ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಆಟವಾಡಲೆಂದು ಕೆರೆಯ ಸಮೀಪ ತೆರಳಿದ್ದ ಇಬ್ಬರು ಮಕ್ಕಳು ಹಾಗೂ ಅವರನ್ನು ರಕ್ಷಿಸಲೆಂದು ತೆರಳಿದ ತಂದೆಯೂ ಸೇರಿದಂತೆ ಮೂವರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಸಿದ್ಧಾಪುರ ಸಮೀಪದ ಉಳ್ಳೂರು-74ರಲ್ಲಿ ವರದಿಯಾಗಿದೆ. ಐರ್ಬೈಲು ನಿವಾಸಿ ರಾಘವೇಂದ್ರ ಕಿಣಿ (38) ಹಾಗೂ ಅವರ ಮಕ್ಕಳಾದ ಪ್ರಕಾಶ್ (13), ಯೋಗೀಶ್ (12) ಮೃತ ದುರ್ದೈವಿಗಳು. ಕುಂದಾಪ್ರ ಡಾಟ್ ಕಾಂ.
ಘಟನೆಯ ವಿವರ
ರಾಘವೇಂದ್ರ ಕಿಣಿ ಅವರ ಇಬ್ಬರು ಮಕ್ಕಳು ತಮ್ಮ ಮನೆಯ ಸಮೀಪದಲ್ಲಿರುವ ತೋಟಕ್ಕೆ ಸ್ನೇಹಿತರೊಂದಿಗೆ ಆಟವಾಡಲೆಂದು ತೆರಳಿದ್ದರು. ಆಟವಾಡುತ್ತಾ ಕೆರೆ ಸಮೀಪ ಬಂದಾಗ ಪ್ರಕಾಶನ ಕಾಲು ಜಾರಿ ಕೆರೆಗೆ ಬಿದ್ದಿದ್ದ. ಆತನ್ನು ರಕ್ಷಿಸಲು ಯೋಗೀಶ್ ಕೂಡ ಕೆರೆಗೆ ಇಳಿದನಾದರೂ ಇಬ್ಬರೂ ಕೆರೆಯಲ್ಲಿ ಮುಳುಗುತ್ತಿದ್ದರು. ಇದನ್ನು ಕಂಡ ಆತನ ಸ್ನೇಹಿತರು ಕೂಗಿಕೊಳ್ಳಲಾರಂಭಿದ್ದ. ಕೂಗಾಟ ಕೇಳಿದ ರಾಘವೇಂದ್ರ ಕಿಣಿ ಮನೆಯಿಂದ ಓಡಿಬಂದು ನೋಡಿದ್ದಾರೆ. ಆಳವಿದ್ದ ಕೆರೆಯಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಅವರೂ ಕೆರೆಗೆ ಇಳಿದಿದ್ದಾರೆ. ಆದರೆ ಆಳವಿದ್ದ ಕೆರೆಯಲ್ಲಿ ಅವರೂ ಸ್ಥಿಮಿತ ಕಳೆದುಕೊಂಡು ಮೂವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.
ರಾಘವೇಂದ್ರ ಕಿಣಿ ಮೂಲತಃ ಹೊಸನಗರ ತಾಲೂಕಿನ ಜೈನಗರದವರಾಗಿದ್ದು ಐರ್ಬೈಲಿನ ತನ್ನ ಜ್ಯೋತಿ ಎಂಬುವವರೊಂದಿಗೆ ವಿವಾಹವಾದ ಬಳಿಕೆ ಅವರ ಮನೆಯಲ್ಲಿಯೇ ವಾಸವಾಗಿದ್ದರು. ಅಡುಗೆ ಹಾಗೂ ಕೃಷಿ ಕೆಲಸವನ್ನು ಮಾಡಿಕೊಂಡಿದ್ದರು. ಕಿಣಿ ಅವರ ಅಡುಗೆ ಈ ಪರಿಸರದಲ್ಲಿ ಬಹಳ ಜನಪ್ರಿಯವಾಗಿತ್ತು. ಇವರ ಮಕ್ಕಳಾದ ಯೋಗೀಶ್ ಆರನೇ ತರಗತಿ ಪಾಸಾಗಿದ್ದರೇ, ಯೋಗೀಶ್ ಏಳನೇ ತರಗತಿಗೆ ಪಾಸಾಗಿದ್ದರು. ಮೃತ ರಾಘವೇಂದ್ರ ಅವರ ಐರ್ಬೈಲು ಮನೆಯಲ್ಲಿ ಮಡದಿ, ಅತ್ತೆ, ಮಾವ ವಾಸವಿದ್ದರು. ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ, ವೃತ್ತ ನಿರೀಕ್ಷಕ ದಿವಾಕರ್, ಶಂಕರನಾರಾಯಣ ಠಾಣಾಧಿಕಾರಿ ಸುನಿಲ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಸಾವಿನಲ್ಲೂ ಒಟ್ಟಿಗೇ ಹೋದರು:
ಮೃತ ರಾಘವೇಂದ್ರ ಕಿಣಿ ಅವರಿಗೆ ತನ್ನ ಮಕ್ಕಳೆಂದರೆ ಪಂಚಪ್ರಾಣ. ಒಂದು ದಿನವೂ ಅವರನ್ನು ಬಿಟ್ಟಿರುತ್ತಿರಲಿಲ್ಲ. ಮಕ್ಕಳಿಗೆ ಶಾಲೆಗೆ ರಜೆ ಇದ್ದಾಗಲೆಲ್ಲ ತನ್ನೊಂದಿಗೆ ಅಡುಗೆಗೂ ಕರೆದುಕೊಂಡು ಹೋಗುತ್ತಿದ್ದರು. ಕಿಣಿಯವರಿಗೆ ಮಕ್ಕಳು ನೀರಿನಲ್ಲಿ ಮುಳುಗುತ್ತಿರುವುದನ್ನು ನೋಡಿದಾಗಲೇ ಆಘಾತವಾಗಿತ್ತು. ಮಕ್ಕಳ ರಕ್ಷಣೆಗೆ ಇಳಿದವರು ಬದುಕಿ ಬರಲೇ ಇಲ್ಲ. ಮಕ್ಕಳನ್ನು ಹಚ್ಚಿಕೊಳ್ಳುತ್ತಿದ್ದ ತಂದೆ ಸಾವಿನಲ್ಲೂ ಜೊತೆಯಾದರು. ಆದರೆ ಗಂಡ ಮಕ್ಕಳ ಸಾವು ರಾಘವೇಂದ್ರ ಪತ್ನಿ ಹಾಗೂ ಕುಟುಂಬಿಕರನ್ನು ಕಂಗೆಡಿಸಿದೆ.
ಘಟನಾ ಸ್ಥಳಕ್ಕೆ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸುಕುಮಾರ ಶೆಟ್ಟಿ, ಜಿಪಂ ಸದಸ್ಯ ತಾರಾನಾಥ ಶೆಟ್ಟಿ ಭೇಟಿನೀಡಿ ಸಂತಾಪ ಸೂಚಿಸಿದ್ದಾರೆ. / ಕುಂದಾಪ್ರ ಡಾಟ್ ಕಾಂ ಸುದ್ದಿ. /