ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಸರ್ವರೂ ಪೂಜಿಪ ಗಣಪತಿಯ ವಿಗ್ರಹಗಳಿಗೆ ಎಲ್ಲೆಡೆಗೂ ಬಹು ಬೇಡಿಕೆ. ವೈವಿಧ್ಯಮಯ ವಿನ್ಯಾಸದ, ವಿವಿಧ ಗಾತ್ರದ ಗಣಪನ ಮೂರ್ತಿಗಳು ಕಲಾವಿದರ ಕೈಚಳಕದಲ್ಲರಳಿ ದೇಶಾದ್ಯಂತ ಪೂಜೆಗೆ ಅಣಿಯಾಗಿವೆ. ವಿಶೇಷವೆಂದರೆ ಕುಂದಾಪುರದಲ್ಲಿ ತಯಾರಾಗುವ ಗಣೇಶನ ಮೂರ್ತಿಯೊಂದು ಚೌತಿಯ ಸಮಯದಲ್ಲಿ ದೂರದ ಹೈದರಾಬಾದಿನಲ್ಲಿ ಭಕ್ತರಿಂದ ಪೂಜಿಸಲ್ಪಡುತ್ತಿದೆ.
ಕುಂದಾಪುರದಿಂದ ಹೈದರಾಬಾದಿಗೆ:
ಕುಂದಾಪುರದ ಶಿಲ್ಪಿ ವಸಂತ ಗುಡಿಗಾರ್ ಅವರು ತಯಾರಿಸಿದ ಗಣಪತಿಯ ವಿಗ್ರಹವೊಂದನ್ನು ಕಳೆದ ಮೂರು ವರ್ಷಗಳಿಂದ ಹೈದರಬಾದಿನಲ್ಲಿ ನೆಲೆಸಿರುವ ಕುಂದಾಪುರದ ಮೂಲದ ಉದ್ಯಮಿಯೋರ್ವರು ಕೊಂಡೊಯ್ಯುತ್ತಿದ್ದಾರೆ. ಮಣ್ಣಿನ ಗಣಪತಿಯ ಮೂರ್ತಿಯನ್ನೇ ಪ್ರತಿಷ್ಠಾಪಿಸುವ ಉದ್ದೇಶದಿಂದ ಕುಂದಾಪುರದಿಂದಲೇ ಮೂರ್ತಿಯನ್ನು ಕೊಂಡೊಯ್ಯುವ ಮೂಲಕ ಹುಟ್ಟೂರ ಪ್ರೇಮ ಮರೆಯುತ್ತಿದ್ದಾರೆ. ಹಬ್ಬಕ್ಕೆ ಎರಡು ದಿನವಿರುವಾಗಲೇ ಕುಂದಾಪುರದಿಂದ ಬಸ್ಸಿನಲ್ಲಿ ಹೊರಟ ಗಣಪತಿ ವಿಗ್ರಹ ಹೈದರಾಬಾದ್ನಲ್ಲಿ ಪೂಜೆಗೆ ಅಣಿಯಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ.
ಗುಡಿಗಾರರ ಗಣಪನಿಗೆ ಭಾರಿ ಬೇಡಿಕೆ:
ವಸಂತ ಗುಡಿಗಾರ್ ಅವರ ಗಣಪತಿ ವಿಗ್ರಹಗಳಿಗೆ ಎಲ್ಲೆಡೆಯಿಂದಲೂ ಭಾರಿ ಬೇಡಿಕೆಯಿದೆ. ಕುಂದಾಪುರ ಹಳೆ ಬಸ್ ನಿಲ್ದಾಣದ ಬಳಿಯ ಕಟ್ಟಡವೊಂದರಲ್ಲಿ ಪ್ರತಿವರ್ಷ 25ಕ್ಕೂ ಮಿಕ್ಕಿ ಗಣಪತಿ ಮೂರ್ತರೂಪ ಪಡೆಯುತ್ತವೆ. ಮಣ್ಣಿನ ವಿಗ್ರಹಕ್ಕೆ ಜಲವರ್ಣವನ್ನು ಬಳಸಿ ಸುಂದರ ರೂಪ ನೀಡುವ ಗಣಪನಿಗೆ ಕುಂದಾಪುರದ ಆಸುಪಾನಿಂದ ಹಿಡಿದು ದೂರ ದೂರದ ಊರುಗಳಿಂದಲೂ ಬೇಡಿಕೆ ಇದೆ. ನಾಗರ ಪಂಚಮಿಯಂದು ಭಕ್ತರು ಅಕ್ಕಿ, ಕಾಯಿ ಹಾಗೂ ಗಣಪತಿಯ ಮಣೆಯನ್ನು ನೀಡಿ ಮೂರ್ತಿ ತಯಾರಿಗೆ ಬೇಡಿಕೆಯಿಡುತ್ತಾರೆ. ಅಲ್ಲಿಂದ ನಿರಂತರವಾಗಿ ಒಂದು ತಿಂಗಳುಗಳ ಕಾಲ ಗಣಪತಿ ಮೂರ್ತಿ ರಚನೆಯಲ್ಲಿ ತೊಡಗಿಕೊಳ್ಳುತ್ತಾರೆ. ಇವರೊಂದಿಗೆ 7-8ಮಂದಿ ಇವರ ಕಾರ್ಯಕ್ಕೆ ಸಾಥ್ ನೀಡುತ್ತಾರೆ. 12 ಇಂಚಿನಿಂದ 5ಅಡಿಯ ವರೆಗೂ ವಿವಿಧ ಗಾತ್ರ ಹಾಗೂ ಆಕಾರದ ಗಣಪತಿಯ ಮೂರ್ತಿಗಳನ್ನು ಇಲ್ಲಿ ತಯಾರಾಗುತ್ತವೆ. ಒಂದೂವರೆ ಸಾವಿರದಿಂದ ವಿವಿಧ ಮೂರ್ತಿಯ ಬೆಲೆಗನುಗುಣವಾಗಿ ದರ ನಿಗದಿಗೊಳಿಸಿಗಿದೆ. ಕುಂದಾಪ್ರ ಡಾಟ್ ಕಾಂ ವರದಿ.
32 ವರ್ಷಗಳ ಕಾಯಕ:
ಸಂಬಂಧಿಯೋರ್ವರು ಗಣಪತಿ ವಿಗ್ರಹವನ್ನು ತಯಾರಿಸುವುದನ್ನು ನೋಡಿ ಕಲಿತ ವಸಂತ ಗುಡಿಗಾರ್, 17ನೇ ವರ್ಷದಿಂದಲೇ ಸ್ವತಃ ವಿಗ್ರಹಗಳನ್ನು ತಯಾರಿಸುವಲ್ಲಿ ತೊಡಗಿಕೊಂಡವರು. ವಿಗ್ರಹ ರಚಿಸುವುದರಿಂದ ಗ್ರಾಹಕರಿಗೆ ಹಸ್ತಾಂತರಿಸುವ ತನಕವೂ ಶಾಸ್ತ್ರೋಕ್ತ ವಿಧಿಗಳನ್ನು ಪಾಲಿಸುತ್ತಾ ಶ್ರದ್ಧೆಯಿಂದ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಕಾಷ್ಠಶಿಲ್ಪಿಯಾಗಿರುವ ಗುಡಿಗಾರ್, ಮರದ ಕೆತ್ತನೆ, ದೇವಾಲಯಗಳಿಗೆ ಕಲ್ಲು ಕೆತ್ತನೆ ಮುಂತಾದ ಕೆಲಸಗಳಲ್ಲಿ ತೊಡಗಿಕೊಂಡರೇ, ಚೌತಿಗೂ ಒಂದು ತಿಂಗಳ ಪೂರ್ವದಲ್ಲಿ ಗಣಪತಿ ವಿಗ್ರಹ ರಚನೆಯಲ್ಲಿ ತೊಡಗಿಕೊಳ್ಳುತ್ತಾರೆ. ಆವೆ ಮಣ್ಣು ಹಾಗೂ ಜಲವರ್ಣ ಬಳಸಿ ತಯಾರಿಸುವ ವಿಗ್ರಹಗಳ ಉತ್ಸಾದನಾ ವೆಚ್ಚವೇ ಹೆಚ್ಚಿರುವುದರಿಂದ ಮೂರ್ತಿಗಳ ಗಾತ್ರಕ್ಕನುಗುಣವಾಗಿ ಬೆಲೆ ನಿಗದಿಗೊಳಿಸಿದ್ದಾರೆ/ಕುಂದಾಪ್ರ ಡಾಟ್ ಕಾಂ ವರದಿ/