ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಮೂರು ಕೈ ರಾಷ್ಟ್ರೀಯ ಹೆದ್ದಾರಿ ಯಲ್ಲಿ ೪೦೭ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಢಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದ ಪಾದಚಾರಿ ನಾರಾಯಣ ಬಳೆಗಾರ್ ಅವರು ಚಿಕಿತ್ಸೆಗೆ ಸ್ಪಂದಿಸದೇ ಮಣಿಪಾಲ ಖಾಸಗಿ ಆಸ್ಪತ್ರೆಗೆ ಕೊನೆಯುಸಿರೆಳೆದಿದ್ದಾರೆ.
ಕಳೆದ ಗುರುವಾರ ಸಂಜೆ ಉಡುಪಿ ಕಡೆಯಿಂದ ವೇಗವಾಗಿ ಬಂದ ೪೦೭ ವಾಹನವು ಕೋಟ ಮೂರು ಕೈ ಬಳಿಯ ಬ್ಯಾರಿಕೇಡ್ ಗಮನಿಸದೆ, ಹಠಾತ್ ಬ್ರೇಕ್ ಹಾಕಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಬ್ಯಾರಿಕೇಡ್ ಗೆ ಢಿಕ್ಕಿ ಹೊಡೆದು, ಯೂ ಟರ್ನ್ ದಾಟಿ ಪಲ್ಟಿಯಾಗಿತ್ತು. ಇದೇ ಸಂದರ್ಭದಲ್ಲಿ ರಸ್ತೆ ದಾಟುತ್ತಿದ್ದ ಕೋಟದ ಜೋಗಿ ಸಮಾಜದ ಅಧ್ಯಕ್ಷ ನಾರಾಯಣ ಬಳೇಗಾರ್ ಅವರಿಗೆ ಢಿಕ್ಕಿ ಹೊಡೆದು ಅವರು ಗಂಭೀರವಾಗಿ ಗಾಯಗೊಂಡಿದ್ದರು. ವಾಹನದ ಚಾಲಕ ಮತ್ತು ನಿರ್ವಾಹಕರೀರ್ವರು ಗಂಭೀರವಾಗಿ ಗಾಯಗೊಂಡಿದ್ದರು.
ಘಟನೆಗೆ ತುರ್ತಾಗಿ ಸ್ಪಂದಿಸಿದ್ದ ನ್ಯಾಯವಾದಿ ಬನ್ನಾಡಿ ಸೋಮನಾಥ ಹೆಗ್ಡೆ ಅವರು ತಮ್ಮ ಕಾರಿನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದರು. ತಲೆ ಭಾಗದಲ್ಲಿ ಗಂಭೀರವಾಗಿ ಗಾಯವಾದ ಹಿನ್ನಲೆ ನಾಲ್ಕು ದಿನಗಳ ಕಾಲ ಮಣಿಪಾಲದಲ್ಲಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ ನಾರಾಯಣ ಬಳೆಗಾರ ಅವರು ಸೋಮವಾರ ವಿಧಿವಶರಾಗಿದ್ದಾರೆ.
೫೫ ವರ್ಷ ಪ್ರಾಯದ ನಾರಾಯಣ ಬಳೆಗಾರ ಅವರು ಜೋಗಿ ಸಮಾಜದ ಹಿರಿಯ ಮುಖಂಡರಾಗಿದ್ದು, ಕೋಟ ಶ್ರೀ ಅಮೃತೇಶ್ವರಿ ದೇವಸ್ಥಾನದ ಅರ್ಚಕ ಪ್ರತಿನಿಧಿಯಾಗಿ, ಟ್ರಸ್ಟ್ಯಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೇ ಅಖಿಲ ಕರ್ನಾಟಕ ಜೋಗಿ ಸಮಾಜದ ಅಧ್ಯಕ್ಷರಾಗಿ, ಕರ್ನಾಟಕ ಸರಕಾರದ ಧಾರ್ಮಿಕ ಪರಿಷತ್ನ ಉಡುಪಿ ಜಿಲ್ಲಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಮೂವರು ಪುತ್ರಿ ಮತ್ತು ಓರ್ವ ಪುತ್ರನನ್ನು ಅಗಲಿದ್ದು.
ನಾರಾಯಣ ಬಳೆಗಾರ್ ಅವರ ಆಕಸ್ಮಿಕ ಮರಣಕ್ಕೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿ ಆನಂದ ಸಿ.ಕುಂದರ್, ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಕೋಟ ಸಿಎ ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ ಕಂಬನಿ ಮಿಡಿದಿದ್ದಾರೆ.
Read this
ನಿಯಂತ್ರಣ ತಪ್ಪಿ ಮಗುಚಿದ ಟೆಂಪೋ: ಚಾಲಕ, ನಿರ್ವಾಹಕ, ಪಾದಾಚಾರಿಗೆ ಗಂಭೀರ ಗಾಯ – http://kundapraa.com/?p=14479