ಗಂಗೊಳ್ಳಿ: ಮಾಂಸಕ್ಕಾಗಿ ಕೊಟ್ಟಿಗೆಯಿಂದ ಜಾನುವಾರುಗಳನ್ನು ಕಳವು ಮಾಡಿ ಸಾಗಿಸುತ್ತಿದ್ದ ಆರೋಪಿಯನ್ನು ಬಂಧಿಸಿ, ಸಾಗಾಟಕ್ಕೆ ಬಳಸಿದ್ದ ಮಾರುತಿ ಓಮ್ಮಿ ಕಾರನ್ನು ಮತ್ತು ಎರಡು ಜಾನುವಾರುಗಳನ್ನು ಗಂಗೊಳ್ಳಿ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ಮಹಮ್ಮದ್ ಹನೀಫ್ ಎಂದು ಗುರುತಿಸಲಾಗಿದ್ದು, ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಘಟನೆ ವಿವರ : ಕುಂದಾಪುರ ತಾಲೂಕಿನ ಹರ್ಕೂರು ಗ್ರಾಮದ ಹೊರಣಿ ಚಿತ್ತೇರಿ ಮಂಜುನಾಥ ಕಟ್ಟಿನಮಕ್ಕಿ ಎಂಬುವರ ಕೊಟ್ಟಿಗೆಯಿಂದ ಆರೋಪಿಗಳು ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಎರಡು ಜಾನುವಾರುಗಳನ್ನು ಕಳವು ಮಾಡಿಕೊಂಡು ಮಾರುತಿ ಓಮ್ನಿ ಕಾರಿನಲ್ಲಿ ತುಂಬಿಸಿಕೊಂಡು ಹೋಗುವಾಗ ಎಚ್ಚರಗೊಂಡ ಮಂಜುನಾಥ ಅವರು ಗಂಗೊಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಖಚಿತ ಮಾಹಿತಿ ಆಧರಿಸಿ ಗಂಗೊಳ್ಳಿ ಸಮೀಪದ ಗುಜ್ಜಾಡಿ ಜಂಕ್ಷನ್ ಬಳಿ ಮಾರುತಿ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದ ಸಂದರ್ಭ ಕಳವು ಮಾಡಿದ ಜಾನುವಾರುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಇದೇ ಸಂದರ್ಭ ಕಾರಿನಲ್ಲಿದ್ದ ಮಹಮ್ಮದ್ ಹನೀಫ್ ಎಂಬುವರನ್ನು ಬಂಧಿಸಲಾಗಿದ್ದು, ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. ಜಾನುವಾರುಗಳನ್ನು ಕಳವು ಮಾಡಿ ಮಾಂಸಕ್ಕಾಗಿ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಗಂಗೊಳ್ಳಿ ಪಿಎಸ್ಐ ಸುಬ್ಬಣ್ಣ, ಎಎಸ್ಐಗಳಾದ ಅಣ್ಣಯ್ಯ ಗೊಲ್ಲ, ರಾಮಕೃಷ್ಣ, ಸಿಬ್ಬಂದಿಗಳಾದ ರವೀಶ ಹೊಳ್ಳ, ಚಂದ್ರಶೇಖರ, ಮೋಹನ ಶಿರೂರು, ಅಶೋಕ ಶೆಟ್ಟಿ, ಅಶೋಕ ಪಾಲ್ಗೊಂಡಿದ್ದರು.