ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ
ಕುಂದಾಪುರ: ತಾಲೂಕಿನ ತಲ್ಲೂರಿನಲ್ಲಿ ನೂತನವಾಗಿ ನಿರ್ಮಿಸಿದ ಕರ್ನಾಟಕದ ಮೊದಲ ನಕ್ಷತ್ರಾಕಾರದ ಚರ್ಚ್ ಎಂಬ ಖ್ಯಾತಿಗೆ ಪಾತ್ರವಾಗಿರುವ ‘ಸಂತ ಫ್ರಾನ್ಸಿಸ್ ಆಸಿಸಿ ಚರ್ಚ್’ ಮೇ 12ರಂದು ಲೋಕಾರ್ಪಣೆಗೆ ಸಿದ್ಧಗೊಂಡಿದ್ದು, ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಧ್ಯಕ್ಷ ಅತಿ ವಂದನೀಯ ಡಾ ಜೆರಾಲ್ಡ್ ಐಸಾಕ್ ಲೋಬೊ ಅವರು ಲೋಕಾರ್ಪಣೆಗೊಳಿಸಿ ಕೃತಜ್ಞಾತ ಬಲಿಪೂಜೆಯನ್ನು ನೆರವೇರಿಸಲಿದ್ದಾರೆ.
ಕರ್ನಾಟಕದ ಮೊದಲ ನಕ್ಷತ್ರಾಕಾರದ ಚರ್ಚ್:
ಕ್ರೈಸ್ತ ಧರ್ಮಿಯರಲ್ಲಿ ನಕ್ಷತ್ರ ಆರಾಧನೆಗೆ ವಿಶೇಷ ಸ್ಥಾನವಿದೆ. ಯೇಸುವಿನ ಜನನದ ವಾರ್ತೆಯನ್ನು ನಕ್ಷತ್ರದ ಮೂಲಕವೇ ಪಂಡಿತರಿಗೆ ತಲುಪಿಸಲಾಗಿತ್ತು ಎಂಬ ಐತಿಹ್ಯ ನಕ್ಷತ್ರಕ್ಕೆ ಪವಿತ್ರ ಸ್ಥಾನವನ್ನೊದಗಿಸಿದೆ. ಇದೇ ಕಾರಣದಿಂದ ತಲ್ಲೂರಿನಲ್ಲಿ ಸಂತ ಫ್ರಾನ್ಸಿಸ್ ಅಸಿಸಿ ಚರ್ಚ್ ಮರುನಿರ್ಮಾಣ ಮಾಡುವಾಗ ನಕ್ಷಾತ್ರಕಾರದ ವಿನ್ಯಾಸವನ್ನು ಅಳವಡಿಸಿಕೊಂಡಿದ್ದು, ಕರ್ನಾಟಕದಲ್ಲಿ ಈ ವಿನ್ಯಾಸವನ್ನು ಹೊಂದಿದ ಪ್ರಥಮ ಚರ್ಚ್ ಎಂಬ ಹೆಗ್ಗಳಿಕೆಗೆಗೂ ಪಾತ್ರವಾದಂತಾಗಿದೆ. ಚರ್ಚಿನ ಒಳಭಾಗದಲ್ಲಿಯೂ ಸುತ್ತಲೂ ನಕ್ಷತ್ರದ ಆಕಾರಗಳು ಕಂಗೊಳಿಸುತ್ತಿದ್ದು, ಸಂಪೂರ್ಣ ಚರ್ಚಿನ ವಿನ್ಯಾಸ ಮನಸೂರೆಗೊಳಿಸುವಂತಿದೆ.
ಚರ್ಚಿನ ಒಳಗೆ ವಿಸ್ತಾರವಾದ ಬಲಿಪೀಠವನ್ನು ನಿರ್ಮಿಸಲಾಗಿದ್ದು, ಬಲಿಪೀಠದ ಎರಡು ಭಾಗದಲ್ಲಿ ಮೇರಿ ಮಾತೆ ಹಾಗೂ ಸಂತ ಫ್ರಾನ್ಸಿನ್ಸಿ ಆಸಿಸಿಯವರ ಪ್ರತಿಮೆಗಳನ್ನು ನಿರ್ಮಿಸಲಾಗಿದೆ. ಚರ್ಚಿನಲ್ಲಿ ಏಕಕಾಲದಲ್ಲಿ 600 ಭಕ್ತಾದಿಗಳು ಪ್ರಾರ್ಥನೆ ಸಲ್ಲಿಸಲು ಅವಕಾಶವಿದ್ದು, 10,800 ಚದರ ಅಡಿ ವಿಸ್ತಿರ್ಣವನ್ನು ಹೊಂದಿದೆ. ಮೂರು ಕಡೆಯಿಂದ ಪ್ರವೇಶ ದ್ವಾರಗಳನ್ನು ಹೊಂದಿದ್ದು, ಇಡೀ ಚರ್ಚಿಗೆ ಒಂದೇ ಫ್ಯಾನನ್ನು ಉಪಯೋಗಿಸಲಾಗಿದೆ. ನೂತನ ಚರ್ಚಿನ ವಿನ್ಯಾಸವನ್ನು ರೂಪಿಸಿದ ಶಿಲ್ಪಿ ಕೇರಳದವರಾಗಿದ್ದು, ಪ್ರಸ್ತುತ ಇಂಜಿನಿಯರ್ ಸಂದೀಪ್ ಆಲ್ಮೇಡಾ ಮೇಲುಸ್ತುವಾರಿ ನೋಡಿಕೊಂಡಿದ್ದರು. ಕುಂದಾಪ್ರ ಡಾಟ್ ಕಾಂ ವರದಿ.
