟ ಜನಪದ ಕಲೆ. ಕುಂದಾಪುರ ತಾಲೂಕಿನ ಬೇರೆ ಬೇರೆ ಭಾಗಗಳಲ್ಲಿ ನೆಲೆಸಿರುವ ಮರಾಠಿಗರು ವರ್ಷಂಪ್ರತಿ ಶಿವರಾತ್ರಿಯ ಬಳಿಕ ನಿಷ್ಠೆಯಿಂದ ಹೋಳಿ ಆಚರಿಸುತ್ತಾರೆ. ಎಲ್ಲೂರು ಬಾಳಕೊಡ್ಲುವಿನ ಮರಾಠಿ ಸಮುದಾಯದವರು ಏಳು ದಿನಗಳ ಕಾಲ ಹೊಳಿಯನ್ನು ಸಂಭ್ರಮಿಸುತ್ತಾರೆ. ಎಲ್ಲೂರು ಸುತ್ತಲಿನ 47 ಮರಾಠಿ ಕುಟುಂಬಿಕರು ತಮ್ಮ ಗುರಿಕಾರರ ಮನೆಯಲ್ಲಿ ಸೇರಿ ಹಬ್ಬ ಆಚರಿಸುವ ಬಗ್ಗೆ ತಿರ್ಮಾನ ಕೈಗೊಂಡು, ಅದರಂತೆ ಸಮುದಾಯದ ದೇವರಾದ ಶ್ರೀ ಸಿದ್ದೇಶ್ವರನಿಗೆ ಪೂಜೆ ಸಲ್ಲಿಸಿ ದೇವರ ಅಣತಿಯಂತೆ ಮುಂದುವರಿಯುತ್ತಾರೆ. ಕುಂದಾಪ್ರ ಡಾಟ್ ಕಾಂ ವರದಿ
ಮನೆ ಮನೆ ತಿರುಗಾಟ, ಹಾಡು: ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಹೋಳಿ ಕುಣಿತಕ್ಕೆ ಮೂರು ತಂಡಗಳನ್ನು ರಚಿಸಿಕೊಂಡು ಮನೆ ಮನೆ ತಿರುಗಾಟ ಆರಂಭಿಸಲಾಗುತ್ತದೆ. ಈ ಸಂದರ್ಭದಲ್ಲಿ ಕೇಸರಿ ರುಮಾಲು, ಪಂಜೆ ಕೊಟ್ಟು ವಿಶೇಷ ವೇಷಭೂಷಣ ಧರಿಸಿ ತಿರುಗಾಡುತ್ತಾರೆ. ಪ್ರತಿ ಮನೆಯವರಿಂದ ಹಣ ಅಥವಾ ಅಕ್ಕಿ, ಕಾಯಿಯನ್ನು ಸ್ವೀಕರಿಸುವ ಮರಾಠಿ ಸಮುದಾಯ, ಮರಾಠಿ ಭಾಷೆಯಲ್ಲಿಯೇ ಹಾಡು ದಾನ ನೀಡಿದವರನ್ನು ಹೇಳಿ ಹೊಗಳುತ್ತಾರೆ. ಇದು ಆರು ದಿನಗಳ ಕಾಲ ನಿರಂತರವಾಗಿ ನಡೆಯುತ್ತದೆ. ಎಲ್ಲಾ ತಂಡಗಳು ಸಂಗ್ರಹಿಸಿದ ಹಣ ಹಾಗೂ ವಸ್ತುಗಳನ್ನು ಸಮುದಾಯದ ಮುಖಂಡನ ಮನೆಯನ್ನು ಸಂಗ್ರಹಿಸಲಾಗುತ್ತದೆ. ಏಳು ದಿನಗಳ ಕಾಲ ಯಾರೊಬ್ಬರೂ ತಮ್ಮ ತಮ್ಮ ಮನೆಗೆ ತೆರಳದೇ ಸಮುದಾಯ ಒಬ್ಬೊಬ್ಬರ ಮನೆಯಲ್ಲಿ ಊಟ ತಿಂಡಿಯನ್ನು ಒಟ್ಟಿಗೆ ಸೇವಿಸಿ ಸಾಮರಸ್ಯ ಮೆರೆಯುತ್ತಾರೆ. ಕುಂದಾಪ್ರ ಡಾಟ್ ಕಾಂ ವರದಿ
ಹೋಳಿ ನೃತ್ಯದಲ್ಲಿ ಒಂದೊಂದು ಸನ್ನಿವೇಶಕ್ಕೆ ತಕ್ಕಂತೆ ಹಾಡುಗಳಿದ್ದು, ಆಯಾ ಸಂದರ್ಭದಲ್ಲಿ ಒಂದೊಂದು ಹಾಡಲಾಗುತ್ತದೆ. ದೇವರ ಹಾಡು, ಕೋಲಾಟದ ಹಾಡು ಹೀಗೆ ವಿವಿಧ ಪ್ರಕಾರಗಳಿದ್ದು ಅದಕ್ಕೆ ಮದ್ದಳೆ ಹಾಗು ಗುಮ್ಟೆಯನ್ನು ವಾದ್ಯ ಪರಿಕರವಾಗಿ ಬಳಸಲಾಗುತ್ತದೆ. ಹಾಡು, ನೃತ್ಯಗಳ ಮೂಲಕ ಹೊಳಿ ಹಬ್ಬಕ್ಕೆ ರಂಗು ತುಂಬಲಾಗುತ್ತದೆ.
