ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಕ್ಕಳ ರಂಗ ತರಬೇತಿಯನ್ನು ಆಯೋಜಿಸುವ ಮೂಲಕ ಲಾವಣ್ಯವೇ ಹುಟ್ಟುಹಾಕಿದ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ದಾಟಿಸುವ ಕೆಲಸವನ್ನು ಹಲವು ವರ್ಷದಿಂದ ಯಶಸ್ವಿಯಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದು ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಜನಾರ್ದನ ಮರವಂತೆ ಹೇಳಿದರು.
ಅವರು ಮಂಗಳವಾರ ಇಲ್ಲಿನ ಶಾರದಾ ವೇದಿಕೆಯಲ್ಲಿ ಲಾವಣ್ಯ ರಿ. ಬೈಂದೂರು ಸಂಸ್ಥೆಯ ಮಕ್ಕಳ ರಂಗ ತರಬೇತಿ ಶಿಬಿರದಲ್ಲಿ ಸಿದ್ಧಗೊಂಡ ಗುಬ್ಬಿ ಹಾಡು ಹಾಗೂ ತಾಯಿಯ ಕಣ್ಣು ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.
ಲಾವಣ್ಯದ ನಿರ್ದೇಶಕರಾದ ಶ್ರೀನಿವಾಸ ಪ್ರಭು ಉಪ್ಪುಂದ ಉಪಸ್ಥಿತರಿದ್ದರು. ಈ ಸಂದರ್ಭ ಗುಬ್ಬಿ ಹಾಡು ನಾಟಕದ ನಿರ್ದೇಶಕ ನಾಗೇಂದ್ರ ಬಂಕೇಶ್ವರ ಹಾಗೂ ತಾಯಿಯ ಕಣ್ಣು ನಾಟಕದ ನಿರ್ದೇಶಕ ರೋಶನ್ ಕುಮಾರ್ ಅವರನ್ನು ಗೌರವಿಸಲಾಯಿತು. ಇತ್ತಿಚೆಗೆ ವಿವಾಹವಾದ ಲಾವಣ್ಯ ಕಲಾವಿದೆ ಚೈತ್ರಾ ಹಾಗೂ ಸತೀಶ್ ದಂಪತಿಗಳನ್ನು ಅಭಿನಂದಿಸಲಾಯಿತು.
ಲಾವಣ್ಯ ರಿ. ಬೈಂದೂರು ಅಧ್ಯಕ್ಷ ಎಚ್. ಉದಯ ಆಚಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಮೂರ್ತಿ ಡಿ. ಬೈಂದೂರು ಪ್ರಾರ್ಥಿಸಿದರು.