ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾಗೂರಿನ ಕುಸುಮಾ ಫೌಂಡೇಶನ್ ಪ್ರತಿವರ್ಷ ನೀಡುವ ‘ಕುಸುಮಶ್ರೀ’ ಪ್ರಶಸ್ತಿಗೆ ಈ ಬಾರಿ ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಅವರನ್ನು ಆಯ್ಕೆಮಾಡಲಾಗಿದೆ. ಡಿಸೆಂಬರ್ 22, 23ರಂದು ನಡೆಯುವ ಕುಸುಮಾಂಜಲಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಫೌಂಡೇಶನ್ ಸಂಸ್ಥಾಪಕ ನಳಿನಕುಮಾರ ಶೆಟ್ಟಿ ಭಾನುವಾರ ತಮ್ಮ ಕಚೇರಿಯಲ್ಲಿ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಇದನ್ನು ಪ್ರಕಟಿಸಿದರು.
ಈ ಬಾರಿ ಕುಸುಮಾಂಜಲಿ ಕಾರ್ಯಕ್ರಮವನ್ನು ಎರಡು ದಿನ ನಡೆಸಲಾಗುವುದು. ಎರಡೂ ದಿನ ಬೆಳಿಗ್ಗೆ ೧೦ರಿಂದ ರಾತ್ರಿ ೧೦ರ ವರಗೆ ಅವಿರತವಾಗಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಗಾಯನ, ಸಂಗೀತ ಸಂಧ್ಯಾ, ನಾಟ್ಯಾಂಜಲಿ ಪ್ರಸ್ತುತಗೊಳ್ಳುವುವು. ಖ್ಯಾತ ಗಾಯಕಿ ಅರ್ಚನಾ ಉಡುಪ, ಪ್ರಸಿದ್ಧ ಹಿನ್ನೆಲೆ ಗಾಯಕ ಅಜಯ ವಾರಿಯರ್, ಈ ವರ್ಷದ ಗಾನಕುಸುಮ ಪ್ರಶಸ್ತಿ ವಿಜೇತರು, ಸ್ಪರ್ಧೆಯಲ್ಲಿ ಭಾಗವಹಿಸಿದ ಕಿರಿಯ ಕಲಾವಿದರು ಗಾಯನ ಪ್ರಸ್ತುತಪಡಿಸುವರು. ಕೆರೆಮನೆ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ಯಕ್ಷಗಾನ, ಬೆಂಗಳೂರಿನ ತಂಡದಿಂದ ಭರತನಾಟ್ಯ ಪ್ರದರ್ಶನಗೊಳ್ಳುವುದು. ಮಂಗಳೂರಿನ ಸಾಯಿ ಆರ್ಟ್ಸ್ ತಂಡದ ಕಥಕ್ ಮತ್ತ ಭರತನಾಟ್ಯ ನಡೆಯುವುದು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಶಿಖರೋಪನ್ಯಾಸ ಮಾಡುವರು ಎಂದು ಅವರು ತಿಳಿಸಿದರು.
ಈ ವರ್ಷದ ಕಾರ್ಯಕ್ರಮವನ್ನು ಪರಿಸರದಲ್ಲಿ ಸಾಂಸ್ಕೃತಿಕ ಎಚ್ಚರವನ್ನು ಮೂಡಿಸುವ ಉದ್ದೇಶದಿಂದ ಅದ್ದೂರಿಯಾಗಿ, ಆದರೆ ಶಿಸ್ತುಬದ್ಧವಾಗಿ ನಡೆಸಲಾಗುವುದು. ಪರಿಸರದ ಕೃಷಿ, ಕಲೆ ಬಿಂಬಿಸುವ ಪ್ರದರ್ಶನದ ಜತೆಗೆ ಗೃಹನಿರ್ಮಾಣ ಸಾಮಗ್ರಿಗಳ ಎಕ್ಸ್ಪೊ ಏರ್ಪಡಿಸಲಾಗುವುದುತು. ಶಿಕ್ಷಣ, ಸಂಸ್ಕೃತಿ ಕುರಿತು ವಿಚಾರ ಸಂಕಿರಣ ನಡೆಸಲಾಗುವುದು ಎಂದರು.
ಇದೇ ವೇಳೆ ಕುಸುಮಾ ಫೌಂಡೇಶನ್ನ ಸಾಧನೆಗಳನ್ನು ಬಿಂಬಿಸುವ ಮತ್ತು ಪ್ರಸಕ್ತ ವರ್ಷದ ಕುಸುಮಾಂಜಲಿ ಕಾರ್ಯಕ್ರಮದ ಮಾಹಿತಿ ಒಳಗೊಂಡ ಪುಸ್ತಿಕೆಯನ್ನು ಬೈಂದೂರು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಜನಾರ್ದನ ಬಿಡುಗಡೆಗೊಳಿಸಿದರು. ವಿಶ್ವಸ್ಥ ಸುಧಾಕರ ಶೆಟ್ಟಿ, ಆಮಂತ್ರಿತರಾಗಿದ್ದ ಎಚ್. ವಸಂತ ಹೆಗ್ಡೆ, ಪ್ರಭಾಕರ ಶೆಟ್ಟಿ, ಕರುಣಾಕರ ಶೆಟ್ಟಿ, ವಿಶ್ವನಾಥ ಶೆಟ್ಟಿ, ಈಶ್ವರ ದೇವಾಡಿಗ, ಫಾರೂಕ್ ಸಾಹೇಬ್, ತುಲಸಿದಾಸ ಗಡಿಯಾರ್ ಇದ್ದರು.