ಪುರಾತನ ಚರ್ಚಿಗೆ ಹೊಸ ಕಳೆ:
ತಲ್ಲೂರಿನಲ್ಲಿರುವ ಸಂತ ಫ್ರಾನ್ಸಿಸ್ ಆಸಿಸಿ ಚರ್ಚಿಗೆ 87 ವರ್ಷಗಳ ಇತಿಹಾಸವಿದೆ. 1927 ರ ಸಮಯದಲ್ಲಿ ಕ್ರೈಸ್ತಸಮುದಾಯಕ್ಕೆ ಪ್ರಾರ್ಥನೆಗೆ ದೇವಾಲಯದ ಕೊರತೆಯಿದ್ದಾಗ 1928 ರಲ್ಲಿ ಕುಂದಾಪುರದ ಅಂದಿನ ಧರ್ಮಗುರುಗಳಾದ ವಂ ಪೀಟರ್ ರೆಮೆಜಿಯಸ್ ಡಿ’ಸೋಜಾ ಅವರು ತಲ್ಲೂರಿನಲ್ಲಿ ಚಿಕ್ಕ ಸ್ಥಳವನ್ನು ಪಡೆದು ಪುಟ್ಟ ಮುಳಿಹುಲ್ಲಿನ ಕಟ್ಟಡವನ್ನು ನಿರ್ಮಿಸಿ ಪ್ರಾರ್ಥನೆಗೆ ಅವಕಾಶ ಮಾಡಿಕೊಟ್ಟಿದ್ದರು. 1959 ರಲ್ಲಿ ಚರ್ಚಿನ ಜನರ ಶ್ರಮದ ಫಲವಾಗಿ ನೂತನ ದೇವಾಲಯ ನಿರ್ಮಾಣಗೊಂಡು ಈ ವರೆಗೆ 19 ಧರ್ಮಗುರುಗಳು ಇಲ್ಲಿ ಸೇವೆಯನ್ನು ನೀಡಿರುತ್ತಾರೆ. ಪ್ರಸ್ತುತ ವಂ. ಸುನಿಲ್ ವೇಗಸ್ ಅವರು ಇಲ್ಲಿನ ಪಾಲನಾ ಸೇವೆಯನ್ನು ನೀಡುತ್ತಿದ್ದಾರೆ. ಅಲ್ಲದೆ ಉಡುಪಿ ಹಾಗೂ ಮಂಗಳೂರು ಧರ್ಮಪ್ರಾಂತ್ಯದಲ್ಲಿ ಸಂತ ಫ್ರಾನ್ಸಿಸ್ ಅಸಿಸಿ ಪಾಲಕರಿಗೆ ಸಮರ್ಪಿಸಿದ ಏಕೈಕ ಚರ್ಚು ಹೊಂದಿದ ಕೀರ್ತಿ ತಲ್ಲೂರಿಗೆ ಸಲ್ಲುತ್ತದೆ. ಕುಂದಾಪ್ರ ಡಾಟ್ ಕಾಂ ವರದಿ.
