ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಕೊರಗ ಸಂಪ್ರದಾಯದ ಸಾಂಸ್ಕೃತಿಕ ಕೊಂಡಿಯಾಗಿ, ಕೊರಗರ ಸಮುದಾಯದ ಸಂಪ್ರದಾಯ, ಸಂಸ್ಕೃತಿಯನ್ನು ಸಂಗೀತದ ಮೂಲಕ ಅನಾವರಣಗೊಳಿಸುತ್ತಾ ಇಂದಿಗೂ ನಮ್ಮ ನಡುವೆ ಜನಜನಿತರಾಗಿರುವ ಹಿರಿಯಜ್ಜ ಮರವಂತೆಯ ಭುಜಂಗ ಕೊರಗ.
ಭುಜಂಗ ಅವರು ಸಾಮಾಜಿಕವಾಗಿ ನಿರ್ಲಕ್ಷಕ್ಕೆ ಒಳಗಾದ ಮತ್ತು ಕಡುಬಡತನದ ಕೊರಗ ಸಮುದಾಯದಿಂದ ಬಂದವರು. ಕುಲಕಸುಬಾದ ಬೀಳು, ಬಿದಿರಿನ ಕೃಷಿಉಪಯೋಗಿ ಸಾಮಗ್ರಿಗಳನ್ನು ತಯಾರಿಸಿ ಮಾರುವ ಮತ್ತು ಕೊರಗರ ಸಾಂಪ್ರದಾಯಿಕ ವಾದನದ ತಂಡದಲ್ಲಿ ದುಡಿಯುವ ಮೂಲಕ ಬದುಕುಸವೆಸಿದವರು. ಈ ವಾದನ ತಂಡದ ಡೋಲು, ಚೆಂಡೆ ಬಾರಿಸುವುದರಲ್ಲೂ ಕುಶಲಿಗರಾಗಿರುವ ಅವರು ಕೊಳಲು ನುಡಿಸುವುದರಲ್ಲಿ ವಿಶೇಷ ಪರಿಣತಿ ಸಾಧಿಸಿದರು. ತಮ್ಮದೇ ಆದ ತಂಡದ ನೇತೃತ್ವ ವಹಿಸಿ ಊರ, ಪರ ಊರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತ ಬಂದವರು.
ಅವರ ವಾದನ ಕಲಾಪರಿಣತಿಯನ್ನು ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಕಲೆಗಳಿಗೆ ಸಂಬಂಧಿಸಿದ ಸ್ಥಳೀಯ ಮಟ್ಟದಿಂದಾರಂಭಸಿ, ರಾಜ್ಯಮಟ್ಟದ ವರೆಗಿನ ಹಲವು ಕಾರ್ಯಕ್ರಮಗಳಲ್ಲಿ ಬಳಸಿಕೊಳ್ಳಲಾಗಿದೆ. ತಮ್ಮ ಕಲಾ ಪ್ರಕಾರದ ತರಬೇತುದಾರರಾಗಿಯೂ ಅವರು ಕೆಲಸಮಾಡಿದ್ದಾರೆ. ತಮ್ಮ ಪರಿಣತಿಗಾಗಿ ಹತ್ತಾರು ಸನ್ಮಾನಗಳನ್ನೂ ಅವರು ಪಡೆದಿದ್ದಾರೆ. ಅಷ್ಟೇ ಅಲ್ಲದೇ ಈ ಭಾರಿ ಅವರಿಗೆ ಈ ಸಾಲಿನ ರಾಜ್ಯ ಜಾನಪದ ಅಕಾಡೆಮಿಯ ಪ್ರಶಸ್ತಿ ದೊರೆತಿರುವುದು ಅವರ ಕಲಾಪ್ರೌಢಿಮೆಗೆ ಸಂದ ಗೌರವವೇ ಸರಿ. © ಕುಂದಾಪ್ರ ಡಾಟ್ ಕಾಂ.