▪ ಜಿ. ಸುರೇಶ್ ಪೇತ್ರಿ | ಕುಂದಾಪ್ರ ಡಾಟ್ ಕಾಂ ಸಂದರ್ಶನ
ಬಡಗುತಿಟ್ಟು ಯಕ್ಷರಂಗ ಕಂಡ ಅಪ್ರತಿಮ ಕಲಾವಿದರಲ್ಲಿ ತೀರ್ಥಹಳ್ಳಿ ಗೋಪಾಲ ಆಚಾರ್ಯರು ಒಬ್ಬರು. ಯಕ್ಷಗಾನ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿದ ಮಹಾನ್ ಕಲಾವಿದ. ಇಳಿವಯಸಿನಲ್ಲಿಯೂ ದಣಿವು ಅರಿಯದ ಚಿರಯುವಕ. ರಂಗಕ್ಕೆ ಅಡಿ ಇಡುತ್ತಲೆ ಮಿಂಚಿನ ಸಂಚಾರ. 60 ರ ಅಭಿಮನ್ಯುನಾಗಿ ವೇಷಕಟ್ಟಿದರೂ 20 ರ ಅಭಿಮನ್ಯುನಾಗಿ ಅಭಿಮಾನಿ ವರ್ಗದವರಿಗೆ ಸಿಡಿಲಮರಿಯಾಗಿ ಕಾಣಿಸಿಕೊಳ್ಳುವ ಯಕ್ಷರಂಗದ ಅಗ್ರಣಿ.
ಮಲೆನಾಡಿನ ತೀರ್ಥಹಳ್ಳಿಯ ಕುರುವಳ್ಳಿಯಲ್ಲಿ ವಾಸುದೇವ ಆಚಾರ್ಯ ಹಾಗೂ ಸುಲೋಚನಾ ದಂಪತಿಗಳ 5 ಮಕ್ಕಳಲ್ಲಿ ಎರಡನೆಯವರು. ತನ್ನ ಮೂಲ ಕಸುಬಾದ ಬಡಗಿ ವೃತ್ತಿಯನ್ನು ಬಿಟ್ಟು ಬಡಗುತಿಟ್ಟಿನ ಯಕ್ಷಗಾನವನ್ನು ಆರಿಸಿಕೊಂಡರು. ಊರು ತೀರ್ಥಹಳ್ಳಿಯಾದರೂ ಯಕ್ಷರಂಗದ ಹಾದಿಯನ್ನು ಆಯ್ಕೆ ಮಾಡಿಕೊಂಡದು ಯಕ್ಷಕಾಶಿ ಎನಿಸಿಕೊಂಡ ಕುಂದಾಪುರವನು. ಬೈಂದೂರಿನ ಸಮೀಪದ ನಾಯಕನಕಟ್ಟೆಯಲ್ಲಿ ವಾಸವಾಗಿರುವ ತೀರ್ಥಹಳ್ಳಿ ಯವರು ಓದಿದ್ದು 3ನೇ ತರಗತಿ ಆದರೂ ಅವರ ವಾಗ್ಭಂಢಾರ ಅಪಾರ. ಯಕ್ಷರಂಗದ ಒಂದೊಂದೇ ಮೆಟ್ಟಿಲೇರಿ ಅದ್ಭುತ ನೃತ್ಯ,ಲಯಬದ್ಧ ಹೆಜ್ಜೆಗಾರಿಕೆ ಸಭ್ಯ ಹಾಗೂ ಸುಸ್ಪಷ್ಟ ಮಾತುಗಾರಿಕೆ ಹೀಗೆ ಅಳೆಯಹೊರಟರೆ ಅವರೊಬ್ಬ ಯಕ್ಷರಂಗದ ಧ್ರುವತಾರೆ. ಕುಂದಾಪ್ರ ಡಾಟ್ ಕಾಂ ಸಂದರ್ಶನ.
ಸುಮಾರು 14ನೇ ವಯಸ್ಸಿನಲ್ಲಿ ಮಲೆನಾಡಿನ ಮೇಳವಾದ ರಂಜದಕಟ್ಟೆ ಮೇಳದಲ್ಲಿ ಕಾಲಿಗೆ ಗೆಜ್ಜೆ ಕಟ್ಟಿ ಹೆಜ್ಜೆ ಹಾಕಿದ ತೀರ್ಥಹಳ್ಳಿ ಯವರ ಮುಂದಿರುವುದು ಯಕ್ಷರಂಗದಿಂದ ಕಂಡುಕೇಳಿ ಕಲಾನೈಪುಣ್ಯತೆಯನು ಎತ್ತಿ ತೋರಿಸಿದವರು. ಬಾಲಗೋಪಾಲ, ಪೀಟಿಕಾ ಸ್ರೀವೇಷ, ಪುರುಷ ವೇಷ, ಪುಂಡುವೇಷದಿಂದ ಮೊದಲ್ಗೊಂಡು ಪ್ರತಿಯೊಂದು ಪ್ರಸಂಗದ ಪಾತ್ರಕ್ಕೂ ನ್ಯಾಯ ಒದಗಿಸಬಲ್ಲಅಭಿಜಾತ ಕಲಾವಿದ.
