ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ರಂಗಭೂಮಿ ಶ್ರಮಜೀವಿಗಳ ಲೋಕ. ವೇದನೆಯನ್ನು ಹಾಡಾಗಿಸಿ, ಸಮುದಾಯವನ್ನು ತಲುಪುವ ಪ್ರಕ್ರಿಯೆಯಲ್ಲಿ ಅದು ನಿರತವಾಗಿದೆ. ಸುಖ:-ದುಖ:ವನ್ನು ಚಂದವಾಗಿ ಅಭಿವ್ಯಕ್ತಿಗೊಳಿಸಲು ರಂಗಭೂಮಿಯಿಂದ ಸಾಧ್ಯ ಎಂದು ಕುಂದಾಪುರ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ವಸಂತ ಬನ್ನಾಡಿ ಹೇಳಿದರು.
ಅವರು ಬೈಂದೂರು ಶಾರದಾ ವೇದಿಕೆಯಲ್ಲಿ ಶುಕ್ರವಾರ ಲಾವಣ್ಯ ರಿ. ಬೈಂದೂರು ಇದರ ೪೨ನೇ ವಾರ್ಷಿಕೋತ್ಸವ ಹಾಗೂ ದಿ. ಕೂರಾಡಿ ಸೀತಾರಾಮ ಶೆಟ್ಟಿ ಸಂಸ್ಮರಣೆಯ ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಲಾವಣ್ಯ ಒಳ ಹೊರಗೆ ತನ್ನದೇ ಆದ ಉತ್ಸಾಹಿ ಸಮುದಾಯವನ್ನು ಕಟ್ಟಿಕೊಂಡಿದೆ. ಚಲನಶೀಲತೆಯನ್ನು ಅಳವಡಿಸಿಕೊಂಡಿದ್ದರಿಂದಲೇ ವರ್ಷದಿಂದ ವರ್ಷಕ್ಕೆ ನಿರಂತರವಾಗಿ ಬೆಳೆಯುತ್ತಿದೆ ಎಂದರು.
ಲಾವಣ್ಯದ ಸದಸ್ಯ ಹಾಗೂ ಮಹಾಪೋಷಕ ವಿ. ಆರ್. ಬಾಲಚಂದ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಲಾವಣ್ಯ ಅಧ್ಯಕ್ಷ ಎಚ್. ಉದಯ ಆಚಾರ್ಯ ಅದ್ಯಕ್ಷತೆ ವಹಿಸಿದ್ದರು. ಸಂಗೀತ ಕಲಾವಿದ ಜಗದೀಶ ಆಚಾರ್ ಬೈಂದೂರು ಅವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಮೂಡುಗೋಪಾಡಿ ಶುಭಶಂಸನೆಗೈದರು. ಯಡ್ತರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೂಕಾಂಬಿಕಾ ದೇವಾಡಿಗ, ಬೈಂದೂರು ರೋಟರಿ ಅಧ್ಯಕ್ಷ ಐ. ನಾರಾಯಣ, ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ರಿ. ಬೈಂದೂರು ಇದರ ಮ್ಯಾನೆಜಿಂಗ್ ಟ್ರಸ್ಟೀ ಗೋವಿಂದ ಬಾಬು ಪೂಜಾರಿ, ಬೈಂದೂರು ಪ್ರಥ್ವಿ ಕ್ರೀಡಾ ಸಂಘದ ಅಧ್ಯಕ್ಷ ಜಯಾನಂದ ಹೋಬಳಿದಾರ್, ಉದ್ಯಮಿ ವಿಷ್ಣು ಪಡಿಯಾರ್, ಶಿಕ್ಷಕಿ ರಮ್ಯಾ ಶೆಟ್ಟಿ, ಲಾವಣ್ಯ ಗೌರವಾಧ್ಯಕ್ಷ ಯು. ಶ್ರೀನಿವಾಸ ಪ್ರಭು, ೪೦ರ ಸಂಭ್ರಮದ ಅಧ್ಯಕ್ಷ ಸದಾಶಿವ ಡಿ. ಪಡುವರಿ ಮೊದಲಾದವರು ವೇದಿಕೆಯಲ್ಲಿದ್ದರು.
ಕಾರ್ಯದರ್ಶಿ ಮೂರ್ತಿ ಡಿ. ಬೈಂದೂರು ವರದಿ ವಾಚಿಸಿದರು. ವ್ಯವಸ್ಥಾಪಕ ಗಣಪತಿ ಎಸ್. ಸ್ವಾಗತಿಸಿ, ಮುಖ್ಯ ಸಲಹೆಗಾರ ಗಿರೀಶ್ ಬೈಂದೂರು ವಂದಿಸಿದರು. ಮಂಜುನಾಥ ಶಿರೂರು ಕಾರ್ಯಕ್ರಮ ನಿರೂಪಿಸಿದರು.