ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಹಾಗೂ ರೈಲ್ವೆ ಯಾತ್ರಿಕರಿಗೆ ಉತ್ತಮ ಸೌಲಭ್ಯ ನೀಡುವ ನಿಟ್ಟಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಅವರು ಕೊಂಕಣ ರೈಲ್ವೆ ನಿಗಮದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಂಜಯ ಗುಪ್ತಾ ಅವರೊಂದಿಗೆ ಮಾತುಕತೆ ನಡೆಸಿದರು.
ಬೈಂದೂರು ರೈಲ್ವೆ ನಿಲ್ದಾಣದಲ್ಲಿ ಅವರನ್ನು ಭೇಟಿಯಾದ ಸಂಸದರು ರೈಲ್ವೆ ನಿಲ್ದಾಣ ಮೇಲ್ದರ್ಜೆ, ಮಂಗಳ ಎಕ್ಸ್ಪ್ರೆಸ್ ರೈಲು ನಿಲುಗಡೆ, ಟ್ಯಾಕ್ಸಿ ರಿಕ್ಷಾ ಸ್ಟ್ಯಾಂಡ್ ಅಭಿವೃದ್ಧಿ, ಎ.ಟಿಎಂ ಸೌಲಭ್ಯ, ರೈಲ್ವೆ ಗೇಟ್ ಎಲ್.ಸಿ-೭೩ಗೆ ಅಂಡರ್ ಬ್ರಿಡ್ಜ್ ಹಾಗೂ ರೈಲ್ವೆ ಟ್ರ್ಯಾಕ್ ಡಬ್ಲಿಂಗ್ ಬಗ್ಗೆ ಪ್ರಸ್ತಾಪಿಸಿದರು.
ಇದಕ್ಕೆ ಎಂಡಿ ಸಂಜಯ ಗುಪ್ತಾ ಪ್ರತಿಕ್ರಿಯಿಸಿ ತೌಕೂರಿನಿಂದ ಬೈಂದೂರು ತನಕ ಸುಮಾರು ೧೪೧ಕಿ.ಮೀ ರೈಲ್ವೆ ಟ್ರ್ಯಾಕ್ ಪ್ಯಾಚ್ ಡಬ್ಲಿಂಗ್ಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದು ಕ್ಯಾಬಿನೆಟ್ನಲ್ಲಿದೆ. ಎಟಿಎಂ ಸೌಲಭ್ಯವನ್ನು ಒದಗಿಸಿಕೊಡುವ ವ್ಯವಸ್ಥೆ ಮಾಡಲಾಗುವುದು. ರೈಲ್ವೆ ನಿಲ್ದಾಣದ ಬಳಿಯ ಟ್ಯಾಕ್ಸಿ, ರಿಕ್ಷಾ ಸ್ಟ್ಯಾಂಡ್ ಅಭಿವೃದ್ಧಿಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಎಲ್ಸಿ ಗೇಟ್ ೭೩ಗೆ ಅಂಡರ್ಬ್ರಿಡ್ಜ್ ನಿರ್ಮಿಸಲು ತಗಲುವ ವೆಚ್ಚದಲ್ಲಿ ಅರ್ಧದಷ್ಟನ್ನು ಕೊಂಕಣ ರೈಲ್ವೆ ಬರಿಸಿದರೆ ಇನ್ನರ್ಧವನ್ನು ಸರಕಾರ ಭರಿಸಬೇಕಾಗುತ್ತದೆ ಎಂದ ಅವರು ಮಂಗಳ ಎಕ್ಸ್ಪ್ರೆಸ್ ನಿಲುಗಡೆಯ ಬಗ್ಗೆ ಬೋರ್ಡ್ ಮೀಟಿಂಗ್ನಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭ ರಾಪ್ಟ್ರೀಯ ರೈಲ್ವೆ ಪ್ರಯಾಣಿಕರ ಪರಾಮರ್ಶಕ ಸಮಿತಿ ಸದಸ್ಯ ಕೆ. ವೆಂಕಟೇಶ ಕಿಣಿ, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಸುರೇಶ್ ಬಟವಾಡಿ, ಬಾಬು ಶೆಟ್ಟಿ ತಗ್ಗರ್ಸೆ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ಸದಾನಂದ ಉಪ್ಪಿನಕುದ್ರು, ಕಾರ್ಯದರ್ಶಿ ದೀಪಕಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.