ಗುರು ತೀರ್ಥಹಳ್ಳಿ ಕೃಷ್ಣೋಜಿರಾಯರಿಂದ ಕಲಿಕೆ:
ಶಿರಿಯಾರ ಮಂಜುನಾಯಕರಂತಹ ಶ್ರೇಷ್ಠಕಲಾವಿದರಿಂದ ಕಲಿತ ಪ್ರೌಡಿಮೆ ನೆಲ್ಲೂರು ಮರಿಯಪ್ಪ ಆಚಾರ್, ನರಸಿಂಹದಾಸ್, ಕಾಳಿಂಗನಾವುಡ, ಸುಬ್ರಹ್ಮಣ್ಯ ಧಾರೇಶ್ವರ, ಸದಾಶಿವ ಅಮೀನ್, ಶಂಕರ್ ಭಾಗವತ, ದುರ್ಗಪ್ಪಗುಡಿಗಾರಂತಹ ಹಿರಿಯ ಹಿಮ್ಮೇಳ ಕಲಾವಿದರಲ್ಲದೆ ಚಿಟ್ಟಾಣಿ, ಜಲವಳ್ಳಿ,ಐರೊಡಿ, ಮುಖ್ಯಪ್ರಾಣ ಮುಂತಾದ ಹಿರಿಯ ದಿಗ್ಗಜರ ಒಡನಾಟದಲ್ಲಿ ಹಾಗೂ ರಾಮನಾಯಿರಿ,ಆರಾಟೆ ಮಂಜುನಾಥ, ಭಾಸ್ಕರಜೋಶಿ, ನಿಲ್ಗೋಡು ,ಯಲಗುಪ್ಪ ಮುಂತಾದ ಸ್ತ್ರಿವೇಷದಾರಿಗಳಿಗೆ ಜೋಡಿ ವೇಷದಾರಿಯಾಗಿ ಮೆರೆದವರು. ಅದರಲ್ಲಿ ರಾಮನಾಯಿರಿ-ತೀರ್ಥಹಳ್ಳಿ ಜೋಡಿಯಂತು ಪ್ರತಿಯೊಂದು ವಿಭಾಗದಲ್ಲೂ ಹೇಳಿಮಾಡಿಸಿದ ಜೋಡಿಯಾಗಿತ್ತು. ಕುಂದಾಪ್ರ ಡಾಟ್ ಕಾಂ ಸಂದರ್ಶನ
1970 ರಲ್ಲಿ ರಂಜದಕಟ್ಟೆಮೇಳದಿಂದ ಯಕ್ಷ ವೃತ್ತಿಯನ್ನು ಆರಂಭಿಸಿದ ತೀರ್ಥಹಳ್ಳಿ ಯವರು ನಾಗರಕೊಡುಗೆ, ಶಿರಸಿ ಪಂಚಲಿಂಗೇಶ್ವರ, ಗೋಳೆಗರಡಿ, ಸಾಲಿಗ್ರಾಮ ಹಾಗೂ ಪೆರ್ಡೂರು ಮೇಳದಲ್ಲಿ ಸುದೀರ್ಘ 31 ವರ್ಷ ಯಕ್ಷ ತಿರುಗಾಟ ಮಾಡಿದ ತೀರ್ಥಹಳ್ಳಿಯವರು ಅದೆ ಮೇಳದಿಂದ ಮುಂದಿನ ಯಕ್ಷತಿರುಗಾಟಕ್ಕೆ ವಿದಾಯ ಹೇಳಿದ್ದಾರೆ.