ಏಳನೇ ದಿನ ಎಲ್ಲೂರು ಬಾಳಕೊಡ್ಲು ಮರಾಠಿ ಮುಖಂಡ ನಾರಾಯಣ ಮರಾಠಿ ಅವರ ಮನೆಯಲ್ಲಿ ಸಿದ್ದೇಶ್ವರ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಈ ಸಂದರ್ಭದಲ್ಲಿ ದೇವರನ್ನು ಆಹ್ವಾನಿಸಿಕೊಂಡು ಮುರಾಠಿ ಸಮುದಾಯದರ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳಲಾಗುತ್ತದೆ. ದೇವರಿಗೆ ಹರಕೆ ಅರ್ಪಿಸಿದ ಬಳಿಕ ಅಲ್ಲಿಂದ ಊರಿನ ದುರ್ಗಾಪರಮೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಲಾಗುತ್ತದೆ. ಕೊನೆಯಲ್ಲಿ ಹಣಬು ಸುಡುವ ಸಂಪ್ರದಾಯವೂ ನಡೆಯುತ್ತದೆ. ಕುಂದಾಪ್ರ ಡಾಟ್ ಕಾಂ ವರದಿ
ಹೋಳಿ ಕುಣಿತದಲ್ಲಿ ವೃದ್ಧರು, ಯುವಕರೆನ್ನದೇ ಎಲ್ಲರೂ ಒಟ್ಟಾಗಿ ಭಾಗವಹಿಸುತ್ತಾರೆ. ಎಲ್ಲಿಯೇ ಉದ್ಯೋಗದಲ್ಲಿರಲಿ ಒಂದು ವಾರಗಳ ಕಾಲ ಊರಿಗೆ ಬಂದು ದೇವರ ಕಾರ್ಯದಲ್ಲಿ ಶ್ರದ್ಧೆಯಿಂದ ಭಾಗವಹಿಸುತ್ತಾರೆ.
ಅಜ್ಜ ಅಜ್ಜಿ ಕಾಲದಿಂದ ನಡೆದು ಬಂದ ಆಚರಣೆ ಇದೆ. ಸಿದ್ದೇಶ್ವರನೇ ನಮಗೆ ಅಧಿದೈವ. ಆತನನ್ನು ಬಿಟ್ಟು ಬೇರೆ ದೇವರನ್ನು ನಂಬುವುದಿಲ್ಲ. ಹಾಗಾಗಿ ಹೋಳಿ ಇದೇ ದೊಡ್ಡ ಆಚರಣೆ. ಇದನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರುತ್ತಿದ್ದೇವೆ. ನಮ್ಮ ಸಮುದಾಯದ ಎಲ್ಲರೂ ಒಗ್ಗಟ್ಟಾಗಿ ಸೇರಿ ಹೋಳಿ ಹಬ್ಬವನ್ನು ಆಚರಿಸುತ್ತೇವೆ. – ಅಣ್ಣಪ್ಪ ಮರಾಠಿ ಎಲ್ಲೂರು
ಮರಾಠಿ ಸಮುದಾಯದ ತಲಾತಲಾಂತರದಿಂದ ಈ ಆಚರಣೆ ನಡೆದುಬಂದಿದೆ. ನಮ್ಮ ಸಮುದಾಯದಲ್ಲಿ ಈಗ ಹಲವಾರು ಮಂದಿ ವಿದ್ಯಾವಂತರಿದ್ದಾರೆ. ಉತ್ತಮ ನೌಕರಿಯಲ್ಲಿರುವವರೂ ಇದ್ದಾರೆ. ಆದರೆ ಅವರೆಲ್ಲರೂ ಶ್ರದ್ಧೆಯಿಂದ ಈ ಹಬ್ಬದಲ್ಲಿ ಭಾಗವಹಿಸುತ್ತಾರೆ. ಮನೆ ಮನೆ ತಿರುಗಾಡಿ ಕೊನೆಗೆ ದೇವರಿಗೆ ಪೂಜೆ ಸಲ್ಲಿಸುವವರೆಗೂ ನಾವು ಒಗ್ಗಟ್ಟಾಗಿ ಪಾಲ್ಗೊಳ್ಳುತ್ತೇವೆ. – ಗೋಪಾಲ ಮರಾಠಿ ಎಲ್ಲೂರು