ಕುಂದಾಪ್ರ ಡಾಟ್ ಕಾಂ’ ಸುದ್ದಿ
ಬೈಂದೂರು: ವಿಮಾ ಸೌಲಭ್ಯ ನೀಡುವುದರ ಜತೆಯಲ್ಲಿ ದೇಶದ ಆರ್ಥಿಕ ಪ್ರಗತಿಗೆ ಅಗತ್ಯವಾದ ಸಂಪನ್ಮೂಲ ಕ್ರೋಢೀಕರಣ ಮಾಡುವಲ್ಲಿ ನೆರವಾಗುತ್ತಿರುವ ಭಾರತೀಯ ಜೀವ ನಿಗಮದ ನೌಕರರು ಮತ್ತು ವಿಮಾ ಪ್ರತಿನಿಧಿಗಳು ಅರ್ಥವ್ಯವಸ್ಥೆಯ ಕಾಲಾಳುಗಳು ಎಂದು ಅಂಕಣಕಾರ ಬೈಂದೂರು ಚಂದ್ರಶೇಖರ ನಾವಡರು ಹೇಳಿದರು.
ಅವರು ಇತ್ತೀಚೆಗೆ ಜೀವವಿಮಾ ನಿಗಮದ ಬೈಂದೂರು ಉಪಗ್ರಹ ಶಾಖೆಯಲ್ಲಿ ಏರ್ಪಡಿಸಿದ 63 ನೇ ವಿಮಾ ಸಪ್ತಾಹದ ಅಂಗವಾಗಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಮಾಜದ ವಿವಿಧ ವರ್ಗಗಳನ್ನು ದೃಷ್ಟಿಯಲ್ಲಿರಿಸಿಕೊಂಡು ನಿಗಮ ರೂಪಿಸುವ ಪ್ಲಾನ್ ಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮಹಾನ್ ಕಾರ್ಯ ಮಾಡುವ ವಿಮಾ ಪ್ರತಿನಿಧಿಗಳ ಸೇವೆಯನ್ನು ಅವರು ಪ್ರಶಂಸಿದರು.
ಶಾಖಾಧಿಕಾರಿ ಜಗದೀಶ ಶೆಟ್ಟಿ 1956ರಲ್ಲಿ ಭಾರತ ಸರ್ಕಾರದ ಕೇವಲ 5 ಕೋಟಿ ರೂ ಹೂಡಿಕೆಯೊಂದಿಗೆ ಪ್ರಾರಂಭಗೊಂಡ ನಿಗಮ ಇಂದು ಸುಮಾರು 31 ಲಕ್ಷ ಕೋಟಿ ರೂ ಆಸ್ತಿ ಹಾಗೂ ಅಂದಾಜು 28 ಲಕ್ಷ ಕೋಟಿ ರೂ ವಿಮಾನಿಧಿ ಹೊಂದಿದ ಬೃಹದ್ ಸಂಸ್ಥೆಯಾಗಿ ಬೆಳೆದ ಪ್ರೇರಣಾದಾಯಿ ಯಶೋಗಾಥೆಯ ಕುರಿತು ವಿವರಿಸಿ ಇದೆಲ್ಲದರ ಹಿಂದಿರುವ ವಿಮಾ ಪ್ರತಿನಿಧಿಗಳ ಕೊಡುಗೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಹಿರಿಯ ಪ್ರತಿನಿಧಿ ಭೋಜರಾಜ ಶೆಟ್ಟಿಯವರು ತಮ್ಮ ಅನುಭವವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಪ್ರತಿನಿಧಿಗಳು ಅಭಿವೃದ್ಧಿ ಅಧಿಕಾರಿಗಳಿಗೆ ಗುರುವಂದನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಾಲಾ ಮಕ್ಕಳಿಗೆ ಮತ್ತು ಪ್ರತಿನಿಧಿಗಳಿಗೆ ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಪರ್ಧೆ ಮತ್ತು ಕ್ವಿಜ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಸೋಮನಾಥನ್ ಆರ್ ಸ್ವಾಗತಿಸಿದರು. ಸತೀಶ್ ಡಿ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಸುರೇಶ್ ಪೂಜಾರಿಯವರು ರಸಪ್ರಶ್ನೆ ಕಾರ್ಯಕ್ರಮ ನಡೆಸಿದರು. ಉಪ ಆಡಳಿತಾಧಿಕಾರಿ ಮಂಜುನಾಥ್ ಕಾರ್ಯಕ್ರಮವನ್ನು ನಿರೂಪಿಸಿದರು.