ನಾಗಶ್ರೀ ಪ್ರಸಂಗದ ಶೈಥಿಲ್ಯನ ಪಾತ್ರದ ಪುಂಡುವೇಷ ದಿಂದ ಗುರುತಿಕೊಂಡ ಆಚಾರ್ಯರು 60 ರ ಹರೆಯದಲ್ಲೂಅಭಿಮನ್ಯುನಾಗಿ ಕೋಲ್ಮಿಂಚು ಹರಿಸಿದವರು.ಪೌರಾಣಿಕ ಪ್ರಸಂಗದ ಭಭ್ರುವಾಹನ, ಸುಧನ್ವ, ಲವಕುಶ, ಮೈಂದದಿವಿದ ಪಾತ್ರವಲ್ಲದೆ ಹೊಸ ಪ್ರಸಂಗದ ಪ್ರತಿಯೊಂದು ಪಾತ್ರಕ್ಕೆ ನ್ಯಾಯ ಒದಗಿಸಬಲ್ಲ ಶ್ರೇಷ್ಠಕಲಾವಿದ. ಆಳ್ತನದ ಕೊರತೆಯಿಂದ ಮುಂಡಾಸುವೇಷಕ್ಕೆ ಒಗ್ಗಿಕೊಳ್ಳದ ತೀರ್ಥಹಳ್ಳಿ ಯವರು ನೆಲ್ಲೂರು ಮರಿಯಪ್ಪ ಆಚಾರ್, ಮರವಂತೆ ನರಸಿಂಹದಾಸ್, ಕಾಳಿಂಗನಾವುಡ, ಸದಾಶಿವ ಅಮೀನ್, ಸುಬ್ರಹ್ಮಣ್ಯ ದಾರೇಶ್ವರ, ರಾಘವೇಂದ್ರ ಆಚಾರಂತಹ ಹಲವು ತಲೆಮಾರಿನ ಶ್ರೇಷ್ಠ ಭಾಗವತರ ಪದ್ಯಕ್ಕೆ ಹೆಜ್ಜೆ ಹಾಕಿದ ಅಪ್ರತಿಮ ನೃತ್ಯಗಾರ.
ತನ್ನ ಕಲಾಜೀವನದ 46 ವರ್ಷ ಬಡಗುತಿಟ್ಟು ಯಕ್ಷರಂಗದಲಿ ಶ್ರೇಷ್ಠ ಕಲಾವಿದರಾಗಿ ಲಕ್ಷೋಪಲಕ್ಷ ಅಭಿಮಾನಿ ವರ್ಗದವರಿಗೆ ನಿತ್ಯ ನಿರಂತರ ಯಕ್ಷಕ್ರಾಂತಿ ನೋಡಲು ಸಿಗಲಾರದು. ಕುಂದಾಪುರದ ಬೈಂದೂರಿನ ಸಮೀಪದ ನಾಯಕನಕಕಟ್ಟೆಯ ಗೆಜ್ಜೆನಾದ ದಲ್ಲಿ ಪತ್ನಿ ಮಂಜುಳ ಏಕಮಾತ್ರ ಪುತ್ರ ನಿಧೇಶ್ ರೊಂದಿಗೆ ಪುಟ್ಟ ಸಂಸಾರದೊಂದಿಗೆ ವಿಶ್ರಾಂತಿ ಜೀವನ ನೆಡೆಸುವ ತೀರ್ಥಹಳ್ಳಿಯವರು ಸರಳ ಹಾಗೂ ಸೌಮ್ಯ ಸ್ವಭಾವದ ವ್ಯಕ್ತಿ. ಕುಂದಾಪ್ರ ಡಾಟ್ ಕಾಂ ಸಂದರ್ಶನ
ಹೀಗೆ ನಾಲ್ಕುವರೆ ದಶಕಗಳಿಂದ ಯಕ್ಷರಂಗದಲ್ಲಿ
ಕ್ರಾಂತಿ ಎಬ್ಬಿಸಿದ ಯಕ್ಷರಂಗದ ಸಿಡಿಲಮರಿ, ಯಕ್ಷರಂಗದ ಅಭಿನವ, ಯಕ್ಷಕಲಾರತ್ನ,ಯಕ್ಷಚೇತನ, ಯಕ್ಷಕೇಸರಿ,ವಿಶ್ವಕರ್ಮಪ್ರತಿಭಾಐಸಿರಿ,ಯಕ್ಷಗಾನ ಯಕ್ಷರಂಗದ ಚಿರಯುವಕ, ಕರಾವಳಿ ಕೇಸರಿ, ಮಲೆನಾಡ ನಾಟ್ಯಮಯೂರ ಎಂಬಿತ್ಯಾದಿ ಮೇರು ಬಿರುದಾವಳಿಗಳಲ್ಲದೆ ಹಲವಾರು ಸಂಘ ಸಂಸ್ಥೆಗಳ ಪ್ರಶಸ್ತಿಗಳಿಂದ ತೀರ್ಥಹಳ್ಳಿ ರವರ ಯಕ್ಷಬದುಕಿಗೊಂದು ಸಾರ್ಥಕದ ಕೀರ್ತಿಗೊಳಿಸಿಕೊಟ್ಟಿದೆ.\ಕುಂದಾಪ್ರ ಡಾಟ್ ಕಾಂ ಸಂದರ್ಶನ\
( ಲೇಖಕರು ಗಲ್ಫ್ ಉದ್ಯೋಗಿಯಾದ್ದು ಹವ್ಯಾಸಿ ಬರಹಗಾರರೂ ಆಗಿದ್ದಾರೆ. ಸುಮಾರು 30 ವರ್ಷದಿಂದ ಕನ್ನಡದ ಕೆಲವು ಪತ್ರಿಕೆಗಳಿಗೆ ಲೇಖನ ಬರೆಯುತ್ತಾ ಬಂದಿದ್ದಾರೆ.)