ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ದುಡಿಯುವವರಿಗೆ ಹತ್ತಾರು ತೊಡಕುಗಳು ಎದುರಾಗುವುದು ಸಹಜ. ಅವುಗಳನ್ನು ಸವಾಲಿನಂತೆ ಸ್ವೀಕರಿಸಿ ಮುನ್ನುಗ್ಗಿದರೆ ಗುರಿ ಸಾಧನೆ ಸಾಧ್ಯವಾಗುತ್ತದೆ. ಕ್ರೀಯಾತ್ಮಕ ಚಟುವಟಿಕೆಗಳಿಂದ ಸಂಘಟನೆಯ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಲು ಸಾಧ್ಯ ಎಂದು ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಪರ್ಕಳ ಅರುಣ್ ಭಂಡಾರಿ ಹೇಳಿದರು.
ಉಪ್ಪುಂದ ಶಾಲೆಬಾಗಿಲು ಮಾತೃಶ್ರೀ ಸಭಾಭವನದಲ್ಲಿ ನಡೆದ ಸವಿತಾ ಸಮಾಜದ ವಾರ್ಷಿಕ ಮಹಾಸಭೆ, ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ನಮ್ಮ ಸಮಾಜದವರು ಈಗ ಎಲ್ಲಾ ಕ್ಷೇತ್ರಗಳಲ್ಲಿ ಸ್ವಲ್ಪ ಮಟ್ಟಿನ ಸುಧಾರಣೆ ಕಾಣುತ್ತಿದ್ದಾರೆ. ನಮಗೆ ಜಾತಿ ಪ್ರಜ್ಞೆ ಇಲ್ಲದಿದ್ದರೆ ಏನೂ ಸಾಧಿಲಾಗದು. ಈ ದಿಸೆಯಲ್ಲಿ ಸಂಘಟನೆಯ ಮೂಲಕ ಒಗ್ಗಟ್ಟಿನಿಂದ ಹೋರಾಟಮಾಡಿ ನಮ್ಮ ಸವಲತ್ತುಗಳನ್ನು ಕೇಳಿ ಪಡೆಯಬೇಕು. ನಮ್ಮ ಮುಂದಿನ ಪೀಳಿಗೆಗೆ ಕುಲಕಸುಬುಗಳ ಅರಿವು ಮೂಡಿಸುವ ಅನಿವಾರ್ಯತೆಯಿದೆ ಎಂದರು.
ಬೈಂದೂರು ವಲಯ ಸವಿತಾ ಸಮಾಜದ ಅಧ್ಯಕ್ಷ ಗೋಪಾಲ ಮಲ್ಯ ಅಧ್ಯಕ್ಷತೆವಹಿಸಿದ್ದರು. ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.೮೦ಕ್ಕಿಂತ ಅಧಿಕ ಅಂಕಗಳಿಸಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಾಗೂ ಎಲ್ಲಾ ಮಕ್ಕಳಿಗೆ ಉಚಿತ ನೋಟ್ಸ್ ಪುಸ್ತಕಗಳನ್ನು ವಿತರಿಸಲಾಯಿತು. ಸವಿತಾ ಸಮಾಜದ ನಿಕಟಪೂರ್ವ ಜಿಲ್ಲಾಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ, ಹಿರಿಯ ವೃತ್ತಿಬಾಂಧವ ಮಹಾಬಲ ಭಂಡಾರಿ ಯಳಜಿತ್ ಇವರನ್ನು ಸನ್ಮಾನಿಸಲಾಯಿತು.
ಸಮಾಜದ ತಾಲೂಕು ಅಧ್ಯಕ್ಷ ಸುಭಾಷ್ ಭಂಡಾರಿ ಗುಜ್ಜಾಡಿ, ಪ್ರಧಾನ ಕಾರ್ಯದರ್ಶಿ ಸುಜಯ್ ಸುವರ್ಣ ವಕ್ವಾಡಿ, ಮಲ್ಪೆ ವಲಯಾಧ್ಯಕ್ಷ ಭಾಸಕ್ರ ಭಂಡಾರಿ ಗುಡ್ಡೆಅಂಗಡಿ, ಅರುಣ್ ಭಂಡಾರಿ ಬೈಕಾಡಿ ಉಪಸ್ಥಿತರಿದ್ದರು. ಬೈಂದೂರು ಪ್ರಶಾಂತ ಭಂಡಾರಿ ಸ್ವಾಗತಿಸಿ, ಉಪ್ಪುಂದ ಸಂತೋಷ್ ಭಂಡಾರಿ ವಂದಿಸಿದರು. ರಾಧಾಕೃಷ್ಣ ಮಲ್ಯ ಉಪ್ಪುಂದ ನಿರೂಪಿಸಿದರು.