ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಮಣ ದೇವರ ದಿವ್ಯ ಸನ್ನಿಧಿಯಲ್ಲಿ ಸರ್ವ ಭಜಕವೃಂದ ಹಾಗೂ ಲೋಕಕಲ್ಯಾಣಾರ್ಥವಾಗಿ ಪ್ರಪ್ರಥಮ ಬಾರಿಗೆ ಮೇ.21ರ ಸಂಜೆ 6:46ರ ಗೊಧೋಳಿ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ.
ಶ್ರೀನಿವಾಸ ಕಲ್ಯಾಣೋತ್ಸವದ ಧಾರ್ಮಿಕ ಕ್ರಿಯಾಚರಣೆ ಅಂಗವಾಗಿ ಬೆಳಿಗ್ಗೆ ೭ಕ್ಕೆ ಉಭಯ ದೇವರಿಗೆ ಪೂಜೆಯ ನಂತರ ನಗರೋತ್ಸವ ಶ್ರೀನಿವಾಸ ಪದ್ಮಾವತಿ ದೇವರ ಆಗಮನ, ಸೀಮಂತ ಪೂಜೆ, ಸಾಮೂಹಿಕ ಕುಂಕುಮಾರ್ಚನೆ ಹಾಗೂ ಶ್ರೀವೆಂಕಟರಮಣ ಭಜನಾ ಮಂಡಳಿ ಮೂಡಬಿದಿರೆ ಇವರಿಂದ ಭಕ್ತಿಸಂಗೀತ ನಡೆಯಲಿದೆ.
ಸಾಯಂಕಾಲ ವೇದಿಕೆಗೆ ಶ್ರೀ ವೆಂಕಟರಮಣನ ಆಗಮನ, ವಧೂ ನಿರೀಕ್ಷಣೆ, ಶ್ರೀ ಪದ್ಮಾವತಿಯ ಆಗಮನ, ಸ್ವಯಂವರ ಕಾರ್ಯ, ಅರಶಿನ-ಕುಂಕುಮ ಸಮರ್ಪಣೆ, ಧಾರೆಮಣಿ ಕಟ್ಟುವಿಕೆ, ಶ್ರೀನಿವಾಸ ದೇವರಿಗೆ ಮಧುಪರ್ಕ ಸಮರ್ಪಣೆ, ಮಹೂರ್ತ ನಿರೀಕ್ಷೆ, ಮಾಲಾಧಾರಣೆ, ಕನ್ಯಾದಾನ, ಕಂಕಣ, ಮಂಗಲಸೂತ್ರ ಧಾರಣೆ, ಚಿನ್ನಾಭರಣಾಧಿ ಕಪ್ಪ-ಕಾಣಿಕೆಗಳ ಸಮರ್ಪಣೆ, ಅಗ್ನಿ ಪ್ರತಿಷ್ಟಾಪೂರ್ವಕ ಪ್ರಧಾನ ಹೋಮ, ಪ್ರಸನ್ನ ಪೂಜೆ, ಅಷ್ಟಾವಧಾನ ಸೇವೆಗಳ ಬಳಿಕ ಕಲ್ಯಾಣೋತ್ಸವದ ಕೃಷ್ಣಾರ್ಪಣವಾಗಿ ಮಹಾ ಮಂತ್ರಾಕ್ಷತೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಭಟ್ಕಳದ ಉದಯ ಪ್ರಭು ಮತ್ತು ಬಳಗದವರು ಕಲ್ಯಾಣೋತ್ಸವದ ಕೀರ್ತನೆಗಳನ್ನ ಸಂಯೋಜಿಸಿದ್ದಾರೆ.
ಈ ಸಮಾರಂಭಕ್ಕೆ ಎ.25ಕ್ಕೆ ಚಾಲನೆ ನೀಡಿದ್ದು, ಜನ್ಮೋತ್ಸವ, ಜಾತಕರ್ಮ, ನಾಮಕರಣ, ತೊಟ್ಟಿಲು ಸೇವೆ, ಅನ್ನಪ್ರಾಶನ, ನಿಶ್ಚಿತಾರ್ಥ, ದೀಕ್ಷಾಬಂಧನ, ಕಂಕಣಬಂಧನ, ಸಮಾವರ್ಥನೆ, ಉದ್ದಿನ ಮುಹೂರ್ತ, ಜರುಗಿದೆ. ವಧು-ವರರ ಕಡೆಯಿಂದ ದೇವನಾಂದಿ ಸಂಪನ್ನಗೊಂಡಿದೆ. ಈ ನೆಲೆಯಲ್ಲಿ ಪ್ರತಿದಿನ ಧಾರ್ಮಿಕ ಕಾರ್ಯಗಳು ನಡೆಯುತ್ತಿದೆ.