ತಲ್ಲೂರು ಚರ್ಚಿನ ವ್ಯಾಪ್ತಿಯಲ್ಲಿ ತಲ್ಲೂರು, ಉಪ್ಪಿನಕುದ್ರು, ಹೆಮ್ಮಾಡಿ, ದೇವಲ್ಕುಂದ ಹಾಗೂ ಹಟ್ಟಿಯಂಗಡಿಯನ್ನೋಳಗೊಂಡ ಐದು ಗ್ರಾಮಗಳು ಸೇರಿದ್ದು, 220 ಕುಟುಂಬಗಳಲ್ಲಿ 896 ಕ್ರೈಸ್ತ ವಿಶ್ವಾಸಿಗಳನ್ನು ಚರ್ಚು ಹೊಂದಿದೆ. ಚರ್ಚಿನಲ್ಲಿ ಕೆಥೊಲಿಕ್ ಸಭಾ, ವಿನ್ಸೆಂಟ್ ದಿ ಪಾವ್ಲ್ ಸಭೆ, ಫ್ರಾನ್ಸಿಸ್ಕನ್ ಸಭೆ, ವೈಸಿಎಸ್, ವೇದಿ ಸೇವಕರುಗಳು ಸಂಘಟನೆ ಯಲ್ಲದೆ ೧೮ ವಿವಿಧ ಆಯೋಗಗಳು, 8 ವಾಳೆಗಳನ್ನು ಹೊಂದಿದೆ. 80 ವರ್ಷಗಳನ್ನು ಪೊರೈಸಿದ ಚರ್ಚಿಗೆ ನೂತನ ಕಟ್ಟಡದ ಅವಶ್ಯಕತೆಯನ್ನು ಅರಿತ ಚರ್ಚಿನ ಭಕ್ತಾದಿಗಳು ನೂತನ ದೇವಾಲಯವನ್ನು ನಿರ್ಮಿಸುವ ಯೋಜನೆಗೆ ಪಣತೊಟ್ಟರು. ೨೦೧೨ರಲ್ಲಿ ನೂತನ ಚರ್ಚಿಗೆ ಶಿಲನ್ಯಾಸವನ್ನು ನೇರವೇರಿಸಿ ಸುಮಾರು ರೂ 3.5 ಕೋಟಿ ವೆಚ್ಚದ ಚರ್ಚಿನ ಕೆಲಸಕ್ಕೆ ಚಾಲನೆ ನೀಡಲಾಗಿತ್ತು.
ಮೇ.12ರಂದು ಲೋಕಾರ್ಪಣೆ:
ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾದ ಅತಿ ವಂದನೀಯ ಡಾ ಜೆರಾಲ್ಡ್ ಐಸಾಕ್ ಲೋಬೊ ಅವರು ಮೇ.12ರ ಬೆಳಿಗ್ಗೆ 9ಗಂಟೆಗೆ ಲೋಕಾರ್ಪಣೆಗೊಳಿಸಿ ಕೃತಜ್ಞಾತ ಬಲಿಪೂಜೆಯನ್ನು ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವು ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ಸಾವಿರಾರು ಮಂದಿ ಭಕ್ತವೃಂದ ಭಾಗವಹಿಸಿಲಿದ್ದಾರೆ. ಬಳಿಕ ನಡೆಯಲಿರುವ ಸಭೆಯಲ್ಲಿ ಧಧ್ಯಕ್ಷರಾದ ಅತಿ ವಂದನೀಯ ಡಾ ಜೆರಾಲ್ಡ್ ಐಸಾಕ್ ಲೋಬೊ ಅವರು ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಮುಖ್ಯಮಂತ್ರಿ, ಬೈಂದೂರು-ಶಿವಮೊಗ್ಗ ಸಂಸದ ಬಿ ಎಸ್ ಯಡ್ಯೂರಪ್ಪ, ಕುಂದಾಪುರ ವಲಯ ಪ್ರಧಾನ ಧರ್ಮಗುರು ವಂ ಅನಿಲ್ ಡಿ’ಸೋಜಾ, ಬೈಂದೂರು ಶಾಸಕ ಗೋಪಾಲ ಪೂಜಾರಿ, ವಿಧಾನಪರಿಷತ್ ಸದಸ್ಯರಾದ ಪ್ರತಾಪ್ಚಂದ್ರ ಶೆಟ್ಟಿ ಮತ್ತು ಕೋಟ ಶ್ರೀನಿವಾಸ ಪೂಜಾರಿ, ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಬಿಲ್ಲವ, ಹಟ್ಟಿಯಂಗಡಿ ಸಿದ್ದಿವಿನಾಯಕ ದೇವಳದ ಧರ್ಮದರ್ಶಿ ಶ್ರಿ ವೇದಮೂರ್ತಿ ವಿದ್ವಾನ್ ರಾಮಚಂದ್ರ ಭಟ್, ಮಾವಿನಕಟ್ಟೆ ಆಲ್ ಬದ್ರಿಯ ಜುಮಾ ಮಸೀದಿಯ ಕತೀಬರಾದ ಬಿ ಎ ಇಸ್ಮಾಯಿಲ್ ಮದನಿ ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ಸಾಮೂಹಿಕ ಭೋಜನ ನಡೆಯಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಾ ಪರ್ಕ ಕಲಾವಿದರಿಂದ ಹೇಳುವಂತದಲ್ಲ ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ. / ಕುಂದಾಪ್ರ ಡಾಟ್ ಕಾಂ ವರದಿ /
The newly built Karnataka’s First star-shaped church of St Francis Assisi, Tallur will be inaugurated on Wednesday, May 12 at 9 am. Inauguration will be done by Most Rev Dr Gerald Isaac Lobo Bishop of Udupi Diocese. Later Rev Dr Gerald Isaac Lobo Bishop of Udupi Diocese, will offer the first Eucharistic service in the new church in the presence of priests, nuns, and thousands of people— Christians as well as non-Christians.