ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬಿ.ಎ.ಎಂ.ಎಸ್ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಉಪ್ಪುಂದ ಗ್ರಾಮದಲ್ಲಿ ನಡೆದಿದೆ. ಉಪ್ಪಂದದ ರಕ್ಷಿತಾ (22) ಮೃತ ದುರ್ದೈವಿ.
ರಕ್ಷಿತಾ ಉದ್ಯಾವರದ ಆಯುರ್ವೇದಿಕ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಎ.ಎಮ್.ಎಸ್ ವ್ಯಾಸಂಗ ಮುಗಿಸಿ ಒಂದು ವಾರದ ಹಿಂದೆ ಮನೆಗೆ ಬಂದಿದ್ದು ಶುಕ್ರವಾರ ರಾತ್ರಿ ಬಿ.ಇ.ಎಮ್.ಎಸ್ ಅಂತಿಮ ವರ್ಷದ ಫಲಿತಾಂಶವನ್ನು ಆನ್’ಲೈನ್ ಮೂಲಕ ಮನೆಯವರೊಂದಿಗೆ ಸೇರಿ ನೋಡಿದ್ದಳು. ಈ ವೇಳೆ ಒಂದು ವಿಷಯದಲ್ಲಿ ಅನುತ್ತೀರ್ಣಳಾಗಿದ್ದುದು ತಿಳಿದುಬಂದಿದ್ದು ಮನನೊಂದು ಬೇಸರದಲ್ಲಿ ರಾತ್ರಿ ಸುಮಾರು 2 ಗಂಟೆಗೆ ಹೊತ್ತಿಗೆ ಮಲಗಿಕೊಂಡಿದ್ದಳು. ಬೆಳಿಗ್ಗೆ 06:30ರ ಸುಮಾರಿಗೆ ಮನೆಯವರು ಎದ್ದು ನೋಡಿದಾಗ ರಕ್ಷಿತಾ ಇಲ್ಲದೇ ಇದ್ದುದ್ದರಿಂದ ಹುಡುಕಾಟ ನಡೆಸಿದ್ದರು.
ಬಳಿಕ ಮನೆಯ ಎದುರಿನ ಬಾವಿಯಲ್ಲಿ ರಕ್ಷಿತಾ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ದಳದವರನ್ನು ಕರೆಯಿಸಿ ಮೃತ ಶರೀರವನ್ನು ಮೇಲಕ್ಕೆತ್ತಲಾಯಿತು. ರಕ್ಷಿತಾ ಬಿ.ಇ ಎಮ್.ಎಸ್ ಫಲಿತಾಂಶದಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣಳಾದ ಬಗ್ಗೆ ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.